ಪ್ರಬಲ, ಸಶಕ್ತ ರಾಷ್ಟ್ರ ನಿರ್ಮಾಣದ ಚಿಂತನೆ ಭಾರತೀಯಲ್ಲಿರಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು : ತ್ಯಾಗಬಲಿದಾನಗಳ ನಂತರ ದೊರೆತ ಸ್ವತಂತ್ರ ದೇಶದ ಏಕತೆ, ಅಖಂಡತೆ ಕಾಯ್ದುಕೊಂಡು, ಪ್ರಬಲ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದ ಚಿಂತನೆ ಎಲ್ಲ ಭಾರತೀಯರಲ್ಲಿ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತಭಾರತಿಗೆ ಕನ್ನಡದಾರತಿ ಅಭಿಯಾನ’ ವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಸ್ವಾಭಿಮಾನ, ಸಮಾನತೆಯ ಬದುಕು ನೀಡುವ ಸ್ವತಂತ್ರ ಭಾರತ ವಿಶ್ವಮಾನ್ಯ ರಾಷ್ಟ್ರವಾಗಿದೆ. ಸಾವಿರ ವರ್ಷಗಳಿಂದ ಮೊಗಲರು, ಬ್ರಿಟೀಷರ ಆಕ್ರಮಣದಲ್ಲಿ ಸ್ವಾಭಿಮಾನವನ್ನು ಅದುಮಿಟ್ಟು ಬದುಕುವ ಪರಿಸ್ಥಿತಿಯಿಂದ ಸ್ವಾತಂತ್ರ್ಯ ದೊರಕಿದೆ. ದೇಶದ ಜನರೆಲ್ಲರೂ ಒಗ್ಗಟ್ಟಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರು ಬಲಿಷ್ಟ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಕರೆ ನೀಡಿದರು. ಜನರ ಏಳಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 25 ವರ್ಷಗಳ ಅಮೃತ ಕಾಲ ಮಾಡಬೇಕೆಂದು ಕರೆನೀಡಿದರು. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ನಾವು ಹುಟ್ಟಿದ ಜನ್ಮಭೂಮಿ ಶ್ರೇಷ್ಟ ಭಾರತವಾಗಬೇಕೆಂಬ ಗುರಿಯನ್ನು ಹೊಂದಿರುವ ನಾಯಕ ಮೋದಿಯವರು ಎಂದರು.
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ #ಅಮೃತಭಾರತಿಗೆಕನ್ನಡದಾರತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ @PCMohanMP, @dineshgrao, ನಾರಾಯಣಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/ehahcqZfpT
— CM of Karnataka (@CMofKarnataka) May 28, 2022
ದೇಶಕ್ಕೆ ಕನ್ನಡಿಗರ ಕೊಡುಗೆ
ಕನ್ನಡಿಗರು ಪ್ರಗತಿಪರ ಚಿಂತಕರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶಕ್ಕೆ ಕನ್ನಡಿಗರ ಕೊಡುಗೆ ಬಹಳಷ್ಟಿದೆ. ಕನ್ನಡ ಪರಂಪರೆಯ ಮೂಲಕ ಭಾರತ ಪರಂಪರೆಗೆ ನಾಂದಿ ಹಾಡಬೇಕಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಚಿಂತನೆಯನ್ನು ಸರ್ಕಾರ ಹೊಂದಿದೆ. ಮೋದಿಯವರ ಗುರಿಯಾದ ಭಾರತದ 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ದೂರದೃಷ್ಟಿಯ ಚಿಂತನೆಯಿಂದ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ನಾಡಿನ ಅಪೂರ್ವ ಕೊಡುಗೆ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ 75 ವರ್ಷ ಮಹತ್ವದ ಕಾಲಘಟ್ಟ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಮಡಿದವರಿದ್ದಾರೆ. ರಾಜರಿಂದ ಪ್ರಾರಂಭವಾದ ಸ್ವಾತಂತ್ರ್ಯ ಹೋರಾಟ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ರೂಪ ಪಡೆಯಿತು. 1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಎದೆಗಾರಿಕೆ ಇದೆಯೆಂಬುದನ್ನು ನಿರೂಪಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ನಾಡು ಅಪೂರ್ವ ಕೊಡುಗೆ ನೀಡಿದೆ. ಮೈಲಾರ ಮಾಹದೇವಪ್ಪ , ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.
