ನವದೆಹಲಿ: ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಬೇಕರಿ ಉತ್ಪನ್ನಗಳ ತಯಾರಿಕೆ, ಆಟಿಕೆ ಇತ್ಯಾದಿ ಸೇರಿದಂತೆ ಪ್ರದೇಶವಾರು ವಿಶೇಷತೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ ಹಲವೆಡೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ.
ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಜಾರಿಗೆ ತಂದಿರುವ ಈ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅನಾನಸ್ ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ.
ಅನಾನಸ್ ಎಂದ ತಕ್ಷಣ ನೆನಪಾಗುವುದು ಆ ಹಣ್ಣಿನಿಂದ ತಯಾರಿಸಿದ ತಂಪು ಪಾನೀಯ. ಆದರೆ, ಶಿವಮೊಗ್ಗ ಜಿಲ್ಲೆ ಚಿಪ್ಪಳ್ಳಿ ಗ್ರಾಮದ ಮಹಿಳೆಯರು ಅನಾನಸ್ ನಿಂದ ಸಿಹಿ ತಿನಿಸುಗಳು ಸೇರಿದಂತೆ 25ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಪ್ರಬುದ್ಧ ಸ್ವಸಹಾಯ ಸಂಘದ ಸೂಕ್ಷ್ಮ ಉದ್ಯಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮೀಣ ಹೆಣ್ಣು ಮಕ್ಕಳಿಗೆ ಅನಾನಸ್ ಹಣ್ಣಿನ ಮೂಲಕ ಉಪ ಉತ್ಪನ್ನಗಳ ತಯಾರಿಕೆ ಹಾಗೂ ಅದಕ್ಕೆ ಮಾರುಕಟ್ಟೆ ಒದಗಿಸುವ ಕಾರ್ಯಾಗಾರವನ್ನು ನಡೆಸಿ, ತರಬೇತಿ ಒದಗಿಸಲಾಗುತ್ತಿದೆ.
ಈ ಕಾರ್ಯಾಗಾರದಲ್ಲಿ ಅನಾನಸ್ ಮೂಲಕ ಚಾಕ್ಲೇಟ್, ಬರ್ಫಿ, ಜಾಮ್, ಹೋಳಿಗೆ, ಕಡುಬು, ಕೇಸರಿ ಬಾತ್, ಜೆಲ್ಲಿ, ಹಪ್ಪಳ, ಪಾನೀಯ, ಪಾಯಸ ಮುಂತಾದವುಗಳನ್ನು ತಯಾರಿಸುವ ಬಗ್ಗೆ ಗ್ರಾಮೀಣ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದ್ದು, ಹಲವು ಮಹಿಳೆಯರು ಉತ್ಸಾಹದಿಂದ ತರಬೇತಿಯಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಕುರಿತು ಡಿಡಿ ನ್ಯೂಸ್ನೊಂದಿಗೆ ಶಿಬಿರಾರ್ಥಿ ಸರೋಜಮ್ಮ, ಒಂದು ಹಣ್ಣಿನ ವಿವಿಧ ಮಾದರಿ ಬಳಕೆ ಹೊಸ ಅನುಭವ ನೀಡಿದೆ. ಹಲವು ಖಾದ್ಯಗಳನ್ನು ತಯಾರಿಸುವ ಕುರಿತ ಉತ್ತಮ ತರಬೇತಿ ದೊರೆತಿದೆ ಎಂದರು.
ಮತ್ತೋರ್ವ ಶಿಬಿರಾರ್ಥಿ ಶಿಲ್ಪಾ, ಅನಾನಸ್ ಹಣ್ಣಿನ ಬಹುರೂಪಿ ಬಳಕೆಯ ಕುರಿತು ಅರಿವು ಹೊಂದಲು ಕಾರ್ಯಾಗಾರ ಸಹಕಾರಿಯಾಗಿದೆ ಎಂದು ತಿಳಿಸಿದರು.
ಶಿಬಿರದ ಫಲಾನುಭವಿ ಸ್ಮಿತಾ, ಇದೊಂದು ಉತ್ತಮ ಪ್ರಯತ್ನವಾಗಿದ್ದು, ಪ್ರಯೋಗಶೀಲ ಚಿಂತನೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ಆಯೋಜಕಿ ವಾಣಿಶ್ರೀ, ಅನಾನಸ್ ಉಪ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಲಾಗಿದೆ. ಹೊಸ ಉತ್ಪನ್ನಗಳಿಗೆ ಹಲವೆಡೆಯಿಂದ ಬೇಡಿಕೆ ಬರುತ್ತಿರುವುದು ಬೆಳೆಗಾರರಲ್ಲಿ ಹಾಗೂ ಉತ್ಪಾದಕರಲ್ಲಿ ವಿಶ್ವಾಸ ಹೆಚ್ಚಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.