ಬೆಂಗಳೂರು : ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲಾಗಿ ಹಮ್ಮಿಕೊಂಡಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನಃ ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ: ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚಾರಣೆಯನ್ನು ಸಮಾನತಾ ದಿನ ಎಂದು ಆಚರಿಸಲಾಗುತ್ತಿರುವುದು ಸೂಕ್ತ ವಾಗಿದೆ. ಬಸವಾದಿ ಶರಣರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಭೆ ಸಮಾರಂಭಗಳಲ್ಲಿ ಕೇಳಿಬರುವ ಮಾತು. 12 ನೇ ಶತಮಾನದಲ್ಲಿ ಸಮಾನತೆ ತರುವುದು, ಲಿಂಗಬೇಧ, ಮೂಢ ನಂಬಿಕೆಗಳನ್ನು ತೊಡೆದುಹಾಕುವುದಕ್ಕಾಗಿ ಹೋರಾಟ ನಡೆಯಿತು. ಅವರ ವಿಚಾರ ಇಂದಿಗೂ ಪ್ರಸ್ತುತ ಎಂದರೆ ಆ ಎಲ್ಲಾ ಅನಿಷ್ಟಗಳು ಇಂದಿಗೂ ಪ್ರಚಲಿತವಾಗಿವೆ ಎಂಬ ಚಿಂತನೆ ಮೂಡುತ್ತದೆ. ಸಮಾಜ ಪರಿವರ್ತನೆಗೆ ನಿರಂತರವಾದ ಶುದ್ದೀಕರಣದ ಅಗತ್ಯವಿದೆ. ನಮ್ಮ ಕನ್ನಡ ನಾಡಿನಲ್ಲಿ ಈ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಮುರುಘಾ ಶರಣರು. ಹಲವಾರು ಟೀಕೆ ಟಿಪ್ಪಣಿಗಳು ಬಂದಾಗಲೂ ಬಸವತತ್ವವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ದಿಟ್ಟ ನಿಲುವಿನಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ, ಧ್ವನಿ ಇಲ್ಲದವರಿಗೆ ಧ್ವನಿ, ಗುರುತಿಲ್ಲದವರಿಗೆ ಗುರುತು ನೀಡಲು ಹಾಗೂ ಎಲ್ಲಾ ಸಮಾಜದವರಿಗೆ ಗುರು ಪೀಠ ಸ್ಥಾಪನೆ ಮಾಡುವ ಮೂಲಕ ಹೊಸ ಮನ್ವಂತರವನ್ನು ತಂದಿದ್ದಾರೆ ಎಂದರು.
ಕಾಕತಾಳೀಯವೆಂದರೆ ಬಸವಣ್ಣನವರು ಪರಿವರ್ತನೆಯ ಕಾಲ 12 ನೇ ಶತಮಾನ, ಇಂದು ಮುರುಘಾ ಶರಣರು ಪರಿವರ್ತನೆ ಮಾಡುವ ಕಾಲ 21 ನೇ ಶತಮಾನ. 12 ನೇ ಶತಮಾನದಲ್ಲಿ ಮಾಡಿದ್ದನ್ನು 21 ನೇ ಶತಮಾನದಲ್ಲಿ ಮಾಡುವ ಅವಶ್ಯಕತೆ ಕಂಡು ಮುರುಘಾ ಶರಣರು ಇದನ್ನು ಮಾಡುತ್ತಿದ್ದಾರೆ. 12 ನೇ ಶತಮಾನದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಸಾಕಷ್ಟು ಪ್ರತಿರೋಧದ ನಡುವೆ ಪರಿವರ್ತನೆ ಆಯಿತು. 21 ನೇ ಶತಮಾನದಲ್ಲಿಯೂ ಅಷ್ಟೇ ಪ್ರತಿರೋಧ ಇದೆ. ಸರ್ವರಿಗೂ ಸಮಾನತೆ ನೀಡುವ ತತ್ವವನ್ನು ನಿರಂತರವಾಗಿ ಸಮಾಜದಲ್ಲಿ ಬೇರೂರಬೇಕೆಂಬ ಸಂಕಲ್ಪವನ್ನು ಈ ಸಮಾಜದಲ್ಲಿ 21 ನೇ ಶತಮಾನದಲ್ಲಿ ಮಾಡುವುದು ಬಹಳ ದೊಡ್ಡ ಸವಾಲು. ಆ ಸವಾಲನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿ ಅದರ ಬೀಜಾಂಕುರ ಮಾಡಿರುವುದು ಮುರುಘಾ ಶರಣರು ಎಂದು ಭಕ್ತಿ ಮತ್ತು ಹೆಮ್ಮೆಯಿಂದ ಹೇಳುವುದಾಗಿ ತಿಳಿಸಿದರು.
