ಬೆಂಗಳೂರು : ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು, ಅಪರಾಧಗಳಲ್ಲಿ ಭಾಗಿಯಾಗುವುದನ್ನು, ಸಹಿಸುವುದಿಲ್ಲ ಎಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಚಿವರು, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ಜೀವ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರು, ಆ ನಿಟ್ಟಿನಲ್ಲಿ ಹೊಣೆಗಾರಿಕೆ ಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.
ಪಿಎಸೈ ಅಕ್ರಮ ನೇಮಕಾತಿ ಯಲ್ಲಿ ತನಿಖೆ ನಡೆಸುತ್ತಿರುವ ವಿಷಯದಲ್ಲಿ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳ ಪಾತ್ರ ವಿರುವ ಬಗ್ಗೆ ಪ್ರಸ್ತಾಪಿಸಿ, ವಿಷಾದಿಸಿದ ಸಚಿವರು, ಅಪರಾಧ ಪತ್ತೆ ಹಚ್ಚುವವರೆ ಅಪರಾಧ ಚಟುವಟಿಕೆ ಗಳಲ್ಲಿ ಭಾಗಿಯಾಗುವುದಾದರೆ ಸಾರ್ವಜನಿಕರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
“ಸಾರ್ವಜನಿಕರು ಇಲಾಖೆಯ ಮೇಲೆ ಹೊಂದಿರುವ ಗೌರವ ಹಾಗೂ ನಂಬಿಕೆಯನ್ನು ಕಾಪಾಡಬೇಕು” ಎಂದು ಸಚಿವರು ತಿಳಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ರಕ್ತ ಚಂದನ ಮರಗಳ ಕಳ್ಳ ಸಾಗಾಣಿಕೆ, ಅಕ್ರಮ ಮರಳು ಗಾರಿಕೆ ಹಾಗೂ ಮಾದಕ ವಸ್ತುಗಳ ಜಾಲಗಳ ಬಗ್ಗೆ ದೂರುಗಳಿದ್ದು ಅಂಥಹ ಚಟುವಟಿಕೆಗಳ ನಿವಾರಣೆಗೆ ತೀವ್ರ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ಸರಗಳ್ಳತನ, ಮನೆ ದರೋಡೆ, ಕಳ್ಳತನ ಪ್ರಕರಣ ಗಳನ್ನು ತಡೆಗಟ್ಟಲು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಡಾನ್ಸ್ ಬಾರ್ ಗಳು, ಮಟ್ಕಾ, ಮಾನವ ಕಳ್ಳ ಸಾಗಾಣಿಕೆ ಮತ್ತು ವೈಶ್ಯಾವಟಿಕೆ ಯಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವರು ನಿರ್ದೇಶಿಸಿದರು.
ಅಕ್ರಮ ವಾಗಿ ಬಂದು ನೆಲೆಸಿರುವ ಬಾಂಗ್ಲಾದೇಶ ನಾಗರಿಕರು ಹಾಗೂ ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸಲು, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಸರ್ವೇ ನಡೆಸಿ ವರದಿ ನೀಡಬೇಕು, ಎಂದೂ ಸಚಿವರು ಸೂಚಿಸಿದರು.
ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ದೇಶಪಾರು ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ತಕ್ಷಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಅತ್ಯುತ್ತಮ ಕರ್ತವ್ಯ ನಿರ್ವಹಣೆಗೆ ಇರಬಹುದಾದ ಅಡ್ಡಿ ಆತಂಕಗಳ ಬಗ್ಗೆ ಪ್ರಶ್ನಿಸಿದ ಸಚಿವರು, ಸರಕಾರದಿಂದ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.
ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ರಕ್ತಚಂದನ ಮರಗಳ ಅಕ್ರಮ ಸಾಗಣೆ, ಗಾಂಜಾ ಹಾಗೂ ಮಾದಕ ವಸ್ತುಗಳ ಜಾಲ ಚಟುವಟಿಕೆಗಳನ್ನು ನಿಯಂತ್ರಿಸಲು ಆದ್ಯ ಗಮನ ನೀಡುವಂತೆಯೂ, ಸಚಿವರು ಸೂಚಿಸಿದರು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಮತಾಂತರ ಪ್ರಕರಣ ಗಳು ನಡೆಯುತ್ತಿರುವ ಬಗ್ಗೆಯೂ ದೂರುಗಳಿದ್ದು, ಆಮಿಷದ ಹಾಗೂ ಬಲವಂತದ ಮತಾಂತರ ಪ್ರಕರಣ ಗಳ ವಿರುದ್ಧ, ಹೊಸ ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ಅಕ್ರಮ ಗೋವುಗಳ ಹತ್ಯೆ ಹಾಗೂ ಸಾಗಣಿಕೆ ವಿರುದ್ಧವೂ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ, ಸಚಿವರು ನಿರ್ದೇಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.