ಬೆಂಗಳೂರು: ಹೊಲಸು ತಿಂದು ಬೇರೆಯವರ ಮುಖಕ್ಕೆ ಒರೆಸುವ ಸಂಪ್ರದಾಯ ಕಾಂಗ್ರೆಸ್ಸಿಗರದು ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಶಾಸಕರಾದ ಪಿ ರಾಜೀವ್ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಅರ್ಕಾವತಿ ಲೇಔಟ್ ಡಿನೋಟಿಫಿಕೇಶನ್ ಹಗರಣದ ದಾಖಲೆಗಳನ್ನು ಮಾಯ ಮಾಡಿ ಕರ್ನಾಟಕದ ಜನತೆಗೆ ಮಾಯಾ ಬಜಾರ್ ದರ್ಶನ ಮಾಡಿದ ಕಾಂಗ್ರೆಸ್ನವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ ಎಂದರು.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಪ್ಪು ಮಾಹಿತಿ, ತಪ್ಪು ಅಂಕಿಅಂಶಗಳ ಮೂಲಕ ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮ ಎಂದು ಟೀಕಿಸಿದ ಅವರು, ಕಾಂಗ್ರೆಸ್ನವರ ಬುದ್ಧಿಮಾತಿನಿಂದ ನಾವೇನೂ ಪಾಠ ಕಲಿಯಬೇಕಿಲ್ಲ. ದೇಶದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಜಗತ್ತಿನ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಸರಕಾರ ತಾನು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿತು. ಬಿಜೆಪಿ ಸರಕಾರವು ಕಾಂಗ್ರೆಸ್ ಸರಕಾರದ ಹಗರಣಗಳನ್ನು ಬೆಳಕಿಗೆ ತಂದಿದೆ. ಭ್ರಷ್ಟಾಚಾರಕ್ಕೆ ಬಿಜೆಪಿ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರ ಇದ್ದಾಗ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಲೋಕೇಶ್, ಸ್ನೇಹಿತರಾದ ಲಕ್ಷ್ಮೀಕಾಂತ್ ಸೇರಿಕೊಂಡು ಸಾರ್ವಜನಿಕರಿಂದ 2013ರಿಂದ 2017ರವರೆಗೆ ಡಿವೈಎಸ್ಪಿ ಮತ್ತಿತರ ಸರಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ 18 ಕೋಟಿ ವಸೂಲಿ ಮಾಡಿದ ಪ್ರಕರಣ ಇದಾಗಿದೆ. ಡಿವೈಎಸ್ಪಿ ರ್ಯಾಂಕ್ ಅಧಿಕಾರಿಯ ದೂರು ಇದಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲೂ ಇದೇ ವಿಚಾರವಾಗಿ ಸರಣಿ ದೂರುಗಳು ದಾಖಲಾಗಿವೆ. ಆದರೆ, ಅದು ಮಾಧ್ಯಮದಲ್ಲಿ ಅದು ಬರದಂತೆ ನೋಡಿಕೊಂಡರು. ತಮ್ಮ ಸರಕಾರದ ಅವಧಿಯಲ್ಲಿ ಹಗರಣ ಮಾಡಲು ರಾಜಾರೋಷವಾಗಿ ಬಿಟ್ಟವರು ಕಾಂಗ್ರೆಸ್ನವರು ಎಂದು ಆಕ್ಷೇಪಿಸಿದರು. ಬಿಜೆಪಿ ಹಗರಣದ ಪಾಲುದಾರ ಆಗುವುದಿಲ್ಲ. ಹಿಂದಿನ ಸರಕಾರದ ರಾಡಿಯನ್ನು ಇನ್ನೊಬ್ಬರ ಮುಖಕ್ಕೆ ಹಚ್ಚಲು ಕಾಂಗ್ರೆಸ್ ಮುಂದಾಗಿದೆ ಎಂದು ದೂರಿದರು.
ಭ್ರಷ್ಟಾಚಾರದಲ್ಲಿ ಯಾರೇ ಭಾಗಿ ಆಗಿದ್ದರೂ, ಯಾವುದೇ ಪಕ್ಷದವರಾಗಿದ್ದರೂ ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ ಎಂದರಲ್ಲದೆ, ಸಿದ್ದರಾಮಯ್ಯ ಸರಕಾರ ವಿದ್ಯಾರ್ಥಿಗಳ ಸಮಾಧಿ ಕಟ್ಟಿದ ಕುರುಡು ಮತ್ತು ಕಿವುಡು ಸರಕಾರ ಎಂದು ತಿಳಿಸಿದರು.
2017ರಲ್ಲಿ ಡ್ರಗ್ ಕೇಸನ್ನು ತನಿಖೆ ಮಾಡದೆ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗಿದ್ದರು. ಆಗ ತನಿಖೆ ಮಾಡಿದ್ದರೆ ಬಿಟ್ ಕಾಯಿನ್ ಹಗರಣ ಆಗುತ್ತಿರಲಿಲ್ಲ ಎಂದು ನುಡಿದರು. ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿಯುತ್ತಿದೆ. ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ನಿಮ್ಮದೇ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಕುರಿತು ನಿಮ್ಮ ಸ್ಪಷ್ಟನೆ ಏನು? ಎಂದು ಪ್ರಶ್ನಿಸಿದರು.
