ಬೆಂಗಳೂರು: ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಅಭ್ಯುದಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲರಿಗೂ ಸೂರು ನೀಡಲು ಮುಂದಾಗಿದ್ದಾರೆ. ನಮ್ಮ ಪಕ್ಷದ ರಾಜ್ಯ ಸರಕಾರವು ಈ ಯೋಜನೆಯನ್ನು ನಾಗಾಲೋಟದಲ್ಲಿ ಜಾರಿಗೊಳಿಸುತ್ತಿದೆ ಎಂದು ರಾಜ್ಯದ ವಸತಿ ಮತ್ತು ಮೂಲ ಸೌಲಭ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ವಿಭಿನ್ನ ರೀತಿಯಲ್ಲಿ ಜಾರಿಗೊಳ್ಳುತ್ತಿದೆ. ರಾಜ್ಯದಲ್ಲಿ ನಗರ ಪ್ರದೇಶಕ್ಕೆ ಸಂಬಂಧಿಸಿ 8.42 ಲಕ್ಷ ಮನೆಗಳು ಕೇಂದ್ರ ಸರಕಾರದಿಂದ ಮಂಜೂರಾಗಿವೆ ಎಂದು ತಿಳಿಸಿದರು.
ಮನೆಗಳ ನಿರ್ಮಾಣಕ್ಕೆ ಸಬ್ಸಿಡಿಯನ್ನೂ ಕೊಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ನಡೆಸುತ್ತಿದ್ದು, 2.62 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಎಲ್ಲ ನಗರಗಳಿಗೆ ವಿಸ್ತರಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲೂ ಬಡವರಿಗೆ, ತುಳಿತಕ್ಕೆ ಒಳಪಟ್ಟವರಿಗೆ ಪುರಸಭೆ, ನಗರಸಭೆ, ನಗರಪಾಲಿಕೆ ವ್ಯಾಪ್ತಿಯಲ್ಲಿ 2,500 ಎಕರೆಗೂ ಹೆಚ್ಚು ಸರಕಾರಿ ಜಾಗ ಗುರುತಿಸಿ ಲಕ್ಷಾಂತರ ಮನೆ ನೀಡಲು ಅನುವು ಮಾಡಲಾಗಿದೆ ಎಂದರು.
ಹಳ್ಳಿಗಾಡಿನ 4 ಸಾವಿರಕ್ಕೂ ಹೆಚ್ಚು ಎಕರೆ ಜಾಗದಲ್ಲಿ 30-40 ಅಡಿ ನಿವೇಶನ ನೀಡುವ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಮೂಲಭೂತ ಸೌಕರ್ಯಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆಗೂಡಿ ನಾಗಾಲೋಟದಲ್ಲಿ ಕೆಲಸ ಮಾಡುತ್ತಿರುವುದಾಗಿ ವಿವರಿಸಿದರು.
ನಗರ ಪ್ರದೇಶದಲ್ಲಿ ಎಲ್ಐಜಿ, ಎಂಐಜಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆಗೂಡಿ ನಾಗಾಲೋಟದಲ್ಲಿ ಸೇರಿದಂತೆ ವಿವಿಧ ಮಾದರಿಯ ಮನೆಗಳ ನಿರ್ಮಾಣ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ. ಸಾಲ ಕೊಡಿಸುವ ಕಾರ್ಯಕ್ಕೆ ಈ ಹಿಂದಿನ ಸರಕಾರಗಳು ಕೈ ಹಾಕಿರಲಿಲ್ಲ. 92 ಸಾವಿರ ಮನೆಗಳು ಅರ್ಧಂಬರ್ಧ ಕೆಲಸ ಮುಗಿಸಿ ಹಾಗೇ ಬಿದ್ದಿದ್ದವು. ಇದಕ್ಕೆ ಆದ್ಯತೆ ನೀಡಲು ಸ್ವತಃ ಸುತ್ತಾಡಿದ್ದೇನೆ. 2019ರಲ್ಲಿ ಮನೆಗಳ ಕುರಿತು ಸಮೀಕ್ಷೆ ಮಾಡಿದ್ದೇವೆ. ನಗರ- ಗ್ರಾಮೀಣ ಪ್ರದೇಶದಲ್ಲಿ 3.37 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಿದ್ದೇವೆ. ಇದಕ್ಕಾಗಿ 9,228 ಕೋಟಿ ರೂಪಾಯಿ ಖರ್ಚಾಗಿದೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.66 ಲಕ್ಷ ಮನೆಗಳು ಮಂಜೂರಾಗಿವೆ. 1.08 ಲಕ್ಷ ಮನೆಗಳು ಪೂರ್ಣಗೊಂಡಿವೆ. 37 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 21 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭ ಆಗಬೇಕಿದೆ ಎಂದರು. ಕೇಂದ್ರದ 1,168 ಕೋಟಿ ಅನುದಾನ, 399 ಕೋಟಿ ರಾಜ್ಯದ ಅನುದಾನವನ್ನು ಇದಕ್ಕಾಗಿ ಬಳಸಿದ್ದೇವೆ ಎಂದು ವಿವರಿಸಿದರು.
