ನವದೆಹಲಿ: ದೇಶದಲ್ಲಿ ಎಂಎಸ್ಎಂಇ ವಲಯವನ್ನು ಉತ್ತೇಜಿಸಲು ಸರ್ಕಾರ ಅಗತ್ಯ ನೀತಿ ಬದಲಾವಣೆಗಳನ್ನು ಮಾಡುತ್ತಿದೆ. ವಲಯವನ್ನು ಬಲಪಡಿಸಲು ಕೇಂದ್ರವು ಕಳೆದ ಎಂಟು ವರ್ಷಗಳಲ್ಲಿ 650 ಶೇಕಡಾಕ್ಕಿಂತ ಹೆಚ್ಚು ಬಜೆಟ್ ಅನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ
ನವ ದೆಹಲಿಯಲ್ಲಿ ಉದ್ಯಮಿ ಭಾರತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವು ಭಾರತದ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ ಮತ್ತು ಇದು ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಬಹಳ ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಹೇಳಿದರು.
ಸರ್ಕಾರಕ್ಕೆ ಎಂಎಸ್ಎಂಇ ಎಂದರೆ ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಗರಿಷ್ಟ ಬೆಂಬಲ ನೀಡುವ ವಲಯ ಎಂದ ಅವರು, ಈ ವಲಯಕ್ಕೆ 50 ಸಾವಿರ ಕೋಟಿ ರೂಪಾಯಿಗಳ ಸ್ವಾವಲಂಬಿ ನಿಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಕೇಂದ್ರ ಸರ್ಕಾರವು ಎಂಎಸ್ಎಂಇಗಳಿಗೆ 3.5 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿದೆ ಎಂದು ಮೋದಿ ಹೇಳಿದರು. ಪ್ರಪಂಚದಾದ್ಯಂತ ಸ್ಥಳೀಯ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವ ಸಂಕಲ್ಪವನ್ನು ಸರ್ಕಾರ ತೆಗೆದುಕೊಂಡಿದೆ ಮತ್ತು ಭಾರತದ ಮೇಕ್ ಇನ್ ಇಂಡಿಯಾ ಪೂರೈಕೆ ಸರಪಳಿಯನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಪರಿಚಯಿಸಲಾಗಿದೆ ಎಂದರು.
ಖಾದಿ ಕುರಿತು ಮಾತನಾಡಿದ ಪ್ರಧಾನಿ, ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು ಒಂದು ಲಕ್ಷ ಕೋಟಿ ರೂಪಾಯಿ ದಾಟಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿ ಖಾದಿ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ. ಗ್ಯಾರಂಟಿ ಇಲ್ಲದೆ ಸಾಲ ಪಡೆಯುವಲ್ಲಿನ ತೊಂದರೆಯು ಸಮಾಜದ ದುರ್ಬಲ ವರ್ಗದವರಿಗೆ ಉದ್ಯಮಶೀಲತೆಯ ಹಾದಿಯನ್ನು ಅನುಸರಿಸಲು ಪ್ರಮುಖ ಅಡಚಣೆಯಾಗಿದೆ. ಇದನ್ನು ನಾವು ಸುಗಮಗೊಳಿಸಿದ್ದೇವೆ ಎಂದು ಅವರು ಹೇಳಿದರು.
2014 ರ ನಂತರ, ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮೂಲಕ ಉದ್ಯಮಶೀಲತೆಯ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಪ್ರತಿಯೊಬ್ಬ ಭಾರತೀಯನಿಗೂ ಉದ್ಯಮಶೀಲತೆಯನ್ನು ಸುಲಭಗೊಳಿಸುವಲ್ಲಿ ಮುದ್ರಾ ಯೋಜನೆಯು ಅಸಾಧಾರಣ ಪಾತ್ರವನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಮೋದಿ ಅವರು ಎಂಎಸ್ಎಂಇ ಕಾರ್ಯಕ್ಷಮತೆ ಹೆಚ್ಚಿಸುವ ಯೋಜನೆ, ಮೊದಲ ಬಾರಿಗೆ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಪಿಎಂಇಜಿಪಿಯ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.