ಬೆಂಗಳೂರು: ಕಾಂಗ್ರೆಸ್ ಇದ್ದಲ್ಲಿ ಭ್ರಷ್ಟಾಚಾರ, ಕಮಿಷನ್ ಇದೆ. ಪಿಎಫ್ಐ ಮೇಲಿನ ಪ್ರಕರಣಗಳನ್ನು ರದ್ದು ಮಾಡಿದ ಸಿದ್ದರಾಮಯ್ಯ ಅವರು ಒಳಗಿನಿಂದ ಆ ಸಂಘಟನೆ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಪ್ರಶ್ನಿಸಿದರು.
ಹೊಸಪೇಟೆಯಲ್ಲಿ ಇಂದು ಏರ್ಪಡಿಸಿದ್ದ ವಿಶೇಷ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಪಂಚರಾಜ್ಯ ಚುನಾವಣೆಯಲ್ಲಿ ನಾವು ನಾಲ್ಕು ರಾಜ್ಯಗಳಲ್ಲಿ ಮತ್ತೆ ಗೆದ್ದಿದ್ದೇವೆ. ಕಾಂಗ್ರೆಸ್ ಎಲ್ಲ ಕಡೆ ಹೀನಾಯ ಸೋಲು ಕಂಡಿದೆ. ಭಾರತವು ಪರಿವಾರವಾದ, ಜಾತಿವಾದದಲ್ಲಿ ಈಗ ನಂಬಿಕೆ ಇಟ್ಟಿಲ್ಲ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
2023ರಲ್ಲಿ ಬಿಜೆಪಿ ಮತ್ತೆ ಇಲ್ಲಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದೆ. ಜೆಡಿಎಸ್, ಶಿವಸೇನಾ, ಟಿಡಿಪಿ, ಪಿಡಿಪಿ ಸೇರಿದಂತೆ ಹತ್ತಾರು ಪಕ್ಷಗಳು ಪ್ರಾದೇಶಿಕ ಪಕ್ಷವಾಗಿ ದೇಶದ ವಿವಿಧೆಡೆ ಇವೆ. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ನರೇಂದ್ರ ಮೋದಿಯವರ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದು ತಿಳಿಸಿದರು.
ರಾಮನವಮಿ ಶೋಭಾಯಾತ್ರೆಯ ವೇಳೆ ದಾಳಿ, ಸಾಮಾಜಿಕ ಅಶಾಂತಿಯ ಹಿಂದೆ ಯಾರಿದ್ದಾರೆ ಎಂದು ಗುರುತಿಸಿ ಎಂದು ತಿಳಿಸಿದರು. ಭಾರತವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಕಾಸವಾದದಲ್ಲಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ಕೊಡಲಾಗಿದೆ. ಹಸಿವಿನಿಂದ ಯಾರೂ ಸಾಯಬಾರದೆಂಬ ಉದ್ದೇಶ ಇದರಲ್ಲಿದೆ. ಬೊಮ್ಮಾಯಿಯವರು ಮಾಸಾಶನವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಸಂಬಾರ ಪದಾರ್ಥಗಳು ಮತ್ತು ಕಾಫಿ ರಫ್ತು ಹೆಚ್ಚಾಗಿದೆ ಎಂದರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ ಎಂದರು.
ನಾವು ಕುರ್ಚಿಗಳಿಗಾಗಿ ಬಂದಿಲ್ಲ. ಸಂಸದ, ಶಾಸಕ ಆಗಲು ಬಂದಿಲ್ಲ. ಸೇವೆ ಮೂಲಕ ಬದಲಾವಣೆ ತರಲು ನಾವು ಏಜೆಂಟರಾಗಲು ನಾವೆಲ್ಲರೂ ರಾಜಕೀಯಕ್ಕೆ ಬಂದಿದ್ದೇವೆ. ಉಜ್ವಲಾ ಯೋಜನೆ, 11 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ಮೂಲಕ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆ. ಆವಾಸ್ ಯೋಜನೆಯಡಿ ಎಲ್ಲರಿಗೂ ಮನೆ ನೀಡುವ ಕಾರ್ಯ ಮುಂದುವರಿದಿದೆ. ಆಯುಷ್ಮಾನ್ ಭಾರತ್, ಸೌಭಾಗ್ಯ ಯೋಜನೆ, 18 ಸಾವಿರ ಗ್ರಾಮಗಳ ವಿದ್ಯುದೀಕರಣ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಸಾಧ್ಯವಾಗಿದೆ ಎಂದು ವಿವರಿಸಿದರು.
