ಬೆಂಗಳೂರು: ಬೆಂಗಳೂರು ಗ್ರಾಮಾಂತರ- ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಭೂ ಮಾಲೀಕರ ಸಮಿತಿ ರಚಿಸಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಬಾಕಿಯಿರುವ ಪರಿಹಾರ ಧನವನ್ನು ಒಂದು ವಾರದೊಳಗೆ ಸಂಬಂಧಪಟ್ಟವರ ಖಾತೆಗೆ ವರ್ಗಾಹಿಸಲಾಗುವುದು ಎಂದು ವಸತಿ ಮತ್ತು ಮೂಲ ಸೌಲಭ್ಯ ಸಚಿವರಾದ ವಿ ಸೋಮಣ್ಣ ತಿಳಿಸಿದರು .
ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿಯ ಸೂರ್ಯ ನಗರದ 4ನೇ ಹಂತದ ಯೋಜನಾ ಪ್ರದೇಶದ ಭೂ ಮಾಲೀಕರು ಮತ್ತು ಅಧಿಕಾರಿಗಳ ಸಭೆ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಭೂ ಮಾಲೀಕರಿಗೆ ಶೀಘ್ರದಲ್ಲಿ ಹಣ ಪಾವತಿಸಲು ಹಾಗೂ ಭೂ ಸ್ವಾಧೀನಕ್ಕೊಳಗಾದ ಪ್ರದೇಶದಲ್ಲಿರುವ ಮನೆ ಕಟ್ಟಡ ಕೋಳಿಗೂಡು ಮರ ಹಾಗೂ ಬೋರ್ವೆಲ್ ಗಳಿಗೆ ನ್ಯಾಯ ಸಮ್ಮತವಾದ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೂರ್ಯ ನಗರದ ಭೂಸ್ವಾಧೀನ ಅಂತಿಮ ಅಧಿಸೂಚನೆಯಂತೆ ಒಟ್ಟು 1938 ಎಕರೆ 13ಗುಂಟೆ ಭೂಮಿಯಲ್ಲಿ 813 ಭೂಮಾಲೀಕರು ಇದ್ದಾರೆ. ಇದುವರೆಗೆ ಲಿಖಿತವಾಗಿ 454 ಜನ ಒಪ್ಪಿಗೆ ನೀಡಿದ್ದಾರೆ.359 ಜನ ಒಪ್ಪಿಗೆ ಪತ್ರ ನೀಡಿಲ್ಲ. ಇದರಿಂದಾಗಿ 440 ಎಕರೆ ಭೂಸ್ವಾಧೀನದ ಬಾಕಿ ಇದೆ ಎಂದರು.
ವಸತಿ ಯೋಜನೆಯಡಿ ಒಪ್ಪಿಗೆ ನೀಡಿರುವ 981 ಎಕರೆ ಪೈಕಿ 339 ಎಕರೆಗೆ ಸಂಬಂಧಿಸಿದಂತೆ ಬೇರೆಯವರು ಸಿವಿಲ್ ನ್ಯಾಯಾಲಯದಲ್ಲಿ ತಕಾರರು ಪ್ರಕರಣ ದಾಖಲಿಸಿದ್ದು, ಮುಂಗಡ ಹಣ ಪಾವತಿ ಮಾಡದಂತೆ ತಡೆ ತಂದಿದ್ದಾರೆ. 110 ಎಕರೆ ಭೂ ಸ್ವಾಧೀನದಿಂದ ಕೈಬಿಡಲು ಕೋರಿ ಹೈ ಕೋರ್ಟ್ನಲ್ಲಿ ತಡೆಯಾಜ್ಞೆ ತರಲಾಗಿದೆ. ಈಗಾಗಲೇ 276 ಜಮೀನಿಗೆ ಪ್ರತಿ ಎಕರೆ ರೂ.20 ಲಕ್ಷ ಒಟ್ಟಾರೆ ರೂ.55.20 ಕೋಟಿ ಮುಂಗಡ ಹಣ ಪಾವತಿಸಲಾಗಿದ್ದು, ಭೂದಾಖಲೆಯನ್ನು ಸಲ್ಲಿಸಿ ಸುಮಾರು 631 ಭೂಮಾಲೀಕರು ಮುಂಗಡ ಹಣ ಪಡೆಯಬೇಕಿದೆ ಎಂದರು.
ಇಂಡ್ಲವಾಡಿಯ ಗ್ರಾಮ ಪಂಚಾಯಿತಿಯ ಕಾಡಜಕ್ಕನ ಹಳ್ಳಿ , ಬಗ್ಗನ ದೊಡ್ಡಿ , ಇಂಡ್ಲವಾಡಿ ಕಲ್ಲುಬಾಳು ಗ್ರಾಮ ಪಂಚಾಯಿತಿಯ ಬೊಮ್ಮಂಡಳಿ, ಕೋನಸಂದ್ರ ಗ್ರಾಮಗಳ ರೈತರ ಪ್ರಮುಖ ಸಮಸ್ಯೆಗಳನ್ನು ಸರ್ಕಾರಿ ಗೋಮಾಳದಲ್ಲಿ ಗ್ರಾಂಟ್ ಆಗಿರುವ ಜಮೀನುಗಳಿಗೆ ಎಡಿಎಲ್ ಆರ್ ಸ್ಕೆಚ್ 1-5 ಮಾಡುವಂತೆ, ಗಿಡ, ಮರ, ಕೋಳಿ ಫಾರ್ಮ್ ಸೇರಿದಂತೆ ಇತರೆ ಪರಿಹಾರ, ಜೈಂಟ್ ಡೆವಲಪ್ಮೆಂಟ್ ಒಪ್ಪಂದದಂತೆ ಬಿಎಂಆರ್ ಡಿ ಎ ಪ್ರಕಾರ 50-50 ಸರ್ಕಾರದ ಆದೇಶವಾಗಿರುತ್ತದೆ. ಆದರೆ ಮೂಲೆ ನಿವೇಶನ ರೈತರಿಗೆ ನೀಡುತ್ತಿಲ್ಲ ಎಂದು ಸಂತ್ರಸ್ತರು ದೂರು ನೀಡಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ವಸತಿ ಇಲಾಖೆ ಆಯುಕ್ತರಾದ ಡಿ ಎಸ್ ರಮೇಶ್, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.