ನಾಗಪುರ: “ಸತ್ಯ, ಕರುಣೆ, ಶುಚಿತ್ವ ಮತ್ತು ತಪಸ್ಸು ಧರ್ಮದ ಈ ನಾಲ್ಕು ಆಧಾರ ಸ್ಥಂಭಗಳ ಆಧಾರದ ಮೇಲೆ ಭಾರತ ನಿಂತಿದೆ. ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ.”ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ “‘ಭಾರತ ಮಾತಾ ಕಿ ಜಯ್’ ಘೋಷ ಇಡೀ ವಿಶ್ವದಲ್ಲಿ ಮೊಳಗಬೇಕಿದೆ. ಯಾಕೆಂದರೆ, ನಾವು ವಿಶ್ವವಿಜೇತರಾಗಬೇಕಿಲ್ಲ, ನಾವು ಯಾರನ್ನು ಗೆಲ್ಲಬೇಕಿಲ್ಲ ಬದಲಾಗಿ ನಾವು ಎಲ್ಲರನ್ನು ಜೋಡಿಸಬೇಕಿದೆ. ಇದೇ ಸಂಘ ಕಾರ್ಯ. ಅಂದರೆ ಎಲ್ಲರನ್ನೂ ಜೋಡಿಸುವ ಕೆಲಸ. ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ನಡೆಯುತ್ತಿದೆ. ಅದರಲ್ಲಿ ‘ಸ್ವ’ ಯಾವುದು? ಈ ಜೋಡಿಸುವ ಕೆಲಸವೇ ನಮ್ಮ ‘ಸ್ವ’” ಎಂದು ಮೋಹನ್ ಭಾಗವತ್ ಹೇಳಿದರು.
ಮುಂದುವರೆಸುತ್ತಾ “ನಮ್ಮ ಪೂರ್ವಜರು ಪೂರ್ಣತೆಯ ಸತ್ಯವನ್ನು ಆವಿಷ್ಕಾರ ಮಾಡಿದವರು. ಅದು ನಮ್ಮೆಲ್ಲರಲ್ಲೂ ಏಕಮುಖವಾಗಿ ಪ್ರಕಟಗೊಳ್ಳುತ್ತದೆ ಎಂದು ಅರಿತವರು. ನಮ್ಮಲ್ಲಿನ ವಿವಿಧತೆ ಈ ಏಕತ್ವದ ಮತ್ತೊಂದು ಆಯಾಮ. ಅದು ಪ್ರತ್ಯೇಕತೆಯಲ್ಲ. ಪರಸ್ಪರ ನಮ್ಮಲ್ಲಿ ಸಂಬಂಧದ ಭಾವ, ಆತ್ಮೀಯತೆಯ ಭಾವವಿದೆ. ಈ ಭಾವನೆಯ ಮೂಲಕವೇ ಇಡೀ ವಿಶ್ವವನ್ನು ಸತ್ಯದ ಕಡೆಗೆ ಕರೆದೊಯ್ಯುಬೇಕಿದೆ. ಸತ್ಯ, ಕರುಣೆ, ಶುಚಿತ್ವ ಮತ್ತು ತಪಸ್ಸು ಈ ಧರ್ಮದ ನಾಲ್ಕು ಆಧಾರ ಸ್ಥಂಭಗಳ ಆಧಾರದ ಮೇಲೆ ಭಾರತ ನಿಂತಿದೆ. ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ ” ಎಂದರು.
