ಬೆಂಗಳೂರು: ಸಂಭಾವ್ಯ ನಾಲ್ಕನೇ ಅಲೆ ತಡೆಗೂ ಲಸಿಕೆ ಒಂದೇ ಉಪಾಯ. ಅದನ್ನು ವಿಳಂಬ ಮಾಡದೇ ಪಡೆಯಿರಿ ಎಂದು ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ|| ಕೆ. ಸುಧಾಕರ್ ಅವರು ಮನವಿ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ಜುಲೈ ಪ್ರಾರಂಭವಾಗಿ ಸೆಪ್ಟೆಂಬರ್ವರೆಗೆ ನಾಲ್ಕನೇ ಅಲೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅದರೆ, ಅದನ್ನು ಎದುರಿಸಿ ನಿಯಂತ್ರಿಸಲು ಕರ್ನಾಟಕ ಸಿದ್ಧವಾಗಿದೆ ಎಂದು ಅವರು ತಿಳಿಸಿದರು. ಆತಂಕ ಪಡುವ ಸಂದರ್ಭ ಬಂದಿಲ್ಲ. 8 ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದ್ದು, ಅಲ್ಲಿಂದ ಬಂದವರಿಗೆ ತಪಾಸಣೆ ಮಾಡಲಾಗುತ್ತಿದೆ ಎಂದರು.
ಮಾಸ್ಕ್ ಹಾಕುವುದು ಅತ್ಯಗತ್ಯ. ಅದರಲ್ಲಿ ಸಡಿಲಿಕೆ ಇಲ್ಲ ಎಂದ ಅವರು, ನಾಲ್ಕನೇ ಅಲೆಗೆ ಹೆದರಬೇಕಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. 6ರಿಂದ 12 ವರ್ಷದ 5 ಸಾವಿರ ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ. ಅವರ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಇವತ್ತು ಕೋವಿಶೀಲ್ಡ್ ವ್ಯಾಕ್ಸಿನ್ ಸೇರಿ ಒಟ್ಟು 10 ಲಸಿಕೆಗಳ ಉತ್ಪಾದನೆ ಆಗುತ್ತಿದ್ದು, ಲಭ್ಯವಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಲಾಗುತ್ತಿದೆ. ಡಿಎನ್ಎ ವ್ಯಾಕ್ಸಿನ್ ನಮ್ಮಲ್ಲಿ ಮಾತ್ರ ಲಭ್ಯವಿದೆ. ವಿವಿಧ ಕಂಪೆನಿಗಳ ಲಸಿಕೆಗಳ ಉತ್ಪಾದನೆ ನಡೆದಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಅಮೇರಿಕದಲ್ಲಿ ಲಸಿಕೆ ಉತ್ಪಾದನೆ ಆಯಿತು. ಭಾರತ ಅಲ್ಲಿಂದ ಲಸಿಕೆ ಪಡೆಯಬಯಸಿತ್ತು. ಲಸಿಕೆಯಿಂದ ಸಮಸ್ಯೆ ಆದರೆ ನಾವು ಹೊಣೆಗಾರರಲ್ಲ ಎಂದು ಅಮೇರಿಕ ತಿಳಿಸಿತ್ತು. ಆದರೆ, ನಮ್ಮ ಸರಕಾರವು ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಿದ್ಧವಿರಲಿಲ್ಲ ಎಂದು ವಿವರಿಸಿದರು.
ಇಲ್ಲಿನವರೆಗೂ 185 ಕೋಟಿ 90 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಮುಂದುವರಿದ ದೇಶ ಅಮೇರಿಕದಲ್ಲೂ ಲಸಿಕೆ ಪಡೆಯಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆ ಇರುವ ದೇಶ ಇದಾಗಿದ್ದು, ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ ಎಂದರು.