ವೀರ್ ಸಾವರ್ಕರ್ ದಿಟ್ಟ, ಧೀಮಂತ ನಾಯಕ
ಮೊದಲನೇ ಸ್ವಾತಂತ್ರ್ಯ ಹೋರಾಟವನ್ನು ಲೋಕಮಾನ್ಯ ತಿಲಕ, ವೀರಸಾವರ್ಕರ್ರಿಂದ ಪ್ರಾರಂಭವಾಯಿತು. 1883 ರಲ್ಲಿ ಜೂನ್ 28 ರಂದು ವೀರ್ ಸಾವರ್ಕರ್ ಅವರ ಜನಿಸಿದ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಕಾರಾಗೃಹದಲ್ಲಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ್ದರು. ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದ ವೀರ್ ಸಾವರ್ಕರ್ ಅವರು ದಿಟ್ಟ, ಧೀಮಂತ ನಾಯಕರಾಗಿದ್ದರು. ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದ ಲೋಕಮಾನ್ಯ ತಿಲಕರ ಚಿಂತನೆ, ಯೋಚನಾಶಕ್ತಿ ವಿಶಿಷ್ಟವಾದುದಾಗಿತ್ತು. ಸ್ವಾತಂತ್ರ್ಯ ಹೊರತುಪಡಿಸಿ, ಮಿಕ್ಕೆಲ್ಲವೂ ನಗಣ್ಯ ಎಂದ ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಪ್ರಥಮ ನಮಸ್ಕಾರಗಳು ಎಂದರು.
ಮಹನೀಯರ ಚಿಂತನೆ, ತ್ಯಾಗದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ
ಲಾಹೋರ್ ನಲ್ಲಿ ಲಾಲ್ ಲಜಪತ್ ರಾಯ್ರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ದೊರಕಿತು. ಇದೇ ಹಾದಿಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್ ನಡೆದರು. ಈ ಹೋರಾಟಕ್ಕೆ ಅಂತರರಾಷ್ಟ್ರೀಯ ಸ್ವರೂಪವನ್ನು ಸುಭಾಷ್ ಚಂದ್ರ ಬೋಸರು ನೀಡಿದರು. ಈ ಎಲ್ಲ ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿಯನ್ನು ಸ್ವಾಮಿ ವಿವೇಕಾನಂದರು ತುಂಬಿದರು. ಹಲವಾರು ಮಹನೀಯರ ಚಿಂತನೆ,ಹೋರಾಟ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಮಹಾತ್ಮಾ ಗಾಂಧಿಯವರಿಂದ ಸ್ಪೂರ್ತಿ ಹೊಂದಿ ಸಹಸ್ರಾರು ದೇಶಭಕ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಸರ್ವಸ್ವವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.ಇಂತಹ ಅನೇಕ ಮಹನೀಯರು ದೇಶಕ್ಕಾಗಿ ತ್ಯಾಗ ಮಾಡಿದವರಿಗೆ ನನ್ನ ನಮಸ್ಕಾರಗಳು ಎಂದರು.
ಬ್ರಿಟೀಷರ ವಿರುದ್ಧ ದುಡಿಯುವ ವರ್ಗದ ಹೋರಾಟ :
ಮಹಾತ್ಮಾಗಾಂಧಿಯವರ ಸ್ವದೇಶಿ ಚಳುವಳಿಯಲ್ಲಿ ಮಹಿಳೆಯರೂ ಪಾಲ್ಗೊಂಡರು. ಕ್ವಿಟ್ ಇಂಡಿಯಾ ಚಳುವಳಿ, ಬಾರ್ಡೋಲಿಯಲ್ಲಿ ರೈತರ ಸತ್ಯಾಗ್ರಹ, ಪಶ್ಚಿಮ ಬಂಗಾಳದಲ್ಲಿ ಇಂಡಿಗೋ ಚಳವಳಿಗಳ ಮೂಲಕ ದುಡಿಯುವ ವರ್ಗ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟವನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.