ನಾನು ಬಂದ ಬಳಿಕ ನಾಗಾಲೋಟದಲ್ಲಿ ಕೆಲಸ ಕಾರ್ಯ ನಡೆದಿದೆ. ಹಿಂದೆ ಬ್ಯಾಂಕ್ ಹತ್ತಿರಕ್ಕೆ ಹೋಗಲು ಬಿಡುತ್ತಿರಲಿಲ್ಲ. ಸಾಲ ನೀಡುವ ಕುರಿತು ಬ್ಯಾಂಕ್ಗಳ ಮುಖ್ಯಸ್ಥರ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಲಾಗಿದೆ. 6 ಸಾವಿರಕ್ಕೂ ಹೆಚ್ಚು ಜನರಿಗೆ ಬ್ಯಾಂಕ್ ಸಾಲ ಸಿಕ್ಕಿದೆ. 2022-23ರಲ್ಲಿ ಇನ್ನೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2.40 ಲಕ್ಷ ಮನೆ ನಿರ್ಮಿಸುವ ಗುರಿ ಇದೆ. ಶೋಷಿತ ಮತ್ತು ತುಳಿತಕ್ಕೆ ಒಳಪಟ್ಟ ಸಮಾಜವರಿಗೆ, ಭಾಷಾ ಅಲ್ಪಸಂಖ್ಯಾತರಿಗೆ ಮತ್ತು ಸಣ್ಣಸಮಾಜದ 65 ಸಾವಿರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದರು. ಈ ಪೈಕಿ 33 ಸಾವಿರ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಸೇರಿದಂತೆ ಬೇರೆಬೇರೆ ನಗರಪಾಲಿಕೆಗಳಲ್ಲಿ ಆವಾಸ್ ಯೋಜನೆ ಜಾರಿ ಆಗುತ್ತಿದೆ. ಈ ಯೋಜನೆ 2015ರಲ್ಲಿ ಕಾರ್ಯರೂಪಕ್ಕೆ ಬಂದರೂ ಇತ್ತೀಚಿನ ದಿನಗಳಲ್ಲಿ ಇದರ ಅರಿವು ಜನರಿಗೆ ಆಗಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಡಿ 1.80 ಲಕ್ಷ ಮನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದು 2018-19ರಿಂದ ಬೂದಿ ಮುಚ್ಚಿದ ಕೆಂಡದಂತಿತ್ತು. ನಾನು ಬಂದ ಬಳಿಕ 35 ಸಾವಿರ ಮನೆಗಳನ್ನು ಪೂರ್ಣಗೊಳಿಸಿದ್ದು, ಉಳಿದವು ವಿವಿಧ ಹಂತದಲ್ಲಿವೆ. ಡಿಸೆಂಬರ್ ಒಳಗೆ ಉಳಿದ ಮನೆಗಳನ್ನೂ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಪ್ರಧಾನಿಯವರು ಕಾಂಗ್ರೆಸ್ ಆಡಳಿತ ಎಂದು ನೋಡದೆ 2017-18ರಲ್ಲಿ 600 ಕೋಟಿ ಹಣ ಬಿಡುಗಡೆ ಮಾಡಿದ್ದರು. ಜಿ ಪ್ಲಸ್ 3 ಮಹಡಿಗೆ ಮಾತ್ರ ಅನುಮತಿ ಇದ್ದರೂ ಅಂದಿನ ಸರಕಾರವು ಜಿ ಪ್ಲಸ್ 14, ಜಿ ಪ್ಲಸ್ 13 ಎಂದು ಗೊಂದಲದ ಗೂಡಾಗಿ ಮಾಡಿದ್ದರು. 42 ಸಾವಿರ ಮನೆಗಳ ಟೆಂಡರ್ ಆಗಿತ್ತು. ಉಳಿದವುಗಳ ಪೈಕಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 1 ಸಾವಿರ ಮನೆಗಳನ್ನು ಪೂರ್ಣಗೊಳಿಸಿದ್ದು, ಈ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ಹಕ್ಕುಪತ್ರ ನೀಡಲಿದ್ದಾರೆ ಎಂದರು. ಉಳಿದಂತೆ ಸುಮಾರು 50 ಸಾವಿರ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಸರಿಯಾಗಿ ಭೂಮಿ ಕೊಡದ ಕಾರಣ ಸಮಸ್ಯೆ ಆಗಿತ್ತು. ನಾನು 500 ಎಕರೆಗೂ ಹೆಚ್ಚು ಜಾಗ ಗುರುತಿಸಿ ನೀಡಿದ್ದು, 50 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ನಡೆದಿದೆ. ಮೂಲಸೌಕರ್ಯಕ್ಕೆ ರಾಜ್ಯ ಸರಕಾರ ಹಣ ಕೊಡುತ್ತಿದೆ. 