70 ವರ್ಷದ ದೇಶದ ಆಳ್ವಿಕೆಯಲ್ಲಿ ಆರೋಗ್ಯ ವ್ಯವಸ್ಥೆ ಸಮರ್ಥವಾಗಿರಲಿಲ್ಲ. ಕೇವಲ 2 ವರ್ಷದಲ್ಲಿ ಆರೋಗ್ಯ ವ್ಯವಸ್ಥೆಯನ್ನು ನಾಲ್ಕೈದು ಪಟ್ಟು ಹೆಚ್ಚಳ ಮಾಡಲು ನಮ್ಮ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಾಧ್ಯವಾಗಿದೆ. ಹಸಿವಿನಿಂದ ಸಾವು ಆಗಬಾರದೆಂಬ ದೃಷ್ಟಿಯಿಂದ ಗರೀಬಿ ಕಲ್ಯಾಣ್ ಯೋಜನೆಯಡಿ ಒಂದೂವರೆ ವರ್ಷದಿಂದ ಉಚಿತವಾಗಿ ಆಹಾರಧಾನ್ಯವನ್ನು 80 ಕೋಟಿ ಕುಟುಂಬಗಳಿಗೆ ಕೊಡುತ್ತಿದ್ದಾರೆ. ಇದು ಸಮಾಧಾನದ ಬದುಕು ಕಟ್ಟಿಕೊಳ್ಳಲು ಪೂರಕವೆನಿಸಿತು ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 10.54 ಕೋಟಿ ಲಸಿಕೆ ಕೊಡಲಾಗಿದೆ. ಶೇ 98 ಶೇ ಎರಡನೇ ಡೋಸ್ ಲಸಿಕೆ ನೀಡಿಕೆ ಸಾಧ್ಯವಾಗಿದೆ ಎಂದ ಅವರು, ಕೋವಿಡ್ ಕುರಿತಂತೆ ಉದಾಸೀನತೆ ಸಲ್ಲದು. 32 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಪ್ರಿವೆಂಟಿವ್ ಡೋಸ್ ಕೂಡ ಪಡೆಯಬೇಕು. ವೈರಸ್ ಬೇರೆ ಪ್ರಭೇದದ ಮೂಲಕ ಬರಬಹುದು ಎಂದು ಎಚ್ಚರಿಸಿದರು. ಕೋವಿಡ್ ಅನ್ನು ಸಮರ್ಥವಾಗಿ ಸೆಣಸಲು ಲಸಿಕೆ ಒಂದೇ ಉಪಾಯ. ಭಾರತವೊಂದರಲ್ಲೇ ಉಚಿತವಾಗಿ ಲಸಿಕೆ ಸಿಗುತ್ತಿದೆ. ಬೇರೆ ದೇಶಗಳಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಲಸಿಕೆ ಪಡೆಯುತ್ತಿದ್ದಾರೆ ಎಂದು ವಿವರ ನೀಡಿದರು.
40 ದೇಶಗಳಿಗೆ ಲಸಿಕೆ ಸರಬರಾಜು ಮಾಡಿ ಅಲ್ಲಿಯೂ ಪ್ರಾಣಹಾನಿ ತಪ್ಪಿಸಲಾಗಿದೆ. ಕೋವಿಡ್ ನಿಯಂತ್ರಣ ವಿಷಯದಲ್ಲಿ ನಮ್ಮ ಪ್ರಧಾನಿ ತತ್ವಜ್ಞಾನಿಯಂತೆ ವ್ಯವಹರಿಸಿದ್ದಾರೆ. ಮಾಸ್ಕ್, ಪಿಪಿಇ ಕಿಟ್ ಉತ್ಪಾದನೆಗೆ ಆತ್ಮನಿರ್ಭರ ಭಾರತ್ ಅಡಿಯಲ್ಲಿ ದೇಶ ಕಾರ್ಯ ಪ್ರವೃತ್ತವಾಯಿತು. ಕೇವಲ ಮೂರ್ನಾಲ್ಕು ತಿಂಗಳಲ್ಲಿ ಇದು ಸಾಧ್ಯವಾಯಿತು. ವೆಂಟಿಲೇಟರ್, ಐಸಿಯು ಬೆಡ್ ಮೊದಲಾದವುಗಳನ್ನು ತಯಾರಿಸುವ ಸಂಸ್ಥೆಗಳೂ ಬಂದವು. ವೇಗವಾಗಿ ಕಾರ್ಯ ನಿರ್ವಹಿಸಿ ನಾವು ಕೋವಿಡ್ ನಿಯಂತ್ರಿಸಿದ್ದೇವೆ ಎಂದರು.
