ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಮಲೇಷ್ಯಾ ಮೂಲದ ಪೆಟ್ರೋನಾಸ್ ಹೈಡ್ರೋಜನ್ ಮತ್ತು ಕಾಂಟಿನೆಂಟಲ್ ಇಂಡಿಯಾ ಸಂಸ್ಥೆಗಳು 32,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಪೆಟ್ರೋನಾಸ್ ಹೈಡ್ರೋಜನ್ ಸಿಇಓ ಅದ್ಲಾನ್ ಅಹ್ಮದ್ , ಕಾಂಟಿನೆಂಟಲ್ ಇಂಡಿಯಾದ ಸಿಇಓ ಪ್ರಶಾಂತ್ ದೊರೆಸ್ವಾಮಿ ತಮ್ಮ ಕಂಪನಿ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯದೊಂದಿಗೆ ಮಾಡಿಕೊಂಡಿರುವ ಈ ಹೂಡಿಕೆ ಒಪ್ಪಂದಗಳು ನಿಗದಿತ ಅವಧಿಯಲ್ಲಿ ಜಾರಿಗೆ ಬರುವಂತಾಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿಗಳು ಎರಡೂ ಕಂಪೆನಿಗಳ ಮುಖ್ಯಸ್ಥರಿಗೆ ತಿಳಿಸಿದರು.
ಪೆಟ್ರೋನಾಸ್ ಹೈಡ್ರೋಜನ್ ಸಂಸ್ಥೆಯು ಮಂಗಳೂರಿನಲ್ಲಿ ನವೀಕರಿಸಬಹುದಾದ ಇಂಧನ ಘಟಕವನ್ನು ಸ್ಥಾಪಿಸಲು 31,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಸಹಿ ಹಾಕಿದೆ. ಇದರಿಂದ 3,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಕಾಂಟಿನೆಂಟಲ್ ಇಂಡಿಯಾ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮೂಲಕ 1000 ಕೋಟಿ ರೂ. ಬಂಡವಾಳ ಹೂಡಲಿದ್ದು, ಇದರಿಂದ 6000 ಜನರಿಗೆ ಉದ್ಯೋಗ ದೊರೆಯಲಿದೆ.
ಆಟೋಮೋಟಿವ್ ಸಾಫ್ಟ್ವೇರ್ ಅಭಿವೃದ್ಧಿ, ಸಂವಹನ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿರುವ ಟೆಕ್ ಕಂಪನಿ ಕಾಂಟಿನೆಂಟಲ್ – ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಟೆಕ್ನಿಕಲ್ ಸೆಂಟರ್ ಇಂಡಿಯಾ (ಟಿಸಿಐ) ಯ ವಿಸ್ತರಣೆಗಾಗಿ 1000 ಕೋಟಿ ರೂ ಬಂಡವಾಳ ಹೂಡಲು ಮುಂದೆ ಬಂದಿದೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಆಟೋಮೋಟಿವ್ ಆರ್ ಅಂಡ್ ಡಿ ಪರಿಸರ ವ್ಯವಸ್ಥೆಗೆ ಈ ಪ್ರಸ್ತಾವಿತ ಹೂಡಿಕೆ ಪೂರಕವಾಗಲಿದೆ.
ಇತ್ತೀಚೆಗೆ ಸ್ವಿಟ್ಸರ್ಲೆಂಡಿನ ದಾವೊಸ್ ನಲ್ಲಿ ರೆನ್ಯೂ ಪವರ್ ಕಂಪೆನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ 50,000 ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಜತೆಗೆ, ಆಕ್ಮೆ ( ACME ) ಕ್ಲೀನ್ ಟೆಕ್ ಸಲ್ಯುಷನ್ಸ್ ಕಂಪೆನಿ ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿತ್ತು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.