7 ಸಾವಿರ ಮನೆಗಳಿಗೆ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿದ್ದೇವೆ ಎಂದರು. ಬುದ್ಧಿಮಾಂದ್ಯರು, ಅಂಗವಿಕಲರು, ವೃದ್ಧರಿಗೆ ನೆಲಮಟ್ಟದಲ್ಲಿ ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಯಲಹಂಕ, ದಾಸರಹಳ್ಳಿ, ಕೆ.ಆರ್.ಪುರ, ಮಹದೇವಪುರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಯಶವಂತಪುರ, ಹೆಬ್ಬಾಳ, ಬ್ಯಾಟರಾಯನಪುರದಲ್ಲಿ ಮನೆ ನಿರ್ಮಾಣ ನಡೆದಿದೆ. ಸರಕಾರದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ 3.42 ಲಕ್ಷ ಕುಟುಂಬಗಳಿಗೆ ಪ್ರಾಪರ್ಟಿ ರೈಟ್ ಕೊಡಲಾಗಿದೆ. ಜನರು ಮನೆ ನಿರ್ಮಿಸಲು ಇದು ಪೂರಕವಾಗಿದೆ. ಇದು ಪರಿವರ್ತನೆಗೆ ಇನ್ನೊಂದು ಹೆಸರು ಎಂದು ತಿಳಿಸಿದರು.
2018ರಲ್ಲಿ 18 ಲಕ್ಷ ಮನೆಗಳನ್ನು ಕೇಂದ್ರ ಸರಕಾರ ನೀಡಿತ್ತು. ಈ ಸಂಬಂಧ ಆ್ಯಪ್ ಮಾಡಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಪ್ರತ್ಯೇಕ ಆ್ಯಪ್ ಮಾಡಿತ್ತು. ಇದರಿಂದ ಅಧ್ವಾನದ ವ್ಯವಸ್ಥೆ ಆಗಿತ್ತು. ಆದರೆ, ಅದನ್ನು ಸರಿಯಾಗಿ ಅನುಷ್ಠಾನ ಮಾಡಿರಲಿಲ್ಲ. ಈಗ 6,600 ನಿವೇಶನಕ್ಕೆ ಹಣ, 18 ಲಕ್ಷ ಮನೆಗಳನ್ನು ಮತ್ತೆ ಮಂಜೂರು ಮಾಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದ ತಪ್ಪು ನಿರ್ಧಾರದಿಂದ ಮನೆ ನಿರ್ಮಾಣ ಕಾರ್ಯ ಅಸಮರ್ಪಕವಾಗಿತ್ತು. ಕಾಂಗ್ರೆಸ್ ಆಡಳಿತದ 3 ವರ್ಷ ಆವಾಸ್ ಯೋಜನೆಯಡಿ ಒಂದೇ ಒಂದು ಮನೆ ತರಲು ಸಾಧ್ಯವಾಗಿರಲಿಲ್ಲ ಎಂದು ಆಕ್ಷೇಪಿಸಿದರು.
ಇವರ ತಪ್ಪಿನಿಂದ 1.40 ಲಕ್ಷ ಮನೆ ನೀಡಿದ್ದನ್ನೂ ಹಿಂದಕ್ಕೆ ಪಡೆದಿದ್ದರು. ಸರಕಾರ ಇದೀಗ ಪಾರದರ್ಶಕವಾದ ಆ್ಯಪ್ ರೂಪಿಸಿ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯಿತಿಗಳನ್ನೂ ವಿಂಗಡಿಸಲಾಗಿದೆ. ಆಯ್ಕೆ ಬಗ್ಗೆ ಮಾಹಿತಿ ಕ್ರೋಡೀಕರಣ ನಡೆದಿದೆ ಎಂದರು.
ಎಲ್ಲರಿಗೂ ಸೂರು ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆ. ಆವಾಸ್ ಯೋಜನೆ ವ್ಯವಸ್ಥಿತವಾಗಿ ನಡೆದಿದೆ. ಬೊಮ್ಮಾಯಿ ಅವರ ನಾಯಕತ್ವದ ರಾಜ್ಯ ಸರಕಾರವು ಕೇಂದ್ರದ ನೆರವನ್ನೂ ನಿರೀಕ್ಷಿಸದೆ 5 ಲಕ್ಷ ಮನೆಗಳನ್ನು ಕೊಡುವುದರ ಜೊತೆಗೆ 6,662 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರಕಾರವೇ ಭರಿಸುತ್ತಿದೆ. 4 ಲಕ್ಷ ಗ್ರಾಮೀಣ ಪ್ರದೇಶಕ್ಕೆ ಮತ್ತು 1 ಲಕ್ಷ ನಗರಕ್ಕೆ ಕೊಟ್ಟಿದ್ದೇವೆ ಎಂದು ವಿವರ ನೀಡಿದರು.