ಕರ್ನಾಟಕವು ಸ್ಟಾರ್ಟಪ್ಗಳ ಪ್ರಮುಖ ಪ್ರದೇಶವಾಗಿದೆ. ಜಿಎಸ್ಟಿ ಸಂಗ್ರಹವೂ ಗಮನಾರ್ಹವಾಗಿ ಬೆಳೆದಿದೆ. ತೆರಿಗೆ ಸಂಗ್ರಹವೂ ಶೇ 34ರಷ್ಟು ಹೆಚ್ಚಾಗಿದೆ. ಭಾರತದ ಬೆಳವಣಿಗೆ ದರವು ಶೇ 7.4ರಿಂದ ಶೇ 8ಕ್ಕೂ ಹೆಚ್ಚಾಗಲಿದೆ ಎಂದು ಸರ್ವೇಗಳು ತಿಳಿಸಿವೆ ಎಂದು ತಿಳಿಸಿದರು. ಶೇ 31ರಷ್ಟು ಉದ್ಯೋಗ ನೀಡಿಕೆ ಬೆಳವಣಿಗೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಬೆಳವಣಿಗೆ ಸಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಭಾರತವು ಇಂದು ವಿಶ್ವಕ್ಕೇ ಕೊಡುಗೆಗಳನ್ನು ನೀಡುತ್ತಿದೆ. ಹಿಂದೆ ಟಿ.ಬಿ. ಔಷಧಿ ಬರಲು 25 ವರ್ಷ ಬೇಕಾಯಿತು. ಟಿಟ್ಯಾನಿಸ್ ಔಷಧಿ ಸಿಗಲು ಹತ್ತಾರು ವರ್ಷ ಬೇಕಾಯಿತು. ಕೋವಿಡ್ 2020ರಲ್ಲಿ ಬಂತು. ಮೋದಿಯವರ ನೇತೃತ್ವದಲ್ಲಿ 2021ರಲ್ಲಿ ಎರಡು ವ್ಯಾಕ್ಸಿನ್ ಸಿದ್ಧಗೊಂಡಿತು. ಮೋದಿಯವರು ಲಸಿಕೆ ನೀಡಿ ಕೋವಿಡ್ ದೂರಗೊಳಿಸಿದರು. ಬಾಂಗ್ಲಾ, ಭೂತಾನ್, ನೇಪಾಲ, ಮಲೇಷ್ಯಾ ಸೇರಿ ಹತ್ತಾರು ದೇಶಗಳಿಗೆ ವ್ಯಾಕ್ಸಿನ್ ಕೊಟ್ಟ ಕಾರಣ ಜಗತ್ತಿನಲ್ಲಿ ಭಾರತದ ಜನಪ್ರಿಯತೆ ಹೆಚ್ಚಿದೆ. ಭಾರತವು ರಫ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ನುಡಿದರು.
ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ್ದಕ್ಕಾಗಿ ಜನತೆಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ “ಮಿಷನ್ 150” ಗಾಗಿ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಉತ್ತಮ ಬೂತ್ ಮೂಲಕ ಗೆಲುವು ನಮ್ಮದಾಗಿಸಿಕೊಳ್ಳಬಹುದು. ಆದ್ದರಿಂದ ಬೂತ್, ಪೇಜ್ ಕಮಿಟಿಗೆ ಮಹತ್ವ ಕೊಡಬೇಕು. ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಸೈನಿಕರಂತೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ ಭೂಮಿ ಇದು. ಈ ಪವಿತ್ರ ಭೂಮಿಗೆ ನಮನಗಳು ಎಂದರು. ಕರ್ನಾಟಕವು ಐಟಿ. ಹಬ್ ಆಗಿ ಹೊರಹೊಮ್ಮಿದೆ. ಕರ್ನಾಟಕದ ಜನರು ಉದ್ಯಮಿಗಳು, ಶ್ರಮ ಪಡುವವರು. ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೊಸ ಭವಿಷ್ಯದತ್ತ ಮುಖ ಮಾಡಿರುವ ಜನತೆ ಇಲ್ಲಿದ್ದಾರೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ 2023ರಲ್ಲಿ ಮತ್ತೆ ಅಧಿಕಾರ ಪಡೆಯುವುದು ಅಷ್ಟೇ ಸತ್ಯ ಎಂದು ನುಡಿದರು.
ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಜಿ ನಾಯಕತ್ವವಿದ್ದು, ಅವರು ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂಥ ನಾಯಕತ್ವ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ವಿಜಯಪತಾಕೆ ಹಾರಿಸಲು ವಿಜಯನಗರದಿಂದಲೇ ಸಂಕಲ್ಪ ಮಾಡಿದ್ದೇವೆ ಎಂದರು.
