ಬೆಂಗಳೂರು: ಕಾಯಕದಲ್ಲಿಯೇ ಸ್ವರ್ಗವನ್ನು ಕಾಣುವ, ಸಮಾನತೆ, ಸಮಾನ ಅವಕಾಶಗಳನ್ನು ಒದಗಿಸುವ ಹಾಗೂ ಸೈದ್ಧಾಂತಿಕ ಮತ್ತು ವೈಜ್ಞಾನಿಕ ಚಿಂತನೆ ಮಾಡುವ ಸಮಾಜ ನಿರ್ಮಾಣವನ್ನು ಬಸವಣ್ಣನವರು ಬಯಸಿದ್ದರು ಹಾಗೂ ಮಾಡಿದ್ದರು. ಹೀಗಾಗಿ ಬಸವಪಥದಲ್ಲಿಯೇ ನಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಜತ ಮಹೋತ್ಸವ-2022”ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರ ದುಡಿಯುವ ಅವಕಾಶವಿಲ್ಲದವರಿಗೆ ಅವಕಾಶ ಗಳನ್ನು ಕಲ್ಪಿಸುತ್ತಿದೆ. ಆರ್ಥಿಕತೆ ಎಂದರೆ ದುಡ್ಡಲ್ಲ. ಅದು ಜನರ ದುಡಿಮೆ. ದುಡಿಮೆಯೇ ದೊಡ್ಡಪ್ಪ ಎಂದು ಬದಲಾಯಿಸುತ್ತಿದ್ದೇವೆ. ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯ ಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡಿದರೆ, ಅದೇ ಪೂಜೆ ಹಾಗೂ ಸ್ವರ್ಗ ಎನ್ನುವುದು ಬಸವಣ್ಣನ ಚಿಂತನೆ ಎಂದರು.ಮುಂದಿನ ವರ್ಷ ಬಸವ ಪ್ರಶಸ್ತಿ ಸಮಾರಂಭವನ್ನು ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ತಿಳಿಸಿದರು. ಹಾಗೂ ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆಗಳನ್ನು ತಿಳಿಸಿದರು.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಬಸವಣ್ಣ ನವರ ವಿಚಾರ ಹಾಗೂ ಕಾಯಕವೇ ಕೈಲಾಸ ಎಂಬ ಎರಡೂ ವಿಚಾರಗಳನ್ನು ಬೆರೆಸಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆ. ಬಸವಣ್ಣ ಅವರ ಪ್ರಭಾವ ನಮ್ಮ ಪ್ರಧಾನಮಂತ್ರಿ ಗಳಿಗೆ ಇದೆ. ನೂತನ ಸಂಸತ್ತಿಗೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಅವರು ಮ್ಯಾಗ್ನಾ ಕಾರ್ಟ ಕ್ಕೂ ಮುನ್ನ ಅನುಭವ ಮಂಟಪವನ್ನು ಬಸವಣ್ಣ ರೂಪಿಸಿದ್ದರು ಎಂದು ಉಲ್ಲೇಖಿಸಿದ್ದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಮರಿಸಿದರು.
