ನವದೆಹಲಿ: ಭಾರತವು 400 ಶತಕೋಟಿ ಡಾಲರ್ ರಫ್ತು ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೆಮ್ಮೆ ವ್ಯಕ್ತಪಡಿಸಿದರು. ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹೊಸ ಮಾರುಕಟ್ಟೆಗಳನ್ನು ತಲುಪುತ್ತಿವೆ. ಭಾರತೀಯರು ಸ್ಥಳೀಯರಿಗೆ ಧ್ವನಿಯಾದಾಗ ಸ್ಥಳೀಯರು ಜಾಗತಿಕವಾಗುತ್ತಾರೆ ಎಂದು ತಿಳಿಸಿದರು. ಸ್ಥಳೀಯವನ್ನು ‘ಜಾಗತಿಕ’ ಮಾಡಲು ಮತ್ತು ಭಾರತೀಯ ಉತ್ಪನ್ನಗಳ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಜನರಿಗೆ ಮನವಿ ಮಾಡಿದರು.
ಭಾರತದಲ್ಲಿ ತಯಾರಾಗುವ ವಸ್ತುಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಪೂರೈಕೆ ಸರಪಳಿಯು ಬಲಗೊಳ್ಳುತ್ತಿದೆ ಎಂಬುದನ್ನು ಸಹ ಇದು ಸೂಚಿಸುತ್ತದೆ ಎಂದು ಅವರು ಹೇಳಿದರು. ಅಸ್ಸಾಂನ ಹೈಲಕಂಡಿಯಿಂದ ಚರ್ಮದ ಉತ್ಪನ್ನಗಳು, ಉಸ್ಮಾನಾಬಾದ್ನಿಂದ ಕೈಮಗ್ಗ ಉತ್ಪನ್ನಗಳು, ಬಿಜಾಪುರದಿಂದ ಹಣ್ಣು ಮತ್ತು ತರಕಾರಿಗಳು ಮತ್ತು ಚಂದೌಲಿಯಿಂದ ಕಪ್ಪು ಅಕ್ಕಿ ರಫ್ತು ಹೆಚ್ಚುತ್ತಿದೆ ಎಂದ ಅವರು, ವಿಶ್ವವಿಖ್ಯಾತ ಲಡಾಕ್ನ ಏಪ್ರಿಕಾಟ್ ದುಬೈ ಮಾರುಕಟ್ಟೆಗೆ ತಲುಪಿದ್ದು, ತಮಿಳುನಾಡಿನಿಂದ ಸೌದಿ ಅರೇಬಿಯಾಕ್ಕೆ ಬಾಳೆಹಣ್ಣು ರವಾನೆಯಾಗುತ್ತಿದೆ ಎಂದರು.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬೆಳೆದ ರಾಗಿಗಳ ಮೊದಲ ರವಾನೆಯನ್ನು ಡೆನ್ಮಾರ್ಕ್ಗೆ ರಫ್ತು ಮಾಡಲಾಯಿತು. ಆಂಧ್ರಪ್ರದೇಶದ ಕೃಷ್ಣಾ ಮತ್ತು ಚಿತ್ತೂರು ಜಿಲ್ಲೆಗಳಿಂದ ಬಂಗನಪಲ್ಲಿ ಮತ್ತು ಸುವರ್ಣರೇಖಾ ಮಾವು ದಕ್ಷಿಣ ಕೊರಿಯಾಕ್ಕೆ ರಫ್ತಾಗುತ್ತಿದೆ. ತ್ರಿಪುರಾದಿಂದ ತಾಜಾ ಹಲಸುಗಳನ್ನು ವಿಮಾನದ ಮೂಲಕ ಲಂಡನ್ಗೆ ರಫ್ತು ಮಾಡಲಾಯಿತು ಮತ್ತು ಮೊದಲ ಬಾರಿಗೆ ನಾಗಾಲ್ಯಾಂಡ್ನಿಂದ ಕಿಂಗ್ ಚಿಲ್ಲಿಯನ್ನು ಲಂಡನ್ಗೆ ಕಳುಹಿಸಲಾಯಿತು. ಅದೇ ರೀತಿ, ಭಾಲಿಯಾ ಗೋಧಿಯ ಮೊದಲ ರವಾನೆಯನ್ನು ಗುಜರಾತ್ನಿಂದ ಕೀನ್ಯಾ ಮತ್ತು ಶ್ರೀಲಂಕಾಕ್ಕೆ ರಫ್ತು ಮಾಡಲಾಯಿತು. ವಿದೇಶಗಳಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಗೋಚರಿಸುತ್ತಿವೆ ಎಂದು ಪ್ರಧಾನಿ ಹೇಳಿದರು.
ಈ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಅದ್ಭುತವಾಗಿದೆ ಮತ್ತು ರೈತರು, ಕುಶಲಕರ್ಮಿಗಳು, ನೇಕಾರರು, ಎಂಜಿನಿಯರ್ಗಳು, ಸಣ್ಣ ಉದ್ಯಮಿಗಳು, ಎಂಎಸ್ಎಂಇ ವಲಯವು ನಿಜವಾದ ಶಕ್ತಿಯಾಗಿದೆ ಎಂದು ಮೋದಿ ಹೇಳಿದರು.
ಸರ್ಕಾರಿ ಇ-ಮಾರುಕಟ್ಟೆ ಸ್ಥಳ – GeM ಮೂಲಕ ಸರ್ಕಾರಿ ಸಂಗ್ರಹಣೆಯಲ್ಲಿ ಸಣ್ಣ ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ತಂತ್ರಜ್ಞಾನದ ಮೂಲಕ ಹೆಚ್ಚು ಪಾರದರ್ಶಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಜಿಇಎಂ ಪೋರ್ಟಲ್ ಮೂಲಕ ಕಳೆದ ಒಂದು ವರ್ಷದಲ್ಲಿ ಸರ್ಕಾರವು ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸಲಾಗಿದೆ.
ಆಯುಷ್ ಉದ್ಯಮದ ಮಾರುಕಟ್ಟೆಯೂ ಹೆಚ್ಚುತ್ತಿದೆ ಎಂದ ಅವರು, ಆರು ವರ್ಷಗಳ ಹಿಂದೆ ಆಯುರ್ವೇದ ಔಷಧಿಗಳ ಮಾರುಕಟ್ಟೆ ಸುಮಾರು 22 ಸಾವಿರ ಕೋಟಿ ಇತ್ತು, ಇಂದು ಆಯುಷ್ ಉತ್ಪಾದನಾ ಉದ್ಯಮವು ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ಮುಟ್ಟುತ್ತಿದೆ. ಸ್ಟಾರ್ಟ್ ಅಪ್ ಜಗತ್ತಿನಲ್ಲಿಯೂ ಆಯುಷ್ ಆಕರ್ಷಣೆಯ ವಿಷಯವಾಗುತ್ತಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.