ಬೆಂಗಳೂರು: ಇಂದಿರಾ ಗಾಂಧಿ ಅವರು ಪ್ರಧಾನಿಯಾದ ಬಳಿಕ ಸಂವಿಧಾನದ ಯಾವುದೇ ಪರಿಚ್ಛೇದಗಳಿಗೆ ಗೌರವ ಕೊಡಲಿಲ್ಲ. ತುರ್ತು ಪರಿಸ್ಥಿತಿ ದೇಶದ ದುರ್ದೈವ. 1975ರಲ್ಲಿ ಸುಮಾರು 25 ತಿಂಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು.
ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ “ತುರ್ತು ಪರಿಸ್ಥಿತಿಗೆ” ಸಂಬಂಧಿಸಿದಂತೆ ನಗರದಲ್ಲಿ ಇಂದು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿಯ ದಿನಗಳು ಮತ್ತೆಂದೂ ಬರಬಾರದು ಎಂದು ದೇಶದ ಎಲ್ಲ 138 ಕೋಟಿಗೂ ಹೆಚ್ಚು ಜನರು ನಿರ್ಧರಿಸಬೇಕಿದೆ. ಅದಕ್ಕಾಗಿಯೇ ಆ ಕರಾಳ ದಿನಗಳನ್ನು ಮತ್ತೆ ನೆನಪಿಸಲಾಗುತ್ತಿದೆ ಎಂದು ನುಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನೇಕ ಹೋರಾಟಗಾರರು, ಅಂದಿನ ವಿರೋಧ ಪಕ್ಷದ ಮುಖಂಡರು ಜೈಲಿನಲ್ಲಿದ್ದರು. ಆದ್ದರಿಂದ ಇಂದು ಜೈಲನ್ನು ಸಂದರ್ಶಿಸಲಾಯಿತು ಎಂದರು. ಇಂಥದ್ದನ್ನು ವಿರೋಧಿಸಲು ಪ್ರೇರಣೆ ಇಲ್ಲಿ ಲಭಿಸಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಾನಂತರ ಪ್ರಧಾನಿ ಜವಾಹರಲಾಲ್ ಅವರ ನಂತರ ಆಡಳಿತ ನಡೆದಿದ್ದು, ಅದು ರಾಷ್ಟ್ರೀಯ ಸಂಸ್ಕøತಿಗೆ ವಿರುದ್ಧವಾಗಿ ಮತ್ತು ದೇಶೀಯ ವಿಚಾರಕ್ಕೆ ಒತ್ತು ಕೊಡಲಿಲ್ಲ. ವಿದೇಶೀಯರ ವಿಚಾರದ ಆಧಾರದಲ್ಲಿ ಆಡಳಿತ ನಡೆಸಲಾಯಿತು. ಇದನ್ನು ಆಕ್ಷೇಪಿಸಿ ಅಂದಿನ ದಿನಗಳಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು ಎಂದು ತಿಳಿಸಿದರು.
ಇಂದಿರಾ ಗಾಂಧಿಯವರು ಅಧಿಕಾರ ಲಾಲಸೆಯಿಂದ ಇಲ್ಲಸಲ್ಲದ ಕಾರಣ ನೀಡಿ ತುರ್ತು ಪರಿಸ್ಥಿತಿ ಹೇರಿದ್ದರು. ಪ್ರತಿರೋಧ ತೋರದಂತೆ ಅನೇಕರನ್ನು ಜೈಲಿಗೆ ಕಳುಹಿಸಲಾಯಿತು. ಅಂದಿನ ರಾಷ್ಟ್ರಪತಿಯಾಗಿ ಫಕ್ರುದ್ದೀನ್ ಅಲಿ ಅವರು ಇದ್ದುದೂ ದೇಶದ ದುರ್ದೈವ ಎಂದು ವಿವರಿಸಿದರು. ಕಾನೂನಿಗೂ ತಿದ್ದುಪಡಿ ತರಲಾಯಿತು. ಆರೆಸ್ಸೆಸ್ ಸೇರಿ ದೇಶಪ್ರೇಮಿ ಸಂಘಟನೆಗಳಿಗೆ ನಿಷೇಧ ಹೇರಲಾಗಿತ್ತು ಎಂದರು.
ತುರ್ತು ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೂ ವಿರೋಧಿಸಿದ್ದು, ಅವರಿಗೂ ಅನ್ಯಾಯ ಮಾಡಲಾಗಿತ್ತು. 1977ರಲ್ಲಿ ಅನಿವಾರ್ಯವಾಗಿ ಚುನಾವಣೆ ಘೋಷಿಸಿದಾಗ ಜೈಲಿನಲ್ಲಿದ್ದ ಎಲ್ಲ ಹಿರಿಯರು ಹೊರಬಂದು ಒಂದು ಒಕ್ಕೂಟ ರಚಿಸಿ ಜನತಾ ಪಕ್ಷದ ರಚನೆ ಮಾಡಿದರು. ಆ ಚುನಾವಣೆಯಲ್ಲಿ ಜನತಾ ಪಕ್ಷ ಗರಿಷ್ಠ ಸ್ಥಾನ ಪಡೆದು ಅಧಿಕಾರ ಪಡೆದು ಕರಾಳ ಛಾಯೆಗೆ ಮುಕ್ತಿ ಕೊಟ್ಟಿತು ಎಂದು ತಿಳಿಸಿದರು.
47 ವರ್ಷಗಳ ಹಿಂದೆ ಈ ದೇಶದಲ್ಲಿ ಸ್ವಾತಂತ್ರ್ಯ ಹರಣ ಆಗಿತ್ತು. 1947ರವರೆಗೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ನಾವು ಸ್ವಾಭಿಮಾನಿ, ಸ್ವತಂತ್ರ ಭಾರತಕ್ಕಾಗಿ ನಮ್ಮ ಹಿರಿಯರು ಮಾಡಿದ ಹೋರಾಟದಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಭಾರತಕ್ಕೆ ಎಂದಿಗೂ ಗುಲಾಮಗಿರಿ ಬರಬಾರದು ಎಂಬ ಆಶಯ ಹಿರಿಯರಲ್ಲಿತ್ತು. ಅದಕ್ಕಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರಯತ್ನದಿಂದ ಅತ್ಯುತ್ತಮ ಸಂವಿಧಾನವೂ ನಮಗೆ ಲಭಿಸಿತ್ತು ಎಂದು ವಿವರಿಸಿದರು. ಅದು ಜಗತ್ತಿನ ಶ್ರೇಷ್ಠ ಸಂವಿಧಾನ ಎಂದರು.
ಇದು ದೇಶಪ್ರೇಮದ ಕಾರ್ಯಕ್ರಮ. ಯುವಜನರಲ್ಲಿ ದೇಶಪ್ರೇಮವನ್ನು ವೃದ್ಧಿಸುವ ಕಾರ್ಯಕ್ರಮ ಎಂದು ಅವರು ತಿಳಿಸಿದರು. ಸಂಸದ ಪಿ.ಸಿ. ಮೋಹನ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಜಿ. ಮಂಜುನಾಥ್ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.