ತನಿಖೆ ಮಾಡಿ ವರದಿ ಬಂದಿದೆ. ಸ್ಥಳೀಯ ಆ್ಯಪ್ ಕಾರಣಕ್ಕೇ ಸಮಸ್ಯೆ ಆಗಿದೆ. ಹಿಂದೆ ಬಡವರ ಕೂಗು ದವಡೆಗೆ ಮೂಲ ಎಂಬಂತೆ ಹಿಂದಿನ ಸಿದ್ದರಾಮಯ್ಯರ ಸರಕಾರ ವರ್ತಿಸಿತ್ತು. ಬಂದ ಹಣ ಬ್ಯಾಂಕಿನಲ್ಲೇ ಉಳಿದಿತ್ತು. ಜನರು ತೀವ್ರ ಸಮಸ್ಯೆ ಎದುರಿಸಿದ್ದರು. ಈ ಕುರಿತ ತನಿಖೆಯಿಂದ ಇವೆಲ್ಲ ಮಾಹಿತಿ ಸಿಕ್ಕಿದೆ ಎಂದು ವಿವರಿಸಿದರು. ರದ್ದಾದ ಮನೆಗಳನ್ನೂ ಮತ್ತೆ ಮಂಜೂರು ಮಾಡಿಸಲಾಗುತ್ತಿದೆ ಎಂದರು.
9 ಲಕ್ಷ ಮನೆ ನಿರ್ಮಾಣದ ಗುರಿ ಇದೆ. ಒಂದೇ ದಿನದಲ್ಲಿ ಅದನ್ನು ಮುಗಿಸುವುದು ಕಷ್ಟ. ಬೆಂಗಳೂರು ನಗರದ ಒಂದು ಲಕ್ಷ ಮನೆಯಲ್ಲಿ 1 ಸಾವಿರ ಮನೆಗಳನ್ನು ಶೀಘ್ರವೇ ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ಹಿಂದಿನ ಸರಕಾರದ ತಪ್ಪಿನಿಂದ ಗೊಂದಲವಾಗಿತ್ತು. ಈಗ ಗೊಂದಲ ನಿವಾರಣೆ ಆಗಿದ್ದು, ಮುಖ್ಯಮಂತ್ರಿಗಳು ತಮ್ಮ ಬಜೆಟ್ನಲ್ಲಿ ತಿಳಿಸಿದಂತೆ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಗುಡಿಸಲು ರಹಿತ ರಾಜ್ಯ ಕೇವಲ ನನ್ನೊಬ್ಬನಿಂದ ಸಾಧ್ಯವಿಲ್ಲ. ನಾಗಾಲೋಟದಿಂದ ಓಡುತ್ತಿದ್ದೇನೆ. ಸರಕಾರದ ಒತ್ತಾಸೆಯೂ ಲಭಿಸಿದೆ. ನನಗೆ 71 ವರ್ಷ ಆದರೂ 21ರಂತೆ ಓಡಾಡುತ್ತಿದ್ದೇನೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. 71 ವರ್ಷವಾದರೂ 21 ವರ್ಷದವರಂತೆ ಪಾದರಸದಂತೆ ನಾನು ಕೆಲಸ ಮಾಡುತ್ತಿದ್ದೇನೆ. ಇಚ್ಛಾಶಕ್ತಿ, ಪಕ್ಷದ ಸೂಚನೆಯನ್ನು ನಿಷ್ಕಲ್ಮಷ ರೀತಿಯಲ್ಲಿ ನಿರ್ವಹಿಸುತ್ತಿದ್ದೇನೆ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಹಿಂದೆ ಕೊಳಚೆ ಪ್ರದೇಶಗಳು ಕೇವಲ ಮತಬ್ಯಾಂಕ್ ಪ್ರದೇಶಗಳಾಗಿದ್ದವು. ಪರಿಚಯ ಪತ್ರ ಎಂಬ ಪೆಪ್ಪರ್ಮಿಂಟ್ ಕೊಡುತ್ತಿದ್ದರು. ನಾವು ಹಾಗೆ ಮಾಡಿಲ್ಲ. ಪ್ರಾಪರ್ಟಿ ರೈಟ್ ಕೊಟ್ಟಿದ್ದೇವೆ. ಅಡಮಾನ ಇಲ್ಲದೆ ಸಾಲ ಕೊಡಲಾಗುತ್ತಿದೆ. ಸಬ್ಸಿಡಿ ಕುರಿತ ನಿಯಮಾವಳಿಗಳನ್ನೂ ಸಡಿಲಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.