ಚಿಕ್ಕಮಗಳೂರು : ಬಸವ ಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ನಿಜವಾದ ಅನುಭವ ಮಂಟಪ ಯುವ ಪೀಳಿಗೆಗೆ ಆದರ್ಶದ ಮಂದಿರವಾಗಲಿದೆ. ರಾಜ್ಯ ಸರ್ಕಾರ ಅರ್ಥಪೂರ್ಣ ಅನುಭವ ಮಂಟಪ ನಿರ್ಮಾಣದ ಆಶಯ ಹೊಂದಿದ್ದು, ಜೂನ್ ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶ್ರೀ ಬಸವತತ್ತ್ವ ಪೀಠ (ರಿ) ಹಾಗೂ ಶ್ರೀ ಬಸವ ಮಂದಿರ, ಕಲ್ಯಾಣನಗರ ಚಿಕ್ಕಮಗಳೂರು ಇವರ ವತಿಯಿಂದ ಲಿಂ *. ಶ್ರೀ* ಮ.ನಿ.ಪ್ರ ಚಂದ್ರಶೇಖರ ಮಹಾಸ್ವಾಮೀಜಿ ಅವರ 167ನೇ ಜಯಂತಿ ಮತ್ತು ಲಿಂ. ಶ್ರೀ. ಮ.ನಿ.ಪ್ರ ಜಯ ಚಂದ್ರಶೇಖರ ಮಹಾಸ್ವಾಮೀಜಿ ಅವರ 26ನೇ ಸಂಸ್ಮರಣೆ ಅಂಗವಾಗಿ ಶ್ರೀಮಠದ ಜೆಸಿಎಸ್ ಶಾಲಾ ಆವರಣ ಆಯೋಜಿಸಲಾಗಿರುವ “ ಬಸವತತ್ತ್ವ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಅನುಭವ ಮಂಟಪ ಕಟ್ಟಡದಲ್ಲಿ ಅಲ್ಲ. ಅನುಭವದ ತತ್ವಗಳಲ್ಲಿ ಇದೆ. ಅನುಭವ ಮಂಟಪವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಎರಡರಿಂದ ಮೂರು ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು ತಿಳಿಸಿದರು.
ಕಾಯಕದಲ್ಲಿ ಸ್ವರ್ಗವನ್ನು ಕಾಣು ಎಂಬ ಉದಾತ್ತ ಚಿಂತನೆ 12ನೇ ಶತಮಾನದಲ್ಲಿಯೇ ಇತ್ತು. ಯಾವುದೇ ಜಟಿಲವಾದ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರವಿದೆ. ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ರ್ಯ ಬೇಕು. ಪಾಪಪುಣ್ಯಗಳ ಪ್ರಜ್ಞೆ ಇರಬೇಕು. ಬಸವ ತತ್ವಗಳ ಆಚರಣೆ ಮುಖ್ಯ. ನಮ್ಮ ಸಂಸ್ಕಾರವನ್ನು ಸರಿಪಡಿಸಿಕೊಂಡರೆ ನಮ್ಮ ಸಂಸ್ಕೃತಿಯೂ ಸರಿಯಾಗುತ್ತದೆ. ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಸವಣ್ಣನವರ ಮೊದಲ ಸಂಸತ್ತು ಅನುಭವ ಮಂಟಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೂ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶ್ರೀ ಮಠವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ಆದರೆ ತತ್ವಗಳು ಸರ್ವಶಕ್ತವಾಗಿರುತ್ತವೆ. ಭಕ್ತರಲ್ಲಿ ಆ ಭಾವ ಬೆಳೆದು, ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಸ್ಕಾರ ಉಳಿಯುತ್ತವೆ ಎನ್ನುವ ಕಾರಣದಿಂದ ಹಲವಾರು ಮಠಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ನಿಪ್ಪಾಣಿಯಿಂದ ಹಿಡಿದು ಕೊಳ್ಳೇಗಾಲದವರೆಗೆ ಸ್ವತಂತ್ರಪೂರ್ವದಿಂದ ಶ್ರೀ ಮಠಗಳು ಮಾಡಿರುವ ಸೇವೆ ಆಧ್ಯಾತ್ಮಿಕವಾಗಿ ಶೈಕ್ಷಣಿಕವಾಗಿ, ದಾಸೋಹದಲ್ಲಿ ಮುಂಚೂಣಿಯಲ್ಲಿವೆ. ಪ್ರಮುಖ ಮಠಗಳು ಮಾಡಿದಷ್ಟೇ ಕೆಲಸವನ್ನು ಹಳ್ಳಿಯಲ್ಲಿ ಸಣ್ಣ ಸಣ್ಣ ಮಠಗಳು ಮಾಡಿವೆ. ದಾಸೋಹ, ಸಂಸ್ಕಾರ ನೀಡಿ ಕನ್ನಡ ನಾಡಿಗೆ ಸಂಸ್ಕಾರ, ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದೊಂದು ರೀತಿಯಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮಾಡುವಂಥ ಚಳವಳಿ. ಇದು ನಿರಂತರವಾಗಿ ನಡೆಯುತ್ತಿದೆ. ಇಡೀ ಕನ್ನಡ ನಾಡಿನ ಭವಿಷ್ಯ ಶ್ರೀ ಮಠದ ಕಾಯಕ ಆಶೀರ್ವಾದ ದಲ್ಲಿದೆ. ಈ ಬಸವತತ್ವ ಸಮಾವೇಶದಿಂದ ಶುದ್ಧೀಕರಣ ಕಾರ್ಯವಾಗುತ್ತಿರಬೇಕು. ಶ್ರೀಗಳ ಸೇವಾ ಕಾರ್ಯಗಳಿಂದ ಬಡವರಿಗೆ, ದೀನದಲಿತರಿಗೆ, ದುರ್ಬಲ ವರ್ಗದವರಿಗೆ ಶಕ್ತಿ ತುಂಬುವಂತಾಗಲಿ ಎಂದರು.
ಇಂದು ಚಿಕ್ಕಮಗಳೂರಿನ ಬಸವ ತತ್ವ ಪೀಠ ಹಾಗೂ ಬಸವ ಮಂದಿರ ವತಿಯಿಂದ ಚಂದ್ರಶೇಖರ ಸ್ವಾಮೀಜಿಯವರ 167 ನೇ ಜಯಂತಿ ಹಾಗೂ ಜಯ ಚಂದ್ರಶೇಖರ ಸ್ವಾಮಿಗಳ 26ನೇ ಸಂಸ್ಕರಣೆ ಅಂಗವಾಗಿ ಆಯೋಜಿಸಲಾಗಿದ್ದ "ಬಸವ ತತ್ವ ಸಮಾವೇಶವ"ದಲ್ಲಿ ಭಾಗವಹಿಸಿದೆನು. pic.twitter.com/YurLebauzz
— Basavaraj S Bommai (@BSBommai) May 18, 2022
ವಚನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಉತ್ತರವಿದೆ
ಬಸವಣ್ಣ ನವರ ಬಗ್ಗೆ ನಾವು ಮಾತನಾಡಿದ್ದೇವೆ, ಓದಿದ್ದೇವೆ. ಪ್ರಸ್ತುತ ಕಾಲದಲ್ಲಿ ಬಸವಣ್ಣ ಹಿಂದೆಂದಿಗಿಂತಲೂ ಪ್ರಸ್ತುತ ಎನ್ನುತ್ತೇವೆ. ಒಳಹೊಕ್ಕು ನೋಡಿದಾಗ, ಬಸವಣ್ಣ ಹೋರಾಡಿದ್ದ ಅಸಮಾನತೆ, ಮೂಢನಂಬಿಕೆ, ಲಿಂಗಬೇಧಗಳೆಲ್ಲವೂ ಇನ್ನೂ ಪ್ರಸ್ತುತ ಎಂದು ಅರ್ಥ. ಬಸವಾದಿ ಶರಣರ ಮಾರ್ಗದರ್ಶನದಲ್ಲಿ ನಡೆಯುವ ನಾವೆಲ್ಲರೂ ಚಿಂತನೆ ಮಾಡಬೇಕು. ನಾವು ನಡೆದು ಬಂದ ದಾರಿಯ ಬಗ್ಗೆ ಸಿಂಹಾವಲೋಕನ ಮತ್ತು ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು. ನಮ್ಮಒಳಗಿನಿಂದ ಬದಲಾವಣೆ ಪ್ರಾರಂಭವಾಗಬೇಕು. ಎಲ್ಲಾ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರವಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.