ಬೆಂಗಳೂರು: ಮತಾಂಧತೆ ಕಾಂಗ್ರೆಸ್ ಪಕ್ಷವನ್ನು ಆವರಿಸಿಕೊಂಡಿದೆ. ಮತಬ್ಯಾಂಕಿಗಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಶಾದಿ ಭಾಗ್ಯದಂಥ ಸಮಾಜ ಒಡೆಯುವ ಯೋಜನೆಯನ್ನು ನರೇಂದ್ರ ಮೋದಿ ಅವರಾಗಲೀ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಾಗಲೀ ಕೊಟ್ಟದ್ದಲ್ಲ. ಅದನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷಗಳಿಗೆ ಟೀಕೆ ಮಾಡಲೇಬೇಕು ಎಂಬ ಧೋರಣೆ ಇದೆ. ಮೆಚ್ಚುವ ಔದಾರ್ಯ ಅವರಲ್ಲಿಲ್ಲ. ಸಮವಸ್ತ್ರ ವಿರುದ್ಧ ಹಿಜಾಬ್ ವಿಷಯವನ್ನು ಎತ್ತಿಕೊಂಡು ಬಂದವರಿಗೆ ಅವರು ಪಾಠ ಹೇಳಬೇಕಿತ್ತು. ದೇಶದ ಶಾಲಾ ಕಾಲೇಜುಗಳಲ್ಲಿ 1983ರಿಂದ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಬಿಜೆಪಿ ಇದನ್ನು ಕಡ್ಡಾಯಗೊಳಿಸಿದ್ದಲ್ಲ. ಹಿಜಾಬ್ ವರ್ಸಸ್ ಸಮವಸ್ತ್ರ ವಿಷಯ ಬಂದಾಗ ಸಮವಸ್ತ್ರ ಪರ ನಿಲ್ಲುತ್ತಾರೋ ಹಿಜಾಬ್ ಪರ ನಿಲ್ಲುತ್ತಾರೋ ಎಂದು ಅವರು ಮೊದಲು ಸ್ಪಷ್ಟಪಡಿಸಲಿ. ನಾವಂತೂ ಯುನಿಫಾರ್ಮ್ ಪರ ನಿಂತಿದ್ದೇವೆ ಎಂದು ಈ ಸಂಬಂಧ ಪ್ರಶ್ನೆಗೆ ಅವರು ಉತ್ತರಿಸಿದರು.
ಬಿಜೆಪಿ ಕೋಮುವಾದಕ್ಕೆ ಕುಮ್ಮಕ್ಕು ನೀಡಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯವರ ಹೆಸರು ಮತ್ತು ಕೆಲಸಕಾರ್ಯಗಳು ನಮಗೆ ಗೆಲುವು ತಂದು ಕೊಟ್ಟಿವೆ. ನಮಗೆ ಕೋಮು ಭಾವನೆಗೆ ಕುಮ್ಮಕ್ಕು ನೀಡುವ ಅವಶ್ಯಕತೆ ಇಲ್ಲ. ಅವರಿಗೆ ಪ್ರಾಮಾಣಿಕತೆ ಇದೆಯೇ? ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದವರು ಯಾರು? ಹಿಜಾಬ್ ಪರ ಎಲ್ಲ ವಕೀಲರು ಕಾಂಗ್ರೆಸ್ನವರೇ ಆಗಿದ್ದರು ಎಂದು ಉತ್ತರ ನೀಡಿದರು. ನಾವು ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ನಿಲುವೇನು? ಎಂದು ಕೇಳಿದರು.