ಪ್ರಧಾನಿಯವರು ರಾಜ್ಯಕ್ಕೆ 243 ಆಮ್ಲಜನಕ ಪ್ಲಾಂಟ್ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ಪೈಕಿ 233 ಆರಂಭಗೊಂಡಿವೆ. ಬೇರೆ ದೇಶಕ್ಕೆ ಲಸಿಕೆ ಕೊಟ್ಟ ಕಾರಣ ಹಲವು ದೇಶಗಳು ನಮಗೆ ಆಕ್ಸಿಜನ್ ಕಳುಹಿಸಿಕೊಟ್ಟವು. ಲಸಿಕೆ ಬಂದಾಗ ಮೊದಲು ಕೊರೊನಾ ವಾರಿಯರ್ಗಳಿಗೆ ಆದ್ಯತೆ ಕೊಡಲಾಯಿತು. ಜನರಿಗಾಗಿ ಕೆಲಸ ಮಾಡುವವರಿಗೆ ಮೊದಲು ಲಸಿಕೆ ಕೊಡಲಾಯಿತು ಎಂದು ಮಾಹಿತಿ ನೀಡಿದರು.
ಇಂದಿಗೂ ಕೂಡ ಬೇರೆ ಬೇರೆ ದೇಶಗಳು ಲಸಿಕೆ ವಿವರವನ್ನು ಚೀಟಿಯಲ್ಲಿ ಬರೆದುಕೊಡುತ್ತಿದ್ದಾರೆ. ನಮ್ಮ ದೇಶದಲ್ಲಿ ಕೋವಿನ್ ಆ್ಯಪ್ ಮೂಲಕ ಡಿಜಿಟಲೈಸ್ಡ್ ಸ್ಲಿಪ್ ಕೊಡಲಾಗುತ್ತಿದೆ. ಅಮೇರಿಕ ಸೇರಿ 50 ದೇಶಗಳಿಗೆ ಈ ತಂತ್ರಜ್ಞಾನವನ್ನು ನಾವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದೀಗ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕೊಡಲಾಗುತ್ತಿದೆ. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಮನವಿ ಮಾಡಿದರು. ಲಸಿಕೆ ವಿಚಾರದಲ್ಲಿ ಕೆಲವು ವಿರೋಧ ಪಕ್ಷಗಳು ರಾಜಕಾರಣ ಮಾಡಿದ್ದರು. ಪ್ರಾರಂಭದಲ್ಲಿ ಜನರಿಗೆ ಹೆದರಿಸಿದರು. ಹಂದಿಯಿಂದ ಏನೋ ಮಾಡಿದ್ದಾರೆಂದು ಒಂದು ವರ್ಗದ ಜನರನ್ನು ಹೆದರಿಸಿದ್ದರು. ಲಸಿಕೆ ಬಂದ ಬಳಿಕ ಇನ್ನೂ 4 ವರ್ಷ ಬೇಕೆಂದು ಟೀಕಿಸಿದರು. ಅವಿಶ್ವಾಸ- ಅಸಹಕಾರವನ್ನು ಮುಂದುವರಿಸಿದ್ದರು ಎಂದು ವಿವರಿಸಿದರು.
ವಿರೋಧ ಪಕ್ಷದವರ ಟೀಕೆಯ ನಡುವೆಯೂ ನಮ್ಮ ಬದ್ಧತೆ ಬದಲಾಗಲಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಿದೆವು. ಇದು ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಯಿತು ಎಂದು ತಿಳಿಸಿದರು.
