ಮಂಗಳೂರು : ಕೆನರಾ ಬ್ಯಾಂಕ್ ಪ್ರಾಯೋಜಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಒಂದೇ ದಿನದಲ್ಲಿ 44,000 ಕ್ಕೂ ಮಿಕ್ಕಿ ಅಟಲ್ ಪಿಂಚಣಿ ಯೋಜನೆ ಖಾತೆಗಳನ್ನು ನೋಂದಾಯಿಸುವ ಮೂಲಕ ರಾಷ್ಟ್ರ ಮಟ್ಟದ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಪಿ ಗೋಪಿ ಕೃಷ್ಣ ಹೇಳಿದರು.
ಈ ಸಾಧನೆಯನ್ನು ಗುರುವಾರದಂದು ಘೋಷಿಸಿದ ಅವರು, ಬ್ಯಾಂಕು ದಕ್ಷಿಣ ಕನ್ನಡ , ಉಡುಪಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಒಳಗೊಂಡ ಒಂಬತ್ತು ಜಿಲ್ಲಾ ವ್ಯಾಪ್ತಿಯನ್ನು ಹೊಂದಿದ್ದು, 629 ಶಾಖೆಗಳನ್ನು ಹೊಂದಿದೆ. ಈ ಸೀಮಿತ ಸೇವಾ ಕ್ಷೇತ್ರದಲ್ಲಿ ಬ್ಯಾಂಕು ಒಂದೇ ದಿನದಲ್ಲಿ 44036 ಖಾತೆಗಳನ್ನು ನೋಂದಾಯಿಸಿರುವುದು ಒಂದು ರಾಷ್ಟ್ರೀಯ ದಾಖಲೆಯಾಗಿದೆ. ಈ ಸಾಧನೆಯನ್ನು ದೇಶದ ಯಾವುದೇ ಗ್ರಾಮೀಣ ಬ್ಯಾಂಕು ಹಾಗೆಯೇ ಕರ್ನಾಟಕದಲ್ಲಿ ಯಾವುದೇ ಬ್ಯಾಂಕು ಕೂಡ ಈ ಸಾಧನೆ ಮಾಡಿಲ್ಲ ಎಂದು ಗೋಪಿ ಕೃಷ್ಣ ಹೇಳಿದರು.
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯ ಸ್ಯಾಚುರೇಶನ್ ಮಿಷನ್ಗೆ ಅನುಗುಣವಾಗಿ ಬ್ಯಾಂಕು ಅರ್ಹ ಜನಸಂಖ್ಯೆಯನ್ನು ತಲುಪಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . ಹಣಕಾಸು ವರ್ಷ 2021-22 ರಲ್ಲಿ ಬ್ಯಾಂಕು ತನಗೆ ನೀಡಿದ ಗುರಿಗೆ ಪ್ರತಿಯಾಗಿ 131% ಸಾಧನೆ ತೋರುವ ಮೂಲಕ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಬ್ಯಾಂಕು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ 2,64,817 ಖಾತೆಗಳನ್ನು ದಾಖಲಿಸಿದೆ (ಸಂಚಿತ) ಮತ್ತು ಈ ಕಾರ್ಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಪೂರ್ವವಾಗಿದೆ ಎಂದೂ ಗೋಪಿಕೃಷ್ಣ ಹೇಳಿದರು.
ನವದೆಹಲಿಯ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿ ಎಫ್ ಆರ್ ಡಿ ಏ) ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು ಅಟಲ್ ಪಿಂಚಣಿ ಯೋಜನೆಯ ದಾಖಲಾತಿ ಶ್ರೇಯಾಂಕದಲ್ಲಿ ಕರ್ನಾಟಕ 7 ನೇ ಸ್ಥಾನದಲ್ಲಿದೆ. ಅಟಲ್ ಪಿಂಚಣಿ ನೋಂದಣಿಗೆ ರಾಜ್ಯದಲ್ಲಿ 2.53 ಕೋಟಿ ಜನ ಅರ್ಹರಿದ್ದು ಈ ವರೆಗೆ ಸುಮಾರು 23 ಲಕ್ಷ ಜನರನ್ನು ಈ ಯೋಜನೆಯಡಿ ತರಲಾಗಿದೆ. ತಮ್ಮ ಬ್ಯಾಂಕು ಕೇವಲ ಒಂಬತ್ತು ಜಿಲ್ಲಾ ವ್ಯಾಪ್ತಿಯಲ್ಲಿದ್ದರೂ ರಾಜ್ಯದ ಒಟ್ಟಾರೆ ಸಾಧನೆಯಲ್ಲಿ 10% ಕ್ಕಿಂತ ಹೆಚ್ಚಿನ ಪಾಲು ಹೊಂದಿರುವುದು ಹೆಮ್ಮೆ ತಂದಿದೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅಬಿನಂಧನೆ:
ಅಸಂಘಟಿತ ವರ್ಗಕ್ಕೆ 60 ವರ್ಷದ ನಂತರ ಪಿಂಚಣಿಯ ಸುರಕ್ಷೆ ಅತಿ ಅವಶ್ಯವಿದ್ದು ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಅಭಿನಂದನೀಯ ಕಾರ್ಯ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸಂದೇಶದ ಮೂಲಕ ಅಭಿನಂದಿಸಿದ್ದಾರೆ.
ಕೆನರಾ ಬ್ಯಾಂಕ್ ಕಾರ್ಯನಿರ್ವಹ ನಿರ್ದೇಶಕ ಬ್ರಿಜ್ ಮೋಹನ ಶರ್ಮ ಕೂಡ ಸಂದೇಶ ಕಳುಹಿಸಿ ಬ್ಯಾಂಕಿನ ಅಭೂತಪೂರ್ವ ಸಾಧನೆಯನ್ನು ಕೊಂಡಾಡಿದ್ದಾರಲ್ಲದೆ ಈ ಸಾಧನೆ ಸರ್ವರಿಗೂ ಮಾದರಿಯಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.