ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದ್ದು, ನಾಳೆ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.
ಇಂದು ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು, ಏಪ್ರಿಲ್ 24 ರಂದು ನಮ್ಮ ದೇಶದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ರವರು ಚಾಲನೆ ನೀಡಿದ್ದರು. ಕಳೆದ 9 ದಿನಗಳಿಂದ ಯಶಸ್ವಿಯಾಗಿ ಖೇಲೋ ಇಂಡಿಯಾ ಕ್ರೀಡಾಕೂಟ ನಡೆಯುತ್ತಿದೆ. ನಾಳೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು ನಮ್ಮ ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ರವರು, ಪ್ರಹ್ಲಾದ್ ಜೋಶಿಯವರು, ಅನುರಾಗ್ ಸಿಂಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು , ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ರವರು, ಗೃಹ ಸಚಿವ ಅರಗ ಜ್ಞಾನೇಂದ್ರರವರು, ನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈ ಕ್ರೀಡಾಕೂಟದಲ್ಲಿ ದೇಶದ 209 ವಿಶ್ವವಿದ್ಯಾನಿಲಯಗಳಿಂದ 3886 ಕ್ರೀಡಾಪಟುಗಳಿಗೆ ಹಾಗೂ ಒಟ್ಟು 8000 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕ್ರೀಡಾಪಟುಗಳು ಸೇರಿದಂತೆ 8 ಸಾವಿರ ಜನರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳು ಮತ್ತು ಆತಿಥ್ಯ ಸೇವೆಗಳನ್ನು ನೀಡಿರುವುದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಅದರಲ್ಲಿ ಮುಖ್ಯವಾಗಿ 500 ವಿದ್ಯಾರ್ಥಿಗಳಿಂದ ʼಯೋಗ’ ಪ್ರದರ್ಶನ ಮತ್ತು ʼಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್-2021ʼರ 500 ಸ್ಪರ್ಧಾಳುಗಳಿಂದ ʼಆಜಾದಿ ಕಾ ಅಮೃತ ಮಹೋತ್ಸವʼದ ನೃತ್ಯ ಮತ್ತು ಸಂಗೀತದ ಜೊತೆ ಬಹುವರ್ಣಗಳ ಲೇಸರ್ ಬೆಳಕಿನ ಪ್ರದರ್ಶನ ಇರಲಿದೆ. ಹಸಿರು ಕ್ರೀಡಾಕೂಟ ಎಂದು ಘೋಷಿಸಲಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿರುವ 3886 ಕ್ರೀಡಾಪಟುಗಳು ತಲಾ ಒಂದೊಂದು ಗಿಡಗಳನ್ನು ನೆಡಬೇಕು ಎಂದು ತಿಳಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದರು.
2 ನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಆಯೋಜಿಸಿರುವ ಕರ್ನಾಟಕಕ್ಕೆ ಮೊದಲ ಅಂತರ್ ವಿವಿ ಕ್ರೀಡಾಕೂಟ ಆಯೋಜಿಸಿದ ಹಿರಿಮೆ ಕೂಡ ಇದೆ. 1925 ರಲ್ಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ‘ಇಂಟರ್ ಯೂನಿವರ್ಸಿಟಿ ಬೋರ್ಡ್’ ಸ್ಥಾಪಿಸಲಾಗಿತ್ತು. ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಸುಬ್ಬರಾವ್ ಅವರು ಅದರ ಅಧ್ಯಕ್ಷರಾಗಿದ್ದರು. ಮೊದಲ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟ (ಕ್ರಿಕೆಟ್) 1934ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದ ನಡುವೆ ನಡೆದಿದೆ. ಯೂನಿವರ್ಸಿಟಿ ಗೇಮ್ಸ್ ಗಳನ್ನು ಯಶಸ್ವಿಯಾಗಿ ಆಯೋಜಿಸಿರುವ 88 ವರ್ಷಗಳ ಇತಿಹಾಸ ಕರ್ನಾಟಕಕ್ಕೆ ಇದೆ. ಅದೇ ರೀತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ನ್ನು ಕೂಡ ಯಶಸ್ವಿಗೊಳಿಸುವಲ್ಲಿ ನಮ್ಮ ರಾಜ್ಯ ಸರ್ಕಾರ ಸಫಲವಾಗಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಆಯೋಜಿಸಿ ಯಶಸ್ವಿಯಾಗಿದ್ದೇವೆ. ವಿಶ್ವಮಟ್ಟದ ಯಾವುದೇ ಕ್ರೀಡಾಕೂಟವನ್ನು ಆಯೋಜಿಸಲು ನಮ್ಮ ಬೆಂಗಳೂರು ಸಿದ್ದವಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಭರವಸೆ ನೀಡಿದರು.
ನಿನ್ನೆಯವರೆಗೂ ನಡೆದಿರುವ ಕ್ರೀಡಾ ಸ್ಪರ್ಧೆಗಳಲ್ಲಿ ಜೈನ್ ಯೂನಿವರ್ಸಿಟಿ 17 ಚಿನ್ನದ ಪದಕಗಳು, 5 ಬೆಳ್ಳಿ ಪದಕಗಳು ಮತ್ತು 4 ಕಂಚಿನ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಲವ್ಲಿ ವಿಶ್ವವಿದ್ಯಾಲಯವು 13 ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನ ಹಾಗೂ
ಪಂಜಾಬ್ ವಿಶ್ವವಿದ್ಯಾಲಯವು 11 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.