ನವದೆಹಲಿ: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, ಇಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಒದಗಿಸಲು 6 ರಾಜ್ಯಗಳಿಗೆ 1348.10 ಕೋಟಿ ರೂ. ಬಿಡುಗಡೆ ಮಾಡಿದೆ. ಶುಕ್ರವಾರ ಅನುದಾನ ಬಿಡುಗಡೆಯಾದ ರಾಜ್ಯಗಳೆಂದರೆ ಜಾರ್ಖಂಡ್ (112.20 ಕೋಟಿ ರೂ.), ಕರ್ನಾಟಕ (375 ಕೋಟಿ ರೂ.), ಕೇರಳ (168 ಕೋಟಿ ರೂ.), ಒಡಿಶಾ (411 ಕೋಟಿ ರೂ.), ತಮಿಳುನಾಡು (267.90 ಕೋಟಿ ರೂ.) ಮತ್ತು ತ್ರಿಪುರಾ (14 ಕೋಟಿ ರೂ.). ಬಿಡುಗಡೆಯಾದ ಅನುದಾನವು ಕಂಟೋನ್ಮೆಂಟ್ ಮಂಡಳಿಗಳನ್ನು ಒಳಗೊಂಡಂತೆ ದಶಲಕ್ಷಕ್ಕಿಂತ ಅಧಿಕವಲ್ಲದ ಜನಸಂಖ್ಯೆಯ ನಗರಗಳಿಗೆ (ಎನ್.ಎಂ.ಪಿ.ಸಿ.ಗಳು) ಮೀಸಲಾಗಿದೆ.
15ನೇ ಹಣಕಾಸು ಆಯೋಗವು 2021-22ರಿಂದ 2025-26ನೇ ಸಾಲಿನ ತನ್ನ ವರದಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದೆ: (ಎ) ದಶಲಕ್ಷಕ್ಕೂ ಅಧಿಕ ಜನಸಂಖ್ಯೆ ನಗರಪ್ರದೇಶಗಳು/ನಗರಗಳು (ದೆಹಲಿ ಮತ್ತು ಶ್ರೀನಗರವನ್ನು ಹೊರತುಪಡಿಸಿ), ಮತ್ತು (ಬಿ) ಒಂದು ದಶಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ಇತರ ನಗರಗಳು ಮತ್ತು ಪಟ್ಟಣಗಳು (ದಶಲಕ್ಷ ಜನಸಂಖ್ಯೆಯಿಲ್ಲದ ನಗರಗಳು). ಅವುಗಳಿಗೆ ಪ್ರತ್ಯೇಕ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ದಶಲಕ್ಷ-ವಲ್ಲದ ನಗರಗಳಿಗೆ ಆಯೋಗವು ಶಿಫಾರಸು ಮಾಡಿದ ಒಟ್ಟು ಅನುದಾನಗಳಲ್ಲಿ, ಶೇ.40 ಮೂಲ (ಮುಕ್ತ) ಅನುದಾನ ಮತ್ತು ಉಳಿದ ಶೇ.60 ಅನುದಾನವು ನಿರ್ಬಂಧಿತವಾಗಿದೆ. ಮೂಲ ಅನುದಾನಗಳನ್ನು (ಮುಕ್ತ) ಸಂಬಳದ ಪಾವತಿ ಮತ್ತು ಇತರ ಸ್ಥಾಪನೆಯ ವೆಚ್ಚವನ್ನು ಹೊರತುಪಡಿಸಿ, ಸ್ಥಳ ನಿರ್ದಿಷ್ಟ ಅಗತ್ಯಗಳಿಗಾಗಿ ಬಳಸಲಾಗುತ್ತದೆ.
ಮತ್ತೊಂದೆಡೆ, ಮೂಲಭೂತ ಸೇವೆಗಳ ವಿತರಣೆಯನ್ನು ಬೆಂಬಲಿಸಲು ಮತ್ತು ಬಲಪಡಿಸಲು ದಶಲಕ್ಷ-ವಲ್ಲದ ನಗರಗಳಿಗೆ ನಿರ್ಬಂಧಿತ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಒಟ್ಟು ನಿರ್ಬಂಧಿತ ಅನುದಾನದಲ್ಲಿ, ಶೇ. 50ನ್ನು ‘ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ.ಎಚ್. & ಯು.ಎ) ಅಭಿವೃದ್ಧಿಪಡಿಸಿದ ಸ್ಟಾರ್ ಶ್ರೇಯಾಂಕಗಳನ್ನು ಸಾಧಿಸಲು ಮೀಸಲಿಡಲಾಗಿದೆ. ಉಳಿದ ಶೇ.50ನ್ನು ‘ಕುಡಿಯುವ ನೀರು, ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ’ಗೆ ತೆಗೆದಿರಿಸಲಾಗಿದೆ.
ನಿರ್ಬಂಧಿತ ಅನುದಾನಗಳು ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳ ಅಡಿಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿಗೆ ಕೇಂದ್ರ ಮತ್ತು ರಾಜ್ಯವು ನಿಗದಿಪಡಿಸಿದ ನಿಧಿಯ ಮೇಲೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ನಿಧಿಯ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ನಾಗರಿಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಲು ಉದ್ದೇಶಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ, ಭಾರತ ಸರ್ಕಾರವು ಇದುವರೆಗೆ ಒಟ್ಟು 10,699.33 ಕೋಟಿ ರೂ. ಮೊತ್ತವನ್ನು ದಶಲಕ್ಷ ಜನಸಂಖ್ಯೆಯಿಲ್ಲದ ನಗರಗಳಿಗೆ ಅನುದಾನವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಶಿಫಾರಸುಗಳ ಮೇರೆಗೆ ಹಣಕಾಸು ಸಚಿವಾಲಯವು ಈ ಅನುದಾನವನ್ನು ಬಿಡುಗಡೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.