ನವದೆಹಲಿ: ಇತ್ತೀಚೆಗೆ ಯೆಮೆನ್ನಲ್ಲಿ ಹೌತಿ ಬಂಡುಕೋರರಿಂದ ರಕ್ಷಿಸಲ್ಪಟ್ಟ ಏಳು ಭಾರತೀಯ ನಾವಿಕರು ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ನರೇಂದ್ರ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಜನವರಿ 2 ರಂದು ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಯುಎಇ ಧ್ವಜ ಹೊಂದಿದ್ದ ವ್ಯಾಪಾರಿ ಹಡಗು ರ್ವಾಬಿಯನ್ನು ವಶಪಡಿಸಿಕೊಂಡು 14 ನಾವಿಕರನ್ನು ಒತ್ತೆ ಇಟ್ಟುಕೊಂಡಿದ್ದರು. ಒತ್ತೆಯಾಗಿದ್ದ 14 ನಾವಿಕರಲ್ಲಿ 7 ಭಾರತೀಯರು ಸೇರಿದ್ದರು.
ಹೌತಿ ನಿಯಂತ್ರಿತ ಯೆಮೆನ್ ರಾಜಧಾನಿ ಸನಾದಿಂದ ಭಾನುವಾರ ಒಮಾನ್ ನೆರವಿನೊಂದಿಗೆ ನಾವಿಕರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಒಮಾನಿ ರಾಜಧಾನಿ ಮಸ್ಕತ್ನಿಂದ ಇವರು ಭಾರತವನ್ನು ತಲುಪಿದ್ದಾರೆ. ಇವರನ್ನು ಒಮಾನ್ ರಾಯಲ್ ಏರ್ ಫೋರ್ಸ್ಗೆ ಸೇರಿದ ವಿಮಾನದಲ್ಲಿ ಭಾರತಕ್ಕೆ ತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಕ್ಷಿಸಲ್ಪಟ್ಟ ನಾವಿಕರಲ್ಲಿ ಒಬ್ಬರಾದ ಮೊಹಮ್ಮದ್ ಮುನ್ವರ್ ಸಮೀರ್ ಶೇಖ್ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿ, “ನಾವು ಸುಮಾರು ಮೂರೂವರೆ ತಿಂಗಳ ಕಾಲ ಅಲ್ಲಿ ಸಿಲುಕಿಕೊಂಡಿದ್ದೆವು. ಭಾರತ ಸರ್ಕಾರ, ನಮ್ಮ ಪ್ರಧಾನಿ ಮತ್ತು ಭಾರತೀಯ ರಾಯಭಾರ ಕಚೇರಿ ಕಠಿಣ ಮಾತುಕತೆಗಳ ನಂತರ ನಮ್ಮನ್ನು ರಕ್ಷಿಸಿತು. ನಮ್ಮ ಹೃದಯದಿಂದ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.
“ಭಾರತ ಸರ್ಕಾರವು ನಮ್ಮೊಂದಿಗೆ ಇತರ ನಾಲ್ಕು ದೇಶಗಳ ಜನರನ್ನು ಸಹ ರಕ್ಷಿಸಿದೆ” ಎಂದು ಶೇಖ್ ಹೇಳಿದ್ದಾರೆ.
ಲಕ್ನೋ ಮೂಲದ ಮೊಹಮ್ಮದ್ ಜಾಶಿಮ್ ಖಾನ್ ಎಂಬ ಇನ್ನೊಬ್ಬ ನಾವಿಕ ಮಾತನಾಡಿ, “ಯೆಮೆನ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಬಂಡುಕೋರರು ನಮ್ಮ ಹಡಗು ಮತ್ತು ಅದರ ಸರಕುಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದರು, ನಾವು ಹಡಗಿನಲ್ಲಿ ಸಿಬ್ಬಂದಿಗಳಾಗಿದ್ದರಿಂದ ನಮ್ಮನ್ನೂ ಸೆರೆಯಲ್ಲಿರಿಸಲಾಯಿತು. ನಾವು ಭಾರತೀಯರು ಎಂದು ತಿಳಿದ ನಂತರ ಅವರು ನಮ್ಮನ್ನು ಚೆನ್ನಾಗಿ ನಡೆಸಿಕೊಂಡರು ”ಎಂದಿದ್ದಾರೆ.
“ವಿದೇಶಗಳಿಗೆ ಪ್ರಯಾಣಿಸುವ ಭಾರತೀಯರು ಯಾವಾಗಲೂ ಯಾವುದಕ್ಕೂ ಭಯಪಡಬಾರದು. ಅವರು ತಮ್ಮ ಸರ್ಕಾರವನ್ನು ನಂಬಬಹುದು” ಎಂದಿದ್ದಾರೆ.
ರಕ್ಷಿಸಲ್ಪಟ್ಟವರಲ್ಲಿ ಮೂರನೇ ನಾವಿಕ ವೀರ ವೆಂಕಟ ಸುವ ಸಾಯಿ ಗಿರೀಶ್, ಪ್ರಧಾನಿ ಮೋದಿಯವರ ಪ್ರಯತ್ನದಿಂದಾಗಿ ಮನೆಗಳಿಗೆ ಮರಳಲು ಸಾಧ್ಯವಾಯಿತು ಎಂದಿದ್ದಾರೆ.
ಏಳು ಭಾರತೀಯರನ್ನು ಹೊರತುಪಡಿಸಿ, ಯುಕೆಯಿಂದ ಮೂವರು ಮತ್ತು ಇಂಡೋನೇಷ್ಯಾ, ಫಿಲಿಪೈನ್ಸ್, ಮ್ಯಾನ್ಮಾರ್ ಮತ್ತು ಇಥಿಯೋಪಿಯಾದಿಂದ ತಲಾ ಒಬ್ಬರನ್ನು ಬಂಧಿಸಿ ವಿಚಾರಣೆಯಿಲ್ಲದೆ ಯೆಮೆನ್ನಲ್ಲಿ ಇರಿಸಲಾಗಿತ್ತು.
ಸೋಮವಾರ, ಭಾರತ ಸರ್ಕಾರವು ನಾವಿಕರ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ನೆರವುಗಳಿಗಾಗಿ ಒಮಾನಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.