ಬೆಂಗಳೂರು : ಕರ್ನಾಟಕದ ಮೇಲೆ ಐದು ರಾಜ್ಯ ಗಳ ಚುನಾವಣಾ ಫಲಿತಾಂಶ ಸಕಾರಾತ್ಮಕವಾದ ಪರಿಣಾಮ ಬೀರಲಿದೆ, ಕರ್ನಾಟಕದಲ್ಲಿ ಭಾಜಪ ಮತ್ತೆ ಅಧಿಕಾರಕ್ಕೆ ಬರಲಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಲಿದೆ
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ, ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಮುನ್ನಡೆಯಲಿದೆ. ನಮ್ಮ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಈಗಾಗಲೇ ನೀಡಿರುವ ಉತ್ತಮ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮುಖಾಂತರ ಸುಭಿಕ್ಷ, ಸುಭದ್ರವಾದ, ನವ ಕರ್ನಾಟಕ ವನ್ನು ಒಂದು ವರ್ಷದಲ್ಲಿ ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿ ಜನರ ವಿಶ್ವಾಸವನ್ನು ಗಳಿಸಿ 2023 ರಲ್ಲಿ ಇಂದು ಫಲಿತಾಂಶ ಬಂದಂತೆಯೇ ಕರ್ನಾಟಕದ ಜನತೆ ಭಾ. ಜ.ಪ ವನ್ನು ಪುನರಾಯ್ಕೆ ಮಾಡಿ ಐದು ವರ್ಷ ಅಧಿಕಾರದಲ್ಲಿರಲಿದೆ ಎಂಬ ವಿಶ್ವಾಸವಿದೆ ಎಂದರು.
ಜನತೆಗೆ, ಪಕ್ಷಕ್ಕೆ, ಶಾಸಕರಿಗೆ ಇಂದಿನ ಚುನಾವಣಾ ಫಲಿತಾಂಶ ಸಕಾರಾತ್ಮಕ ಉತ್ತೇಜನ ನೀಡಿದೆ ಎಂದರು.
ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಲು ಜನರ ಆಶೀರ್ವಾದ ಪಡೆದುಕೊಂಡಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಮತ್ತೊಮ್ಮೆ ಮೋದಿಯವರ ನೇತೃತ್ವದಲ್ಲಿ ಮೋದಿ ಮತ್ತು ಯೋಗಿಯ ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶವನ್ನು ಮುನ್ನಡೆಸುವ ಕೆಲಸ ಮಾಡುತ್ತಿದೆ. ಐದು ರಾಜ್ಯಗಳ ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಮ್ಮ ನಾಯಕರಾದ ನರೇಂದ್ರ ಮೋದಿಯವರು, ಭಾ.ಜ.ಪ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಹಾಗೂ ಸಂಬಂಧಿಸಿದ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಿರೋಧ ಪಕ್ಷ ಧೂಳಿಪಟ
ನರೇಂದ್ರ ಮೋದಿಯವರ ನಾಯಕತ್ವದಲ್ಲಿರುವ ಕಾರ್ಯಕ್ರಮಗಳು, ಬಡವರ, ರೈತರ, ಹೆಣ್ಣುಮಕ್ಕಳಪರವಾಗಿದೆ. ಕೋವಿಡ್ ನಿರ್ವಹಣೆ, ಆರ್ಥಿಕ ಸಬಲೀಕರಣ ಮುಂತಾದ ಕೆಲಸಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡುವ ಪಣವನ್ನು ನಮ್ಮ ನಾಯಕರು ತೊಟ್ಟಿದ್ದಾರೆ. ನರೇಂದ್ರ ಮೋದಿಯವರ ನವ ಭಾರತ ನಿರ್ಮಾಣದ ಕನಸು-ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಇದು ಅಕ್ಷರಶಃ ದೇಶದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಭಾರತದ ಉದ್ದಗಲಕ್ಕೂ ಎಲ್ಲರೂ ಒಪ್ಪಿಕೊಳ್ಳುವ ಏಕಮೇವ ನಾಯಕ ನರೇಂದ್ರ ಮೋದಿಯವರು ಎನ್ನುವುದು ಪುನರ್ ಸ್ಥಾಪನೆಯಾಗಿದೆ. ಅವರ ನಾಯಕತ್ವದಲ್ಲಿ ಕರ್ನಾಟಕವೂ ಸೇರಿದಂತೆ ಸಧೃಢ ರಾಜ್ಯ ಮತ್ತು ದೇಶ ಕಟ್ಟಲು ಸಂಕಲ್ಪವನ್ನು ಇಂದು ತೊಟ್ಟಿದ್ದೇವೆ. ಇನ್ನಷ್ಟು ಶಕ್ತಿ, ಶ್ರಮದಿಂದ ಕರ್ನಾಟಕ ಕಟ್ಟುವ ಉತ್ಸಾಹ , ಪ್ರೋತ್ಸಾಹ, ಪ್ರೇರಣೆಯನ್ನು ಚುನಾವಣೆ ನಮಗೆ ಕೊಟ್ಟಿದೆ.
ಏಪ್ರಿಲ್ನಲ್ಲಿ ಪ್ರಧಾನಿಗಳು ಕರ್ನಾಟಕಕ್ಕೆ
ಏಪ್ರಿಲ್ನಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರಲಿದ್ದಾರೆ. ಬರುವ ಸಂದರ್ಭದಲ್ಲಿ ಒಂದು ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮುಂದೆ ಅವರ ಮುಖಾಂತರ ಅನಾವರಣ ಮಾಡುವ ಕೆಲಸವನ್ನು ಮಾಡಲಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.