ಬೆಂಗಳೂರು: 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾಕಾಲೇಜುಗಳ ಮಕ್ಕಳಿಗೆ ಆತ್ಮರಕ್ಷಣಾ ತರಬೇತಿಯನ್ನು ಶೀಘ್ರ ದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನ ಗೌರವಗಳಿವೆ. ಆದರೆ ಕಿಡಿಗೇಡಿಗಳು, ದುಷ್ಟಶಕ್ತಿಗಳು ತಾಯಂದಿರನ್ನು ಮಕ್ಕಳನ್ನು ನೋಡುವ ರೀತಿ ಅಮಾನುಷವಾಗಿದೆ. ಈ ಮನಸ್ಥಿತಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿರುವುದನ್ನು ತಡೆಗಟ್ಟಲು ಕಾನೂನುಗಳಾಗಿವೆ, ಕಾರ್ಯಕ್ರಮ ಗಳನ್ನು ರೂಪಿಸಿ, ಹಣಕಾಸಿನ ವೆಚ್ಚವೂ ಆಗಿದೆ. ಆದರೆ, ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯವಿದೆ. ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕಲೆ ಮಹಿಳೆಯರಿಗೆ ಇದ್ದರೆ ದುಷ್ಟ ಶಕ್ತಿಗಳಿಗೆ ಸರಿಯಾದ ಪಾಠವನ್ನು ಕಲಿಸಬಹುದೆಂಬ ವಿಶ್ವಾಸವಿದೆ.
ಅದಕ್ಕಾಗಿ ಕಾನೂನು, ಶಿಕ್ಷಣ , ಗೃಹ ಇಲಾಖೆಗಳು,ಸಮಾಜ, ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ನಿಂತು ಅವರ ಆತ್ಮರಕ್ಷಣೆ ಮಾತ್ರವಲ್ಲದೆ ಅವರ ಗೌರವದ ರಕ್ಷಣೆಯನ್ನೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ , ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವರ್ಷವಿಡೀ ಈ ಕಾರ್ಯಕ್ರಮ ನಡೆಸಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಕ್ರೂಡೀಕರಿಸಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು. ಹೆಣ್ಣುಮಕ್ಕಳು ಸ್ವಾಲವಂಬಿಗಳಾದರೆ ದೇಶದ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಾಂಸ್ಕೃತಿಕ, ಸಾಮಾಜಿಕ ಲೋಕ ಶ್ರೀಮಂತವಾಗಲಿದೆ ಎಂದರು.
ಆತ್ಮರಕ್ಷಣೆಗೆ ಆತ್ಮವಿಶ್ವಾಸ ಅಗತ್ಯ
ಆತ್ಮರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಎಲ್ಲ ಪ್ರಾಣಿಗಳ, ಮಾನವರ ಗುಣಧರ್ಮ. ಆತ್ಮರಕ್ಷಣೆಗೆ ಬೇಕಾಗಿರುವುದು ಆತ್ಮವಿಶ್ವಾಸ. ಯಾವ ವ್ಯಕ್ತಿಗೆ ಆತ್ಮವಿಶ್ವಾಸ ಇರುತ್ತದೆಯೋ, ಅವನು ತನ್ನ ಆತ್ಮರಕ್ಷಣೆಯನ್ನು ಅತ್ಯಂತ ಸಮರ್ಥವಾಗಿ ಮಾಡಲು ಸಾಧ್ಯ.
ತಾವು ಪಡೆಯುವ ತರಬೇತಿ ಆತ್ಮ ವಿಶ್ವಾಸ ಎಂಬ ಮೂಲ ಗುಣಧರ್ಮವನ್ನಿಟ್ಟುಕೊಂಡು ಆತ್ಮರಕ್ಷಣೆಗೆ ಒಂದು ರೀತಿಯಲ್ಲಿ ಟಾನಿಕ್ ಇದ್ದಂತೆ. ಎದುರಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ಶಕ್ತಿ ತುಂಬುವ ಟಾನಿಕ್ ಇದ್ದಂತೆ ಎಂದರು. ಸಮಾಜಕಲ್ಯಾಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ನಿಮಗೆ ಈ ಟಾನಿಕ್ ನೀಡುತ್ತಿದ್ದಾರೆ. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಹೆಸರಿನಲ್ಲಿಯೇ ಶಕ್ತಿ ತುಂಬಲು ಒನಕೆ ಓಬವ್ವನ ಹೆಸರಿಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಶಕ್ತಿ