ಧ್ವನಿವರ್ಧಕದಲ್ಲಿ ಪ್ರಸಾರ ಎಷ್ಟು ಡೆಸಿಬಲ್ ಇರಬೇಕು ಎಂಬುದನ್ನು ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ನ್ಯಾಯಾಲಯಗಳ ತೀರ್ಪುಗಳೂ ಬಂದಿವೆ. ನಮ್ಮ ಪಕ್ಷ ನ್ಯಾಯಾಲಯದ ತೀರ್ಪಿನ ಪರ ಮತ್ತು ಇಲಾಖಾ ಸುತ್ತೋಲೆ ಪರವಾಗಿದೆ. ಕಾಂಗ್ರೆಸ್ನವರು ತಾವು ನ್ಯಾಯಾಲಯದ ತೀರ್ಪಿನ ಪರ ಇದ್ದಾರೆಯೇ ಅಥವಾ ವಿರುದ್ಧ ಇದ್ದಾರೆಯೇ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ನಾವು ಮಸೀದಿ ಪರ ಅಥವಾ ವಿರುದ್ಧವೂ ಇಲ್ಲ. ದೇವಸ್ಥಾನದ ಪರ ಅಥವಾ ವಿರುದ್ಧ ಇಲ್ಲ. ನಾವೇನಿದ್ದರೂ ನ್ಯಾಯಾಲಯದ ತೀರ್ಪಿನ ಪರ ಇದ್ದೇವೆ. ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಆಗ ಅವರ ಆಷಾಡಭೂತಿತನ ಹೊರಬರಲಿದೆ ಎಂದು ತಿಳಿಸಿದರು. ಮತದ ಆಧಾರದಲ್ಲಿ ನ್ಯಾಯಾಲಯದ ತೀರ್ಪನ್ನು ವಿಭಜಿಸಬಾರದು ಎಂಬ ನಿಲುವು ನಮ್ಮದು. ಮತದ ಆಧಾರದಲ್ಲಿ ನ್ಯಾಯಾಲಯದ ತೀರ್ಪನ್ನು ವಿಭಜಿಸಬೇಕೇ ಎಂಬ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಅವರು ತಮ್ಮ ನಿಲುವನ್ನು ತಿಳಿಸಲಿ ಎಂದು ಸವಾಲೆಸೆದರು. ಆಗ ಮತಾಂಧತೆಯ ಭೂತ ಯಾರನ್ನು ಹೊಕ್ಕಿದೆ ಎಂದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.
ಕನ್ನಡ ಮಾತನಾಡಿದ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಚಂದ್ರು ಹತ್ಯೆ ಆಗಿದೆ. ಇದನ್ನು ಖಂಡಿಸುತ್ತೇವೆ. ನಾವು ಯಾವ ದೇಶದಲ್ಲಿದ್ದೇವೆ? ಎಂದು ಪ್ರಶ್ನಿಸಿದರಲ್ಲದೆ, ಇದನ್ನು ವ್ಯಕ್ತಿಗತ ಹಿನ್ನೆಲೆಯಲ್ಲಿ ನೋಡಬಾರದು. ಇದರ ಹಿಂದೆ ಪ್ರಚೋದನಕಾರಿ ಅಂಶವಿದೆ. ಇವತ್ತು ಗೋರಿಪಾಳ್ಯದಲ್ಲಿ ಆಗಿರುವುದು ನಾಳೆ ಬೇರೆ ಕಡೆ ನಡೆಯಬಹುದು. ನಿನ್ನೆ ಕಾಶ್ಮೀರದಲ್ಲಿ ನಡೆದಿದ್ದು ದೇಶದ ಇತರ ಭಾಗದಲ್ಲಿ ನಡೆಯಬಹುದು. ಇದು ಅತ್ಯಂತ ಖಂಡನೀಯ. ಇದರ ಬಗ್ಗೆ ಬುದ್ಧಿಜೀವಿಗಳು ಮಾತ್ರವಲ್ಲದೆ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ. ಸತ್ತವರು ಹಿಂದುಗಳಾದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ. ಅವರ ಆಷಾಡಭೂತಿತನ ಖಂಡನಾರ್ಹ ಎಂದರು.
ಬಿಜೆಪಿ ಒಂದು ಸ್ವತಂತ್ರ ಸಂಘಟನೆ. ಆರೆಸ್ಸೆಸ್ನಿಂದ ರಾಷ್ಟ್ರಭಕ್ತಿಯ, ಸಮಾಜಮುಖಿ ಕಾರ್ಯದ ಪ್ರೇರಣೆಯನ್ನು ಅದು ಪಡೆದಿದೆ. ನಮ್ಮದು ಪ್ರಜಾಪ್ರಭುತ್ವವಿರುವ ಕಾಲಕಾಲಕ್ಕೆ ಅಧ್ಯಕ್ಷರು ಬದಲಾಗುವ ಪಕ್ಷ. ನಮ್ಮನ್ನು ಯಾರೂ ನಿಯಂತ್ರಿಸುವ ಪ್ರಶ್ನೆ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಅವರು ಉತ್ತರ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.