2ಜಿ ಯಲ್ಲಿ, ಭೂಮಿ ಕೆಳಗೆ ಭ್ರಷ್ಟಾಚಾರ, ಭೂಮಿ ಮೇಲೆ- ಭೂಮಿಯಲ್ಲಿ ಭ್ರಷ್ಟಾಚಾರ ಕಾಂಗ್ರೆಸ್ ಕೊಡುಗೆಯಾಗಿತ್ತು. ದೇಶವನ್ನು ಅತ್ಯಂತ ದುರ್ಬಲವಾಗಿ ಕಾಂಗ್ರೆಸ್ ಮಾಡಿತ್ತು. ಆದರೆ, ಮೋದಿಯವರ ದೇಶಪ್ರೇಮ, ಪ್ರಾಮಾಣಿಕತೆ, ರೈತರ ಮತ್ತು ದುರ್ಬಲರ ಬಗೆಗಿನ ಕಳಕಳಿಯಿಂದ ಬಿಜೆಪಿ ಮತ್ತೆ 2019ರಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ದೇಶದೆಲ್ಲೆಡೆ ಮುಳಗುತ್ತಾ ಸಾಗಿದೆ. ಬಿಜೆಪಿ ಜನಮೆಚ್ಚುಗೆ ಪಡೆದುದಕ್ಕೆ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ತಿಳಿಸಿದರು.
2013ರಿಂದ ಬಂದ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತದಿಂದ ಹಿಂಸೆ, ಕೊಲೆ, ಸುಲಿಗೆ ಹೆಚ್ಚಾಗಿತ್ತು. ಹಿಂಸೆಯ ಹಿಂದಿದ್ದ ಪಿಎಫ್ಐ ಮೇಲಿನ 200ಕ್ಕೂ ಹೆಚ್ಚು ಕೇಸುಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ನವರಿಗೆ ಅಧಿಕಾರ, ಮತಬ್ಯಾಂಕ್ ಮುಖ್ಯ. ಆದರೆ, ದೇಶ ಮುಖ್ಯವಲ್ಲ. ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಆದರೆ ನಿಮ್ಮ ಧ್ವನಿಯೇ ಇಲ್ಲ. ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಬಹುದಿತ್ತು. ಆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಪಕ್ಷದ ವಕೀಲರು ವಾದ ಮಾಡುತ್ತಾರೆ. ಕೋರ್ಟ್ ಆದೇಶ ಪಾಲಿಸಿ ಎಂದು ಮಾತನಾಡಿಲ್ಲ ಯಾಕೆ? ಯಾವ ಕಡೆ ಹೊರಟಿದ್ದೀರಿ ನೀವು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಜೀಪ್ ಖರೀದಿ ಮೂಲಕ ನೆಹರೂ ಕಾಲದಿಂದ ಭ್ರಷ್ಟಾಚಾರ ಮಾಡಿಕೊಂಡು ಬಂದವರು ಕಾಂಗ್ರೆಸ್ಸಿಗರು. ಅಧಿಕಾರದಲ್ಲಿ ಇಲ್ಲದಾಗ ಹತ್ತಿ ಕಟ್ಟಿಗೆಯಂತಿರುತ್ತಾರೆ. ಅಧಿಕಾರ ಬಂದಾಗ ಕಬ್ಬಾಗುತ್ತಾರೆ. ತಹಶೀಲ್ದಾರರಿಂದ ಹಿಡಿದು ಎಲ್ಲ ಕಚೇರಿಯಲ್ಲೂ ಏಜೆಂಟರಿರುತ್ತಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರವನ್ನು ಸಕ್ರಮಗೊಳಿಸಿದ ಕಾಂಗ್ರೆಸ್ ಪಕ್ಷ ಮನೆ ಕಟ್ಟುವುದು, ಹಾಸ್ಟೆಲ್ ಸವಲತ್ತಿನಲ್ಲೂ ಭ್ರಷ್ಟಾಚಾರ, ಕಾಂಟ್ರಾಕ್ಟ್ಗಳಲ್ಲಿ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ತನ್ನ ಪಾಪದ ಪ್ರಾಯಶ್ಚಿತ್ತ ಪಡುವ ದಿನ ದೂರವಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿದ ಕೆಲಸಗಳ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ. ಜನರು ಕಮಲವನ್ನು ಅರಳಿಸಿ ಕೊಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಸಮರ ಇಲ್ಲಿಂದ ಆರಂಭವಾಗಿದೆ. ನವ ಕರ್ನಾಟಕಕ್ಕಾಗಿ ಕಾರ್ಯಕರ್ತರ ಶ್ರಮದಿಂದ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಗಳಾದ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಆನಂದ್ ಸಿಂಗ್, ಕೇಂದ್ರ ಮತ್ತು ರಾಜ್ಯದ ಸಚಿವರು, ಪಕ್ಷದ ಪದಾಧಿಕಾರಿಗಳು, ಆಹ್ವಾನಿತರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.