ನಾವು ಭ್ರಷ್ಟಾಚಾರದ ಆರೋಪಗಳು ಬಂದಾಗ ಕೂಡಲೇ ತನಿಖೆಗೆ ಆದೇಶಿಸಿದ್ದೇವೆ. ಅಕ್ರಮ, ಹಗರಣಕ್ಕೆ ಅವಕಾಶ ಆಗಬಾರದೆಂಬ ನಿಲುವು ನಮ್ಮದು ಎಂದು ವಿವರಿಸಿದರು.
ಅರ್ಕಾವತಿ ಹಗರಣದ ಬಗ್ಗೆ ಆಗ ಕಾಂಗ್ರೆಸ್ ಶಾಸಕರು ಆಗ ಪ್ರಶ್ನಿಸಿದ್ದರೇ? ಎಂದು ಕೇಳಿದ ಅವರು, ಪಿಎಸ್ ಐ ನೇಮಕಾತಿ ಹಗರಣ ಸಂಬಂಧ 28 ಜನರನ್ನು ಈಗಾಗಲೇ ಬಂಧಿಸಲಾಗಿದೆ. ವಿವಿಧ ಪಕ್ಷದ ಆರೋಪಿಗಳು ಅದರಲ್ಲಿ ಸೇರಿದ್ದಾರೆ. ಅದನ್ನು ನಾವು ರಾಜಕೀಯಕರಣಗೊಳಿಸಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಪ್ರಚಾರದ ಗೀಳನ್ನು ಅಂಟಿಸಿಕೊಂಡ ವ್ಯಕ್ತಿ. ಅವರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಅವರು ದಂಡಪ್ರಕ್ರಿಯಾ ಸಂಹಿತೆಯನ್ನು ಓದಿ ತಿಳಿದುಕೊಳ್ಳಬೇಕು. ಅಪರಾಧದ ಮಾಹಿತಿ ಇದ್ದರೆ ಅದನ್ನು ತನಿಖಾ ಸಂಸ್ಥೆಗೆ ಕೊಡುವುದು ಅವರ ಜವಾಬ್ದಾರಿ ಆಗಿದೆ. ಆದರೆ, ಪ್ರಿಯಾಂಕ್ ಅವರು ಮಾಹಿತಿ ಕೊಡದೆ ಜವಾಬ್ದಾರಿಯುತ ನಾಗರಿಕ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಅಕ್ರಮಗಳನ್ನು ಮಾಡಿ ಬೇರೆಯವರ ಹೆಗಲಿಗೆ ಕಟ್ಟುವ ಪ್ರವೃತ್ತಿ ಹೊಂದಿದೆ. ಮತ್ತು ನುಣುಚಿಕೊಳ್ಳುವ ಪ್ರವೃತ್ತಿ ಅವರದು ಎಂದು ಟೀಕಿಸಿದರು. ಪಿಎಸ್ಐ ಹಗರಣದ ದಾಖಲೆಗಳಿದ್ದರೆ ಸಿದ್ದರಾಮಯ್ಯನವರು ಅವುಗಳನ್ನು ಪೊಲೀಸರಿಗೆ ಕೊಡಬೇಕು. ಪೊಲೀಸರಿಗೆ ಕೊಡಲಾಗದಿದ್ದರೆ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಲೆಕ್ಕ ಚುಕ್ತಾ ಮಾಡುತ್ತೇನೆ ಎಂಬುದನ್ನು ನೋಡಿದರೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಅನಿಸುತ್ತಿದೆ. ಬಿಜೆಪಿಯ ಈಶ್ವರಪ್ಪ, ಅಶ್ವತ್ಥನಾರಾಯಣ ಅವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಟೂಲ್ಕಿಟ್ ಹಗರಣವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಹಾಗೂ ಅಧಿಕಾರ ಇಲ್ಲದಾಗ ಅರಾಜಕತೆ ಸೃಷ್ಟಿ- ಇದು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ನ ಕೊಡುಗೆ ಎಂದು ತಿಳಿಸಿದ ಅವರು, ಹಗರಣದ ಕುರಿತು ನಾವು ಕಣ್ಣು ಮುಚ್ಚಿ ಕೂರುವುದಿಲ್ಲ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ರಾಡಿ ತೊಳೆಯುವ ಕೆಲಸ ಮಾಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯಿಂದ 40ಕ್ಕೂ ಹೆಚ್ಚು ಪ್ರಕರಣ ಬಂದಾಗ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚಿಸಿ ತಮ್ಮ ಪ್ರಕರಣಗಳನ್ನು ಮುಚ್ಚಿ ಹಾಕಿದ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಪಿತಾಮಹ ಎಂದ ಅವರು, ಲೋಕಾಯುಕ್ತ ಬಲಪಡಿಸುವ ಮಾತಿಗೆ ನಮ್ಮ ಸರಕಾರ ಬದ್ಧವಾಗಿದೆ. ಕಾನೂನು ಚೌಕಟ್ಟಿನೊಳಗೆ ಲೋಕಾಯುಕ್ತಕ್ಕೆ ಬಲ ಹೆಚ್ಚಿಸುವ ಕಡೆ ಗಮನ ಹರಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಆರೂವರೆ ದಶಕಗಳ ಭ್ರಷ್ಟಾಚಾರ ತೊಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಸಾವಿನ ಮನೆಯಲ್ಲಿ ಸ್ವಾರ್ಥದ ರಾಜಕಾರಣ ಮಾಡಲು ಬಯಸುವುದಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ತಾವು ನಿರ್ದೋಷಿ ಎಂದು ಸಾಬೀತಾಗುವವರೆಗೆ ಹಾಗೂ ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ ಎಂದ ಅವರು, ಬಿಜೆಪಿಯಲ್ಲಿ ಆಂತರಿಕವಾಗಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದರು.