ಹಿಂದೆ ಸ್ಪಾನಿಶ್ ಫ್ಲೂನಲ್ಲಿ ಹಸಿವಿನಿಂದ ಸತ್ತಿದ್ದರು. ಆದರೆ, 2021ರ ಜನವರಿ 16ರಂದು ಇಡೀ ದೇಶದಲ್ಲಿ ಏಕಕಾಲಕ್ಕೆ ಲಸಿಕಾಕರಣ ಆರಂಭಿಸಿದರು. 2020ರಲ್ಲಿ ಕೋವಿಡ್ ವೈರಸ್ ಪ್ರವೇಶ ಮಾಡಿತ್ತು. ಅಂದಿನ ಸ್ಥಿತಿಯಲ್ಲಿ ಶತಮಾನದಲ್ಲೇ ಕಾಣದ ಸಾಂಕ್ರಾಮಿಕ ರೋಗ. ಪ್ರಾಣಿಯಿಂದ ಮನುಷ್ಯನಿಗೆ ಬರುವ ವೈರಸ್ ಇದಾಗಿದ್ದು, ವೈದ್ಯಕೀಯ ಜಗತ್ತಿಗೂ ಕುತೂಹಲ ಮೂಡಿಸಿದ ಕಾಯಿಲೆ. ಪ್ರಧಾನಿಯವರು ಒಬ್ಬ ಮುತ್ಸದ್ಧಿ ನಾಯಕರಾಗಿ ಇದನ್ನು ಸಮರ್ಥ- ಸಮಗ್ರವಾಗಿ ನಿರ್ವಹಿಸಿದ್ದು, ಇದೊಂದು ಕೇಸ್ ಸ್ಟಡಿ ಆಗಲಿದೆ ಎಂದು ನುಡಿದರು.
ಭಾರತವು 135 ಕೋಟಿ ಜನರಿರುವ ದೇಶ. ಅನಕ್ಷರಸ್ಥರು, ಬಡತನ ಇರುವ ಕಾರಣ ಲಕ್ಷಾಂತರ ಜನರು ಸಾವಿಗೀಡಾದಾರು ಎಂದು ವಿದೇಶಗಳಲ್ಲಿ ಅನೇಕರು ಆರಂಭದಲ್ಲಿ ಅಭಿಪ್ರಾಯಪಟ್ಟಿದ್ದರು. ಆಗ ಪ್ರಧಾನಿಗಳು ಎಲ್ಲ ಮುಖ್ಯಮಂತ್ರಿಗಳ ಜೊತೆ ನಿಕಟ ಸಂಪರ್ಕ ಹೊಂದಿ ಅನೇಕ ವಿಚಾರಗಳಲ್ಲಿ ವಿಚಾರವಿನಿಮಯ- ಮಾರ್ಗದರ್ಶನ ಆರಂಭಿಸಿದ್ದರು. ಲಸಿಕೆ ಒಂದರಿಂದಲೇ ಇದರ ನಿಯಂತ್ರಣ ಸಾಧ್ಯ ಎಂದು ಅವರಿಗೆ ಅರಿವಿತ್ತು. ವಿಜ್ಞಾನಿಗಳು, ವ್ಯಾಕ್ಸಿನ್ ಸಂಶೋಧಕರಿಗೆ ನೈತಿಕ ಸ್ಫೂರ್ತಿ, ಆರ್ಥಿಕ ಸಹಕಾರ, ಪರವಾನಗಿ ನೀಡಿ ಉತ್ತೇಜನ ನೀಡಿದರು ಎಂದು ವಿವರಿಸಿದರು.
135 ಕೋಟಿ ಜನರುಳ್ಳ ದೇಶದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಇಲ್ಲಿಯೂ ಪಾಲನೆ ಆಗಿದ್ದು ಊಹಿಸಲೂ ಕಷ್ಟ. ಹಿಂದಿನ ಆಡಳಿತದಲ್ಲಿ ಹೆಪಟೈಟಿಸ್ ಬಿ ವ್ಯಾಕ್ಸಿನ್ 20-25 ವರ್ಷಗಳ ಬಳಿಕ ಬಿಸಿಜಿ ವ್ಯಾಕ್ಸಿನ್ 45 ವರ್ಷಗಳ ಬಳಿಕ ಬಂದಿತ್ತು. ಆದರೆ, ಕೋವಿಡ್ ವ್ಯಾಕ್ಸಿನ್ 2020ರ ಡಿಸೆಂಬರ್ನಲ್ಲಿ ವಿಶ್ವಕ್ಕೆ ಪರಿಚಯವಾದರೆ, 2021ರ ಜನವರಿಯಲ್ಲೇ ನಮ್ಮ ದೇಶಕ್ಕೂ ಪರಿಚಯಗೊಂಡಿತು ಎಂದರು.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್.ಆರ್.ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.