ಸರಸಂಘಚಾಲಕರು ಮಾತನಾಡುತ್ತಾ “ಸಮನ್ವಯವನ್ನು ಕಲಿಸುವುದೇ ಧರ್ಮ,ಸಂತುಲನವನ್ನು ಕಲಿಸುವುದೇ ಧರ್ಮ, ಎಲ್ಲರನ್ನು ಒಳಗೊಂಡು ಎಲ್ಲರ ಉನ್ನತಿಯನ್ನು ಬಯಸುತ್ತದೆಯೋ ಅದೇ ಧರ್ಮ.ಧರ್ಮದ ಸಂರಕ್ಷಣೆ ಎರಡು ರೀತಿಯದ್ದು, ಒಂದು ಆಕ್ರಮಣದಿಂದ ತಪ್ಪಿಸಿಕೊಳ್ಳುವುದು,ಅದಕ್ಕಾಗಿ ಬಲಿದಾನವೂ ನಡೆಯುತ್ತದೆ, ಯುದ್ಧವೂ ನಡೆಯುತ್ತದೆ. ಎರಡನೇಯದ್ದು ಧರ್ಮವನ್ನು ಆಚರಣೆಯಲ್ಲಿ ತರವುದು.” ಎಂದರು.
“ನಾವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದೆ ಸಾಗಬೇಕಿದೆ. ಉದಾಹರಣೆಗೆ ಗ್ಯಾನವಾಪಿಯ ವಿಚಾರ ಬಂದಿದೆ. ಇಲ್ಲಿ ಇತಿಹಾಸದ ಸಾಕ್ಷಿಯಂತೂ ಇದೆ, ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಅದು ಇವತ್ತು ಬದುಕಿರುವ ಹಿಂದು, ಮುಸಲ್ಮಾನರಿಂದ ನಡೆದ ಇತಿಹಾಸವಲ್ಲ, ಹಿಂದೆಂದೋ ಆದದ್ದು. ಇಸ್ಲಾಂ ಹೊರಗಿನಿಂದ ಆಕ್ರಮಣ ಮಾಡುತ್ತಾ ಬಂದಾಗ, ಭಾರತದ ಸ್ವತಂತ್ರ ಸೇನಾನಿಗಳ ಶ್ರದ್ಧಾ ಭಂಗಕ್ಕಾಗಿ ದೇವಸ್ಥಾನವನ್ನು ಒಡೆದರು. ಆ ರೀತಿ ದೇಶಾದ್ಯಂತ ಸಾವಿರಾರು ಘಟನೆಗಳಾಗಿದೆ. ಈಗ ನಾವೇನು ಮಾಡಬೇಕು? ಹಿಂದುಗಳು ಮುಸಲ್ಮಾನರ ವಿರುದ್ಧ ಯೋಚನೆ ಮಾಡುವುದಿಲ್ಲ. ಹಿಂದು ಮುಸಲ್ಮಾನರು ಒಟ್ಟಿಗೆ ಕೂತು ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಕೋರ್ಟಿಗೆ ಹೋಗಬೇಕಾಗಬಹುದು, ಆಗ ಕೋರ್ಟಿನ ನಿರ್ಣಯವನ್ನು ನಾವು ಒಪ್ಪಬೇಕು. ನಮ್ಮ ಸಂವಿಧಾನ ಸಮ್ಮತ ನ್ಯಾಯವ್ಯವಸ್ಥೆಯನ್ನು ಪವಿತ್ರ, ಸರ್ವ ಶ್ರೇಷ್ಠವೆಂದು ಪರಿಗಣಿಸಿ ನಾವು ಪಾಲಿಸಬೇಕಿದೆ” ಎಂದರು.
ಸಮಾರಂಭದಲ್ಲಿ ಹೈದರಾಬಾದಿನ ರಾಮಚಂದ್ರ ಮಿಷನ್ನಿನ ಶ್ರೀ ಕಮಲೇಶ್ ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ವಯಂಸೇವಕರಿಂದ ಆಕರ್ಷಕವಾದ ವಿವಿಧ ಶಾರೀರಿಕ ಪ್ರದರ್ಶನವನ್ನು ನಡೆಯಿತು. ಮೇ 9ರಂದು ಪ್ರಾರಂಭಗೊಂಡ 25 ದಿನಗಳ ಅಖಿಲ ಭಾರತ ಮಟ್ಟದ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಆಯ್ದ 735 ಕಾರ್ಯಕರ್ತರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.