ಸಮರ್ಪಕ ತನಿಖೆ ಮಾಡಿ ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳಿಂದ ಭ್ರಷ್ಟಾಚಾರದ ಹಣವನ್ನು ಮರಳಿ ಪಡೆಯಲಾಗುವುದು. ಮರು ಪರೀಕ್ಷೆ ಮಾಡುವುದೊಂದೇ ನ್ಯಾಯ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ರಾಜ್ಯ ವಕ್ತಾರರು ಹಾಗೂ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಮಾಹಿತಿ ಕೊರತೆ ಇದೆ. ಅನೇಕ ಸುಳ್ಳುಗಳನ್ನು ಒಂದರ ಮೇಲೆ ಒಂದರಂತೆ ಪೇರಿಸುತ್ತ ಹೋಗಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಬಿಡಿಎ ಹಗರಣದಲ್ಲಿ ರೀಡು ಮಾಡಿದ್ದು ಯಾರು? ಕೆಂಪಣ್ಣ ಆಯೋಗ ರಚಿಸಿ ಏನಾಯಿತು? ಸ್ಟೀಲ್ ಬ್ರಿಡ್ಜ್ ಯಾಕೆ ವಾಪಸ್ ತೆಗೆದುಕೊಂಡಿರಿ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಇಬ್ಬರು ಚೀಫ್ ಎಂಜಿನಿಯರ್ಗಳಾದ ಚಿಕ್ಕರಾಯಪ್ಪ, ಜಯಚಂದ್ರ ಅವರ ಮೇಲೆ ದಾಳಿ ಆಗಿತ್ತು. ಹಲವಾರು ಕೋಟಿಗಳ ಹಗರಣವದು. ಜಯಚಂದ್ರ ಅವರು ಜೈಲಿಗೆ ಹೋಗುತ್ತಾರೆ. ಆ್ಯಂಟಿಸಿಪೇಟರಿ ಜಾಮೀನು ಪಡೆದ ಚಿಕ್ಕರಾಯಪ್ಪ ಜೈಲಿಗೇ ಹೋಗಲಿಲ್ಲ. ಚಿಕ್ಕರಾಯಪ್ಪ ಅವರನ್ನು ಸಿದ್ದರಾಮಯ್ಯ ರಕ್ಷಿಸಿದರು ಎಂದು ಜಯಚಂದ್ರ ಅವರು ಕಣ್ಣೀರಿನೊಂದಿಗೆ ತಿಳಿಸಿದ್ದಾರೆ. ಈ ಸಂಬಂಧ ದಾಖಲೆ ಕೊಡುವುದಾಗಿ ಹೇಳಿದ್ದರು. ಇವರಿಬ್ಬರಿಂದ ಸಿದ್ದರಾಮಯ್ಯರವರು 1,350 ಕೋಟಿ ರೂಪಾಯಿ ಸಂಗ್ರಹಿಸಿದ್ದಾಗಿ ಜಯಚಂದ್ರ ಹೇಳಿದ್ದರು. ಸಿದ್ದರಾಮಯ್ಯನವರದು ಹವಾಲಾ ಭ್ರಷ್ಟಾಚಾರ ಎಂದು ಜಯಚಂದ್ರ ತಿಳಿಸಿದ್ದರು. ಜಯಚಂದ್ರ ಅವರು ಬಳಿಕ ಶವವಾಗಿ ಆಸ್ಪತ್ರೆಯಿಂದ ಬಂದರು. ಈ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಬೇರೆಯವರ ವಿರುದ್ಧ ಕೆಸರೆರಚಾಟ ಮಾಡುವ ಬದಲು ರಾಜಕೀಯದಿಂದ ನಿವೃತ್ತರಾಗಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ತಿಳಿಸಿದ ಅವರು, ಅವರ ಪಕ್ಷದ ನಾಯಕರ ಪಿಸುಮಾತಿನ ಕುರಿತು ಉದಾಹರಣೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.