ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ಅತ್ಯಂತ ಶ್ರೇಷ್ಟ ಶೋಮ್ಯಾನ್ ಆಗಿದ್ದರು.ಅವರ ಸಹಜತೆಯೇ ಅವರ ಪ್ರತಿಭೆಯಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ್ ಮೊಮ್ಮಾಯಿ ತಿಳಿಸಿದರು.
ಅವರು ರವೀಂದ್ರ ಕಲಾಕ್ಷೇತ್ರದಲ್ಲಿ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅದ್ಭುತ ನಟನಾ ಕೌಶಲ್ಯದಿಂದ ತನ್ನದೆ ಆದ ಛಾಪನ್ನು ಮೂಡಿಸಿದ ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಮಗುವಿನ ಮುಗ್ಧತೆಯನ್ನು ಜೀವನಪರ್ಯಂತ ಉಳಿಸಿಕೊಂಡು, ಸಮಚಿತ್ತತೆ ಹಾಗೂ ಸ್ಥಿತಪ್ರಜ್ಞತೆ ಕಾಯ್ದುಕೊಳ್ಳುತ್ತಿದ್ದ ಡಾ.ರಾಜ್ ಕುಮಾರ್ ಅವರ ಸಾಧನೆ ದೊಡ್ಡದು. ಕನ್ನಡದ ಮಣ್ಣಿನಲ್ಲಿ ಹುಟ್ಟಿ ಸಾಧನೆ ಮಾಡಿ ನಮೆಗೆಲ್ಲರಿಗೂ ಆದರ್ಶವಾಗಿರುವುದು ನಮ್ಮ ಪುಣ್ಯಭಾಗ್ಯ ಎಂದರು.
ಡಾ. ರಾಜ್ ಕುಮಾರ್ ಒಂದು ದಂತಕಥೆ
ನನಗೆ ಬಹಳ ಆಯಾಸವಾದಾಗ ಡಾ.ರಾಜ್ ಅವರ ಹಾಡುಗಳನ್ನು ಕೇಳಿ ಸಂತೃಪ್ತಿಯನ್ನು ಕಂಡಿದ್ದೇನೆ. ಡಾ. ರಾಜ್ ಕುಮಾರ್ ಒಂದು ದಂತಕಥೆ ಅವರು ನಮ್ಮನ್ನು ಬಿಟ್ಟುಹೋಗಿಲ್ಲ. ಅವರು ಕಥೆಗಾರರಿಗೆ ಪ್ರೇರಣೆಯಾಗಿದ್ದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಎಂಬ ಮಾತಿಗೆ ಪಾರ್ವತಮ್ಮನವರು ಅನ್ವರ್ಥವಾಗಿದ್ದರು ಡಾ.ರಾಜ್ ಕುಮಾರ್ ಆಗಿ ಬೆಳೆಯಲು ಪಾರ್ವತಮ್ಮ ರಾಜ್ ಕುಮಾರ್ ರವರು ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಯಾರ ಮನಸ್ಸನ್ನೂ ನೋಯಿಸದ ಡಾ.ರಾಜ್ ಕುಮಾರ್
ಹೈಸ್ಕೂಲ್ ಹುಡುಗನಾಗಿದ್ದಾಗ ಡಾ.ರಾಜ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಮೊದಲ ಬಾರಿ ಕಂಡಿದ್ದು. ಅವರ ಜೊತೆ ಅಭಿನಯಿಸಿದ ಬಹಳಷ್ಟು ನಟರನ್ನು, ಸಹಕಲಾವಿದರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಯಾರ ಮನಸ್ಸನ್ನೂ ನೋಯಿಸದ ಡಾ.ರಾಜ್ ಕುಮಾರ್ ರವರು ವೀರಪ್ಪನ್ ನವರೊಂದಿಗೆ ಕಾಡಿನಲ್ಲಿದ್ದು ಬಂದ ಮೇಲೆ ಒಮ್ಮೆ ಭೇಟಿಯಾಗಿ, ವೀರಪ್ಪನ್ ಬಗ್ಗೆ ಕೇಳಿದಾಗ ಒಂದು ಶಬ್ಧವನ್ನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ ಎಂದು ಸ್ಮರಿಸಿದರು.
ಡಾ. ಪುನೀತ್ ರಾಜ್ ಕುಮಾರ್ – ಭಾವನಾತ್ಮಕ ಸಂಬಂಧ
ಡಾ.ಪುನೀತ್ ರಾಜ್ ಕುಮಾರ್ ರವರು ತನ್ನ ತಂದೆಯ ಸೂಕ್ಷ್ಮತೆಯನ್ನು ಅಳವಡಿಸಿಕೊಂಡಿದ್ದರು. ಪುನೀತ್ ರೊಂದಿಗೆ ಅಭಿಮಾನಿಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ. ಸಣ್ಣ ವಯಸ್ಸಿನಲ್ಲಿ ಪುನೀತ್ ರವರು ಮಾಡಿರುವ ಸಾಧನೆಯಿಂದ ಚಿರಸ್ಥಾಯಿಯಾಗಿದ್ದಾರೆ, ಕರ್ನಾಟಕ ರತ್ನನ ಪುತ್ರನಿಗೆ ಕರ್ನಾಟಕ ರತ್ನ ನೀಡುವ ಸೌಭಾಗ್ಯ ನಮ್ಮ ಸರ್ಕಾರದ್ದು. ಡಾ.ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಸಧ್ಯದಲ್ಲಿಯೇ ಆಯೋಜಿಸಲಾಗುವುದು. ಕನ್ನಡ ಚಿತ್ರರಂಗ ಉತ್ಕೃಷ್ಟವಾದ ಎತ್ತರಕ್ಕೆ ಬೆಳೆಯಲು ಸರ್ಕಾರದ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.