ಬೆಂಗಳೂರು: ಮನ:ಪರಿವರ್ತನೆಯಿಂದ ಮಾತ್ರ ಭಯೋತ್ಪಾದನೆ, ಹಿಂಸೆಗಳನ್ನು ನಿಯಂತ್ರಿಸಲು ಸಾಧ್ಯ. ಧರ್ಮಗುರುಗಳು ನೈತಿಕತೆ , ಸತ್ಯವನ್ನು ಪ್ರತಿಪಾದಿಸುವ ಮೂಲಕ ಇವುಗಳನ್ನು ನಿಯಂತ್ರಿಸಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಜಸ್ಟಿಸ್ ಎಂ ರಾಮಕೃಷ್ಣ ಅವರ 86 ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಸ್ಕೂಲಪ್ಪ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು
‘ದಯವೇ ಧರ್ಮದ ಮೂಲ’ ಎಂಬುದು ಎಲ್ಲಾ ಧರ್ಮಗಳ ತಿರುಳು. ನಮ್ಮ ಉತ್ತಮ ನ್ಯಾಯಾಂಗ ವ್ಯವಸ್ಥೆಯಿಂದ ಸಮಾಜದಲ್ಲಿನ ಬಹಳಷ್ಟು ಕಹಿಘಟನೆಗಳನ್ನು ತಡೆಯಲು ಸಾಧ್ಯವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವ್ಯಕ್ತಿ, ಗುಂಪು, ವಿಷಯಾಧಾರಿತ ವಿಶ್ಲೇಷಣೆ ಆಗಬಾರದು. ಇಡೀ ಮನುಕುಲದ ಒಳಿತಿಗೆ ಪ್ರಯತ್ನಗಳಾಗಬೇಕು. ಸಾಕಾರಾತ್ಮಕ ಚಿಂತನೆಯಿಂದಲೂ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಸಂವಿಧಾನದ ಆಶಯವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡಲಾಗುವುದು. ಎಂದು ತಿಳಿಸಿದರು.
ಜಸ್ಟಿಸ್ ಎಂ.ರಾಮಕೃಷ್ಣ ಇವರು ನ್ಯಾಯಾಂಗದ ಆಸ್ತಿ. ಅವರು ಬೆಳೆದು ಬಂದ ರೀತಿ ಅವರ ಪರಿಶ್ರಮ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ. ಇಂತಹ ಲೋಕಲ್ ಹೀರೋಗಳನ್ನು ಗುರುತಿಸಿ ಗೌರವಿಸುವುದರಿಂದ ನಮ್ಮ ಸಮಾಜ, ಸಂಸ್ಕೃತಿ ಶ್ರೀಮಂತವಾಗುತ್ತದೆ. ಇವರ ಮಾರ್ಗದರ್ಶನದಲ್ಲಿ ಸಮಾಜವನ್ನು ಅಭಿವೃದ್ಧಿಗೊಳಿಸಬೇಕು. ಇಸ್ಕೂಲಪ್ಪ ಅಭಿನಂದನಾ ಗ್ರಂಥದ ಮೂಲಕ ಜಸ್ಟಿಸ್ ಎಂ.ರಾಮಕೃಷ್ಣ ಅವರ ಬದುಕಿನ ಎಲ್ಲ ಆಯಾಮಗಳು ಅನಾವರಣಗೊಂಡಿದೆ ಎಂದರು.
ಜಸ್ಟಿಸ್ ಆಗಿ ನಿವೃತ್ತರಾದ ನಂತರ ಎನ್.ವೈ. ಹನುಮಂತಪ್ಪ ಅವರು ಸಂಸದರಾಗಿದ್ದಾರೆ ಎಂದರೆ ಅವರಲ್ಲಿ ಎಷ್ಟು ಸ್ಪೂರ್ತಿ ಇದೆ ಎಂದು ತಿಳಿಯುತ್ತದೆ. ರಾಮಕೃಷ್ಣ ಹಾಗೂ ಎನ್.ವೈ. ಹನುಮಂತಪ್ಪ ಅವರ ಜೋಡಿ ಕರ್ನಾಟಕದ ನ್ಯಾಯಾಂಗ ವೃತ್ತದಲ್ಲಿ ಅದ್ಭುತ ಜೋಡಿ. ಅವರ ಕಾಲದಲ್ಲಿ ಅತ್ಯಂತ ಕಠಿಣ ತೀರ್ಪುಗಳನ್ನು ನಿಷ್ಠುರವಾಗಿ ನೀಡುವ ಕೆಲಸವನ್ನು ಇಬ್ಬರೂ ಮಾಡಿದ್ದಾರೆ. ತೀರ್ಪುಗಳನ್ನು ನೀಡುವುದು ಅತ್ಯಂತ ಕಷ್ಟದ ಸಂಗತಿ. ಆದರೆ ನನಗೆ ನಮ್ಮ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೆಮ್ಮೆ ಇದೆ ಸವಾಲಿನ ಸನ್ನಿವೇಶಗಳಲ್ಲಿಯೂ ಅತ್ಯಂತ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಉಚ್ಛ ನ್ಯಾಯಾಲಯದ ತೀರ್ಪುಗಳನ್ನು ಸರ್ವೋಚ್ಚ ನ್ಯಾಯಾಲಯ ತೆಗೆದು ಹಾಕುವುದು ಬಹಳ ಕಡಿಮೆ. ರಾಷ್ಟ್ರಪತಿಗಳಿಂದ ನೇಮಕಾತಿ ಆದೇಶ ಬಂದರೂ ಅದನ್ನು ಬೇಡ ಎಂದವರು ಎನ್.ವೈ.ಹನುಮಂತಪ್ಪ ಅವರು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.