ಓಬವ್ವಳ ರೋಮಾಂಚಕ, ಐತಿಹಾಸಿಕ ಕಥೆಯನ್ನು ನಾವೆಲ್ಲರೂ ಓದಿದ್ದೇವೆ. ಓಬವ್ವ ಅಂದರೆ ಶಕ್ತಿಯ ಪ್ರತೀಕ. ಕನ್ನಡ ನಾಡು ಇಂತಹ ಶಕ್ತಿಯನ್ನು ಒಳಗೊಂಡಿರುವ ನಾಡು. ಕಿತ್ತೂರು ಚನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ ಇವರೆಲ್ಲರೂ ಪುರುಷರನ್ನೂ ಮೀರಿಸುವ ಶೌರ್ಯವನ್ನು ಹೊಂದಿದ್ದರು. ನಮ್ಮೆಲ್ಲರಿಗೂ ಬಹಳ ದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ. ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ , ಸ್ಪೂರ್ತಿಯೂ ಅಷ್ಟೇ ಮುಖ್ಯ. ಯಾವ ದೇಶಕ್ಕೆ ಉತ್ತಮ ಇತಿಹಾಸವಿದೆಯೋ ಆ ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ ಎನ್ನುವ ಮಾತಿದೆ. ಭವ್ಯ ಇತಿಹಾಸ ಮತ್ತು ಪರಂಪರೆ ಇರುವ ನಮ್ಮ ದೇಶದಲ್ಲಿ ಅಸಂಖ್ಯಾತ ವೀರರಿದ್ದಾರೆ. ನಮ್ಮ ನೆಲ, ಕನ್ನಡಿಗರ ಅಸ್ಮಿತೆಯನ್ನು ಮತ್ತೊಮ್ಮೆ ಮರುಕಳಿಸಿ, ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕೆಲಸವಾಗುತ್ತಿದೆ. 6 ತಿಂಗಳಲ್ಲಿ ದಾಖಲೆ ಎನಿಸುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.
ಕರ್ನಾಟಕಕ್ಕೆ ಅಗ್ರಮಾನ್ಯ ಸ್ಥಾನ
ನಮ್ಮ ರಾಜ್ಯ 75 ನೇ ರಾಜ್ಯೋತ್ಸವನ್ನು ಆಚರಿಸುವಾಗ ದೇಶದಲ್ಲಿ ರಾಜ್ಯಕ್ಕೆ ಅಗ್ರಮಾನ್ಯ ಸ್ಥಾನವಿರಬೇಕು. ಅದಕ್ಕೆ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದರೆ ಸಾಲದು. ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ವಿದ್ಯೆ, ಕೈಯಲ್ಲಿ ಕೆಲಸ, ಪ್ರೇರಣೆ ನೀಡುವ ಕೆಲಸ ಮಾಡಲು ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ. ಐತಿಹಾಸಿಕ ಪುರುಷರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.
ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ
ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ 7500 ಹೊಸ ಕೆಡೆಟ್ ಗಳನ್ನು ಎನ್.ಸಿ.ಸಿ ಗೆ ಸೇರ್ಪಡೆ ಗೊಳಿಸಲು ತಲಾ 12 ಸಾವಿರ ರೂ.ಗಳ ಅನುದಾನ ನೀಡಿದೆ. 75 ಹೊಸ ಘಟಕಗಳನ್ನು ಶಾಲಾಕಾಲೇಜುಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. 44 ಸಾವಿರ ಎನ್.ಸಿ.ಸಿ ಕೆಡೆಟ್ ಗಳಿಗೆ ತರಬೇತಿಗೆ ಅನುಮತಿ ಕೋರಲಾಗಿದೆ. ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್ ಗಳನ್ನು ಎನ್.ಸಿ.ಸಿ ಗೆ 2023 ನೆ ಸಾಲಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ಮಿಲಿಟರಿಗೆ ಸಮಾನವಾದ ತರಬೇತಿಯ ಜೊತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಆತ್ಮರಕ್ಷಣಾ ಯೋಜನೆಗಳಿಗೆ ಅಡಿಪಾಯ
ಆತ್ಮರಕ್ಷಣಾ ಯೋಜನೆಗಳಿಗೆ ದೊಡ್ಡ ಅಡಿಪಾಯವನ್ನು ಇಂದು ಹಾಕಲಾಗಿದೆ. ಉತ್ತಮ ಮುನ್ನಡಿಯನ್ನು ಬರೆಯಲಾಗಿದೆ. ಕೆಳದಿ ಚನಮ್ಮ ಮತ್ತು ಬೆಳವಾಡಿ ಮಲ್ಲಮ್ಮನ ಉತ್ಸವವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇವರು ಶಕ್ತಿ ಹಾಗೂ ಪ್ರೇರಣಾ ಕೇಂದ್ರಗಳು. ದಿನನಿತ್ಯ ಬಳಸುವ ವಸ್ತುಗಳನ್ನು ಆತ್ಮರಕ್ಷಣೆಗೆ ಬಳಕೆ ಮಾಡಬಹುದೆಂಬ ಸಂದೇಶವನ್ನು ಓಬವ್ವ ನಮಗೆ ನೀಡಿದ್ದಾಳೆ ಎಂದರು.
ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ “ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ”
1/2 pic.twitter.com/W2QqMLoGdP— CM of Karnataka (@CMofKarnataka) February 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.