ಬಸವಣ್ಣ ಇಂದಿನ ಎಲ್ಲಾ ಸಮಸ್ಯೆಗಳಿಗೂ ತನ್ನ ವಚನದಲ್ಲಿ ಪರಿಹಾರ ನೀಡಿದ್ದಾರೆ. ಪಾಶ್ಚಿಮಾತ್ಯ ದೇಶದ ಹತ್ತು ಕಾಂಮಂಡ್ ಮೆಂಟ್ ಗಳನ್ನು ಹೇಳುವ ಮುನ್ನವೇ ನಮಗೆ ಸರಳವಾಗಿ ಬಸವಣ್ಣ ನಮಗೆ ಹೇಳಿದ್ದಾರೆ. ಕಾಯಕವೇ ಕೈಲಾಸ, ದಾಯವೇ ಧರ್ಮದ ಮೂಲ ಎಂದು ಬದುಕಿನ ಅರ್ಥವನ್ನು ಹೇಳಿಕೊಟ್ಟಿದ್ದಾರೆ. ದುಡಿಮೆ ಮಾಡಿ , ಹಂಚಿ ತಿನ್ನಬೇಕು ಎನ್ನುವ ತತ್ವವಿದೆ. ಎಲ್ಲಿಯೂ ಶೇಖರಣೆ ಮಾಡಬೇಕು ಎಂದು ಹೇಳಿಲ್ಲ. ಆಧ್ಯಾತ್ಮಿಕ ವಲ್ಲದೆ, ಆರ್ಥಿಕ, ಸಾಮಾಜಿಕ, ಚಿಂತನೆಯನ್ನು ಮಾಡಿದ್ದಾರೆ. ದೊಡ್ಡ ಸಾಮಾಜಿಕ ಪರಿವರ್ತನೆಯ ಹರಿಕಾರರು. ಎಲ್ಲಕ್ಕಿಂತ ಮುಖ್ಯವಾಗಿ ಬಹು ದೊಡ್ಡ ಮಾನವತಾವಾದಿ ಎಂದರು.
ಹಲವಾರು ಕಂದಾಚಾರಗಳನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಅದು ಸಮಯದ ವ್ಯರ್ಥವೂ ಹೌದು. ಮಾನಸಿಕ ವೇದನೆಯೂ ಹೌದು. ನಮ್ಮ ಭವಿಷ್ಯ, ಚಿಂತನೆ, ಬದುಕನ್ನು ನಾವು ನಿಯಂತ್ರಣ ಮಾಡಬೇಕು. ಇನ್ನೊಬ್ಬರ ಕೈಗೆ ಕೊಡುವುದಲ್ಲ. ಯಾರೋ ಬಂದು ಭವಿಷ್ಯ ಬದಲಾಯಿಸುತ್ತಾರೆ ಎಂಬ ಭ್ರಮೆ ಇರಬಾರದು. ಇದು ಬಸವಣ್ಣನವರ ಚಿಂತನೆ. ಮಧ್ಯವರ್ತಿಗಳನ್ನು ದೂರ ಮಾಡಿ. ಅತ್ಯಂತ ಕ್ಲಿಷ್ಟವಾದ ಚಿಂತನೆಯನ್ನು, ಕನ್ನಡ ಭಾಷೆಯಲ್ಲಿ ಸರಳವಾದ ವಚನಗಳ ಮೂಲಕ ಹೇಳಿದರು. ವಚನಗಳಿಗೆ ಹಾಗೂ ಇತರೆ ಸಾಹಿತಿಗಳಿಗೆ ಇರುವ ವ್ಯತ್ಯಾಸವೇನೆಂದರೆ, ಆಧ್ಯಾತ್ಮದ ವಿಚಾರಗಳನ್ನು ಬದುಕಿನಲ್ಲಿ ಉದಾಹರಣೆ ಸಮೇತ ಹೇಗೆ ಅನ್ವಯಿಸುತ್ತದೆ ಹಾಗೂ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಹೇಳಿದ್ದಾರೆ. ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರೊಬ್ಬರೇ ವಚನ ಬರೆಯಲಿಲ್ಲ. ಸಾಕಷ್ಟು ಸಾಧಕರಿದ್ದಾರೆ. ಬಸವಣ್ಣ ತಮ್ಮ ವೈಯಕ್ತಿಕ ವಿಕಾಸದ ಜೊತೆಗೆ ನೂರಾರು ವಚನಕಾರರನ್ನು ಹುಟ್ಟು ಹಾಕಿದರು. ಅವರಿಗೆ ಪ್ರೇರಣೆ ನೀಡಿ ಅವರ ಚೈತನ್ಯ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಇಡೀ ಜಗತ್ತಿಗೆ ಪಸರಿಸಿದರು. ಅತ್ಯಂತ ಸಾಮಾನ್ಯ ಕುಟುಂಬದ ಮಾದಾರ ಚನ್ನಯ್ಯ, ಅಲ್ಲಮಪ್ರಭು, ಅಕ್ಕಮಹಾದೇವಿಯವರೆಗೂ ದೊಡ್ಡ ಸಮೂಹವನ್ನೇ ಸೃಷ್ಟಿ ಮಾಡಿದರು. ಇದನ್ನು ಜಗತ್ತಿನಲ್ಲಿ ಇನ್ಯಾರೂ ಮಾಡಲಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಾವೆಲ್ಲರೂ ಬಸವಣ್ಣನವರ ಬಗ್ಗೆ ಬಹಳ ಒಳ್ಳೆ ಮಾತುಗಳನ್ನಾಡುತ್ತೇವೆ. ವಚನಗಳನ್ನು ನಿರರ್ಗಳವಾಗಿ ಹೇಳುತ್ತೇವೆ. ಆದರೆ ಆಚರಣೆಯಲ್ಲಿ ಎಷ್ಟು ಹಿಂದುಳಿದಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುತ್ತೇವೆ. ಅಂದರೆ, ಅಸಮಾನತೆ, ಲಿಂಗಬೇಧ, ಮೂಢನಂಬಿಕೆಗಳ ವಿರುದ್ಧ ಅವರು ಮಾಡಿದ ಹೋರಾಟ, ಬಸವಣ್ಣನವರು ಮಾಡಿದ್ದ ವೈಚಾರಿಕ ಕ್ರಾಂತಿ ಎಲ್ಲವೂ ಪ್ರಸ್ತುತ ಎಂದ ಹಾಗಾಯಿತು. 800 ವರ್ಷಗಳಾದರೂ ನಾವಿನ್ನೂ ಅದೇ ಸ್ಥಾನ ದಲ್ಲಿ ಇದ್ದೇವೆ ಎಂದರೆ ಆತ್ಮಾವಲೋಕನ ಮಾಡಿಕೊಳ್ಳಲು ನೀಡು ಸಕಾಲ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಬಸವಣ್ಣನವರ ಅನುಯಾಯಿಗಳು ಈ ಬಗ್ಗೆ ಹೆಚ್ಚಿನ ವಿಚಾರ ಮಾಡಬೇಕಿದೆ. ಬಸವಣ್ಣನವರ ವೈಚಾರಿಕ ಚಿಂತನೆಯನ್ನು ನಾವು ಸಮಾಜದಲ್ಲಿ ಆಚರಣೆಗೆ ತರುವಂಥ ಪ್ರಯತ್ನಗಳ ಕಾರ್ಯಕ್ರಮ ರೂಪಿಸುವ ಕಾಲ ಬಂದಿದೆ. ಬಸವಣ್ಣ ಮೊದಲು ತನ್ನ ಅಂತಃಕರಣವನ್ನು ಶುದ್ದಿ ಮಾಡಿಕೊಂಡರು. ಅವರೂ ನಮ್ಮಂತೆಯೇ ಮನುಷ್ಯರಾಗಿ ಹುಟ್ಟಿದ್ದು. ಯಾರೂ ಅವರನ್ನು ದೇವರನ್ನಾಗಿ ಮಾಡಲು ಹೋಗಬೇಡಿ ಎಂದರು. ಅವರು ಈಗಾಗಲೇ ದೇವರ ಸ್ಥಾನದಲ್ಲಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ಸನ್ಮಾರ್ಗದಲ್ಲಿ ಹೋದರೆ, ದೇವ ಮಾನವನಾಗಬಲ್ಲ. ದೇವರೇ ಆಗಬಲ್ಲ ಎಂದು ತೋರಿಸಿದ ಪ್ರೇರಣೆ ಅವರು. ಅವರು ಸಾವಿರ ಹೆಜ್ಜೆಗಳನ್ನು ನಡೆದರೆ ನಾವು ಒಂದು ಹೆಜ್ಜೆಯನ್ನಾದರೂ ನಡೆಯಲು ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಪದ್ಮಶ್ರೀ ಡಾ. ನಾಗೇಂದ್ರ ಅವರಿಗೆ ಬಸವಶ್ರೀ ಪ್ರಶಸ್ತಿ
1/2 pic.twitter.com/rha8Lrdypj— CM of Karnataka (@CMofKarnataka) May 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.