ಈ ದೇಶಕ್ಕೆ 5000 ವರ್ಷಗಳ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯ. ಆರ್ಥಿಕ ಅಭಿವೃದ್ಧಿಯಿಂದ ದೇಶ ಮುಂದುವರೆಯುತ್ತದೆ. ದೇಶದ ಅಂತ:ಸತ್ವ ಚಾರಿತ್ರ್ಯವಂತ ಸಮಾಜ. ಪ್ರತಿಯೊಬ್ಬ ನಾಗರಿಕನೂ ಅದರ ಪಾಲನೆಯನ್ನು ಮಾಡಿದರೆ ದೇಶ ಉನ್ನತ ಸ್ಥಾನಕ್ಕೇರುತ್ತದೆ. ಚರಿತ್ರೆಯ ಜೊತೆಗೆ ಚಾರಿತ್ರ್ಯದ ಅವಶ್ಯಕತೆ ಇದೆ. ಈ ದೇಶದಲ್ಲಿ ಬಹಳಷ್ಟು ಆಚಾರ್ಯರಿದ್ದಾರೆ. ಬೇಕಾಗಿರುವುದು ಆಚರಣೆ. ನಮಗೆ ಆತ್ಮ ಶಕ್ತಿ ನೀಡುವ ತತ್ವಗಳನ್ನು ಹೇಳಿದ್ದಾರೆ. ಆದರೆ ಅದನ್ನು ಆಚರಣೆಗೆ ತರಬೇಕಿದೆ. ಇದನ್ನು ಅರ್ಥಮಾಡಿಕೊಂಡರೆ ಪರಮಪೂಜ್ಯರ ಧ್ಯೇಯಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಮನಪರಿವರ್ತನೆಯಿಂದ ಜಗತ್ತು ಪರಿವರ್ತನೆ ಆಗುತ್ತದೆ. ಜಗತ್ತಿನಲ್ಲಿ ಅತ್ಯಂತ ಪ್ರಮುಖ ಪರಿವರ್ತನೆ ಆಗಿರುವುದು ದೊಡ್ಡ ದೇಶ, ಸಂಸ್ಥೆಗಳಿಂದ ಅಲ್ಲ. ಪರಿವರ್ತನೆಯಾಗಿರುವುದು ಕೇವಲ ವ್ಯಕ್ತಿ ಮತ್ತು ಶಕ್ತಿಗಳಿಂದ. ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಮಾಜವನ್ನು ಬದಲಾಗಿಸಬೇಕೆಂಬ ಪರಿವರ್ತಕರು ಬುದ್ಧ, ಬಸವ, ಅಲ್ಲಮ ಪ್ರಭು, ಜೀಸಸ್ ಕ್ರೈಸ್ಟ್, ಮೊಹಮ್ಮದ್ ಪೈಗಂಬರ್, ಮಹಾವೀರ ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿದ್ದಾರೆ. ಅವರು ಎಲ್ಲವನ್ನೂ ತ್ಯಾಗ ಮಾಡಿ ಏಕಚಿತ್ತದಿಂದ ಸಮಾಜವನ್ನು ಪರಿವರ್ತನೆ ಮಾಡಬೇಕೆಂದು ಶ್ರಮಿಸಿದರು ಎಂದರು.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲು ಅವರ ಸಮಾಜಮುಖಿ ಕಾರ್ಯಗಳ ಸಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದೆನು.
1/2 pic.twitter.com/WecGei8Bxc— Basavaraj S Bommai (@BSBommai) April 11, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.