ಬೆಂಗಳೂರು: ಒಂದು ತಿಂಗಳಲ್ಲಿ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳ ರಚಿಸಿ ನೋಂದಣಿ ಮಾಡಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದಲ್ಲಿ ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಕಳೆದ ವರ್ಷದ ಪ್ರಗತಿಯಲ್ಲಿದ್ದ ಯೋಜನೆಗಳು, ಈ ವರ್ಷ ಬಜೆಟ್ ನಲ್ಲಿ ಘೋಷಿಸಲಾದ ಯೋಜನೆಗಳ ಅನುಷ್ಠಾನ ಕುರಿತು ಸಚಿವ ಡಾ.ನಾರಾಯಣಗೌಡ ಅವರು ಪ್ರಗತಿ ಪರಿಶೀಲಿಸಿದರು.
ಈ ವರ್ಷದ ಬಜೆಟ್ನಲ್ಲಿ ಇಲಾಖೆಯಿಂದ 12 ಯೋಜನೆಗಳನ್ನು ಘೋಷಿಸಲಾಗಿದ್ದು, ಈ ಪೈಕಿ ಈಗಾಗಲೇ 8 ಯೋಜನೆಗಳಿಗೆ ಸರ್ಕಾರದ ಆದೇಶ ಹೊರಡಿಸಲಾಗಿದೆ. ಉಳಿದಿರುವ ಯೋಜನೆಗಳಿಗೂ ಶೀಘ್ರದಲ್ಲೇ ಆದೇಶ ಹೊರಡಿಸುವಂತೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.
ಸ್ತ್ರೀ ಶಕ್ತಿ ಗುಂಪುಗಳ ರೀತಿಯಲ್ಲೇ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಸಾವಿರ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. ಕೂಡಲೇ ಯುವ ಸಂಘಗಳ ರಚಿಸಿ, ನೋಂದಣಿ ಮಾಡಿಸುವಂತೆ ಸಚಿವರು ಸೂಚಿಸಿದರು. ಸ್ವಾಮಿ ವಿವೇಕಾನಂದ ಯುವ ಸ್ವಸಹಾಯಗಳ ರಚನೆ, ಪ್ರೋತ್ಸಾಹ ಧನ, ಉದ್ದೇಶದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ದತ್ತು ಪಡೆದಿರುವ ಕ್ರೀಡಾಪಟುಗಳಿಗೆ ಮೊದಲ ಹಂತದ ಹಣ ಬಿಡುಗಡೆಯಾಗಿದ್ದು, ಉಳಿದಿರುವ ಹಣ ಬಿಡುಗಡೆಗೆ ಸೂಚಿಸಿದರು. ಜೊತೆಗೆ ಕ್ರೀಡಾಪಟುಗಳ ತರಬೇತಿ, ಪ್ರಗತಿ ಕುರಿತು 15 ದಿನಗಳಿಗೊಮ್ಮೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ನಡೆಯುತ್ತಿರುವ ಪೈಲಟ್ ಟ್ರೇನಿಂಗ್ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಜಕ್ಕೂರು ವೈಮಾನಿಕ ತರಬೇತಿ ಶಾಲೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ 9 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ನಾರಾಯಣಗೌಡ ಅವರು, ಕೂಡಲೇ ಅಂತಿಮ ಹಂತದ ನೋಟಿಸ್ ನೀಡಿ, ಡೆಮಾಲಿಷನ್ ಮಾಡುವಂತೆ ಆದೇಶಿಸಿದರು.
ಅಮೃತ ಸಮುದಾಯ ದತ್ತು ಯೋಜನೆ ಅನುಷ್ಠಾನ ಪ್ರಗತಿ, ಕ್ರೀಡಾ ಅಂಕಣ ಯೋಜನೆ ಅನುಷ್ಠಾನ, ವಿಜಯಪುರ ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.