ಬೆಂಗಳೂರು: ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ರಾಜ್ಯದ ಉನ್ನತ ಶಿಕ್ಷಣ, ಐ.ಟಿ. ಮತ್ತು ಬಿ.ಟಿ. ಸಚಿವರಾದ ಡಾ|| ಸಿ.ಎನ್. ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಇತರ ಗಣ್ಯರ ನೇತೃತ್ವದಲ್ಲಿ ಮಲ್ಲೇಶ್ವರದ “ಕಾಡುಮಲ್ಲೇಶ್ವರ ದೇವಸ್ಥಾನ”ದಲ್ಲಿ ಪೂಜೆಯನ್ನು ಸಲ್ಲಿಸಿ ಪಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಈ ಗಣ್ಯರು ರಾಜ್ಯದ ಸಚಿವರು ಮತ್ತು ಶಾಸಕರು ಅಲ್ಲಿಂದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಮೆರವಣಿಗೆ ಮೂಲಕ ತೆರಳಿದರು. ತದನಂತರ ಧ್ವಜರೋಹಣ ನೆರವೇರಿಸಲಾಯಿತು. ಭಾರತಮಾತೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಗಣ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಂತರ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಭಾಷಣವನ್ನು ಎಲ್ಇಡಿ ಪರದೆಯಲ್ಲಿ ವೀಕ್ಷಿಸಿದರು.
ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಸಚಿವರಾದ ಎಸ್.ಅಂಗಾರ, ಉಪ ಸಭಾಧ್ಯಕ್ಷರಾದ ಆನಂದ್ ಮಾಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಶಾಸಕರಾದ ಸಂಜೀವ್ ಮಠಂದೂರು, ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, 1951ರಲ್ಲಿ ರಾಷ್ಟ್ರಹಿತಕ್ಕೆ ಪೂರಕವಾದ ರಾಜಕೀಯ ಪಕ್ಷದ ಅಗತ್ಯವಿದೆ ಎಂಬ ಚಿಂತನೆಯೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ 10 ಜನ ಸ್ವಯಂಸೇವಕರನ್ನು ಒಳಗೊಂಡ ಜನಸಂಘವು ಶ್ಯಾಮಪ್ರಸಾದ್ ಮುಖರ್ಜಿ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಆಗ ಕೇವಲ 10 ಜನ ಸದಸ್ಯರಿದ್ದರು. ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ದೇಶವ್ಯಾಪಿ ಪ್ರಭಾವ ಬೀರುವ ಸಾಮಥ್ರ್ಯ ಇರಲಿಲ್ಲ. ದೇಶನಿಷ್ಠೆ, ಸತತ ಪರಿಶ್ರಮದ ಮೂಲಕ ಇವತ್ತು ಜಗತ್ತಿನ ಅತಿ ಹೆಚ್ಚು ಸದಸ್ಯರಿರುವ ಅಂದರೆ 18 ಕೋಟಿ ಸದಸ್ಯತ್ವ ಹೊಂದಿದ, ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಪಡೆದ, ಅತಿ ಹೆಚ್ಚು ಸಂಸದರು, ಅತಿ ಹೆಚ್ಚು ಶಾಸಕರಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ನುಡಿದರು.
ಅತಿ ಹೆಚ್ಚು ಮಹಿಳಾ ಶಾಸಕರು, ಅತಿ ಹೆಚ್ಚು ದಲಿತ ಶಾಸಕರು ಮತ್ತು ಅತ್ಯಂತ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರನ್ನು ಹೊಂದಿದ ಹೆಮ್ಮೆ ನಮ್ಮ ಪಕ್ಷದ್ದು ಎಂದು ವಿವರಿಸಿದರು. ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರದಲ್ಲಿ ಅಗ್ರಗಣ್ಯರಾಗಿದ್ದಾರೆ. ಜಗತ್ತಿನ ಅತ್ಯಂತ ಜನಪ್ರಿಯ ನಾಯಕತ್ವವನ್ನು ಬಿಜೆಪಿ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸಾಂಸ್ಕೃತಿಕ ರಾಷ್ಟ್ರೀಯತೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸರ್ವಧರ್ಮ ಸಮಭಾವ, ಏಕಾತ್ಮ ಮಾನವ ದರ್ಶನ ಹಾಗೂ ಮೌಲ್ಯಾಧಾರಿತ ರಾಜಕೀಯ ನೀತಿ ಜೊತೆ ಪಕ್ಷ ಕೆಲಸ ಮಾಡುತ್ತಿದೆ. ಕಾಲಕಾಲಕ್ಕೆ ನಿರಂತರವಾಗಿ ಆಂತರಿಕ ಚುನಾವಣೆ ನಡೆಸುತ್ತ ಪಕ್ಷದೊಳಗೂ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಏಕೈಕ ಪಕ್ಷ ಬಿಜೆಪಿ. ಕೆಲವು ಪಕ್ಷಗಳು ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತಿಳಿಸುತ್ತ ಚುನಾಯಿತ ಪ್ರಧಾನಿಯನ್ನೂ ಟೀಕಿಸುತ್ತವೆ. ಆದರೆ, ಆ ಪಕ್ಷದೊಳಗೆ ಪ್ರಜಾಪ್ರಭುತ್ವ ಇಲ್ಲ ಎಂದು ವಿವರಿಸಿದರು.
ಇಂದು ದೇಶದ ಉದ್ದಗಲಕ್ಕೆ 10 ಲಕ್ಷ ಬೂತ್ ಅಧ್ಯಕ್ಷರು ತಮ್ಮ ಮನೆ ಮೇಲೆ ಧ್ವಜ ಹಾರಿಸಿದ್ದಾರೆ. 15 ಸಾವಿರ ಮಂಡಲಗಳ ಮಟ್ಟದಲ್ಲಿ ಶೋಭಾಯಾತ್ರೆ, ಧ್ವಜಾರೋಹಣ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಭಾಷಣವನ್ನು ಮಾಧ್ಯಮದ ಮೂಲಕ ಆಲಿಸಲಿದ್ದು, ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ನಮ್ಮ ಸಂಘಟನೆ ಬೆಳೆದಿದೆ ಎಂದರು.
ಇದರ ಪರಿಣಾಮವಾಗಿ ದೇಶದಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತವನ್ನು ಕೊಡಲು ಸಾಧ್ಯವಾಗಿದೆ. ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸುವುದರ ಜೊತೆಗೆ ದೇಶವನ್ನು ಆತ್ಮನಿರ್ಭರ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿದೆ. ದೇಶ ಮೊದಲು ಎಂಬ ತತ್ವದೊಂದಿಗೆ ಕೆಲಸ ಮಾಡುತ್ತಿದ್ದು, ಈ ಎಲ್ಲ ಬೆಳವಣಿಗೆಗಳಿಗೆ ನಮ್ಮ ಕಾರ್ಯಕರ್ತರು ಕಾರಣಕರ್ತರು ಎಂದು ತಿಳಿಸಿದರು. ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಎಲ್ಲ ಚೇತನಗಳಿಗೆ ನಮನಗಳು ಎಂದರು. ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿ, ಪಕ್ಷದ ಸಂಸ್ಥಾಪನಾ ದಿನದ ಶುಭಾಶಯ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.