ಯಾದಗಿರಿ: ದೇವತ್ಕಲ್ ಏತ ನೀರಾವರಿ ಯೋಜನೆಯನ್ನು 134 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಅವರು ಯಾದಗಿರಿಯ ಸುರಪುರದ ದೇವತ್ಕಲ್ ಗ್ರಾಮದಲ್ಲಿ ಆಯೋಜಿಸಿರುವ ಸುರಪುರ ವಿಧಾನಸಭಾ ಕ್ಷೇತ್ರದ ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಯಾದಗಿರಿ ಹಾಗೂ ಬಿಜಾಪುರ ಜಿಲ್ಲೆಗೆ ಅನುಕೂಲವಾಗುವ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ನಾರಾಯಣಪುರ, ಬೂನಾಳ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಂದ ಯಾದಗಿರಿಯಲ್ಲಿ 44 ಸಾವಿರ ಎಕರೆ ನೀರಾವರಿ ಕಲ್ಪಿಸಲಾಗುವುದು.. ಶಾಸಕ ರಾಜೂಗೌಡರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಬಜೆಟ್ನಲ್ಲಿ ಹಲವಾರು ಯೋಜನೆಗಳನ್ನು ನಾವು ಘೋಷಣೆ ಮಾಡಿದ್ದೇವೆ. ಯಾದಗಿರಿ ಆಯುಷ್ ದಾವಾಖಾನೆಯನ್ನು ಮತ್ತು ಹಾವೇರಿ ಆಸ್ಪತ್ರೆಯಲ್ಲಿ ಆಯುಷ್ ವಿಭಾಗವನ್ನು ತೆರಯಲಾಗುತ್ತಿದೆ. ಯಾದಗಿರಿ ಬೈಪಾಸ್ ರಸ್ತೆ, ಗದಗವಾಡಿ ರೈಲ್ವೆಗೆ ಅನುದಾನ ನೀಡಲಾಗಿದೆ. ಯುವಕರಿಗೆ ಉದ್ಯೋಗ ದೊರಕಿಸಲು ಆಹಾರ ಪಾರ್ಕ್ ಮತ್ತು ಫಾರ್ಮಸ್ಯುಟಿಕಲ್ ಪಾರ್ಕ್ ತೆರೆಯಲಾಗುವುದು. ಯಾದಗಿರಿಯ ಸಮಗ್ರ ಅಭಿವೃದ್ಧಿಗೆ ಇವು ಪೂರಕವಾಗಿವೆ ಎಂದರು.
ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡಿದ ನೆನಪಿಗಾಗಿ 1 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಗ್ರಾಮವಾಸ್ತವ್ಯ ಮಾಡುವ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸುವುದಾಗಿ ಭರವಸೆಯಿತ್ತರು.. ಭೂ ಸಂರಕ್ಷಣೆ, ದಾಖಲೆಗಳನ್ನು ಮನೆಗಳಿಗೆ ತಲುಪಿಸುವ ಮೂಲಕ ಸರ್ಕಾರ ಮನೆ ಬಾಗಿಲಿಗೆ ಬರುವಂಥ ಕೆಲಸವನ್ನು ಮಾಡಲಾಗಿದೆ. ಸರ್ಕಾರದ ವಿಕೇಂದ್ರೀಕರಣದ ಪ್ರಯತ್ನವಾಗಿ ಜಿಲ್ಲಾಧಿಕಾರಿಗಳು ಹಳ್ಳಿಗಳ ಕಡೆಗೆ ಹೋಗುವಂತೆ ಮಾಡಲಾಗಿದೆ. ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಗ್ರಾಮವಾಸ್ತವ್ಯ ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ದೊಡ್ಡ ಬದಲಾವಣೆ, ಹೊಸ ದಿಕ್ಸೂಚಿಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ, ರೈತರ, ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 3000 ಕೋಟಿ ರೂ. ನಿಗದಿಪಡಿಸಲಾಗಿದ್ದು, ಇದೇ ವರ್ಷದಲ್ಲಿ ಸಂಪೂರ್ಣ ಅನುದಾನವನ್ನು ಅಭಿವೃದ್ಧಿಗೆ ಬಳಸಲಾಗುವುದು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯವನ್ನು ಕಲ್ಯಾಣ ಕರ್ನಾಟಕವನ್ನಾಗಿ ಮಾಡುವ ಸರ್ವ ರೀತಿಯ ಪ್ರಯತ್ನ ಮಾಡುವುದಾಗಿ ಸಂಕಲ್ಪವನ್ನು ಮಾಡುವುದಾಗಿ ತಿಳಿಸಿದರು ಎಂದು ತಿಳಿಸಿದರು.
ನಮ್ಮದು ರೈತಪರ ಸರ್ಕಾರ ಒಟ್ಟು 33 ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ , ರೈತಶಕ್ತಿ ಯೋಜನೆ ಮೂಲಕ ರೈತರ ಯಂತ್ರೋಪಕರಣಗಳಿಗೆ ಪೆಟ್ರೋಲ್, ಡೀಸೆಲ್ ವೆಚ್ಚಕ್ಕಾಗಿ ಒಟ್ಟು 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯಶಸ್ವಿನಿ ಯೋಜನೆಯ ಮೂಲಕ 300 ಕೋಟಿ ವೆಚ್ಚದಲ್ಲಿ ರೈತರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ, ಮಹದಾಯಿ, ತುಂಗಭದ್ರಾ, ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳ ಪೌಷ್ಟಿಕ ಆಹಾರ, ಶಿಕ್ಷಣ, ಉತ್ತಮ ಆರೋಗ್ಯ ಯೋಜನೆಗಳಿಗೆ 3000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.