ನವದೆಹಲಿ: ಭಾರತದಲ್ಲಿ ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಮತ್ತು ಅಭದ್ರತೆಯ ವಾತಾವರಣ ಇದೆ ಎಂದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹೇಳಿಕೆ ನೀಡಿರುವ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರೆನ್ ರಿಜ್ಜು ಕಿಡಿಕಾರಿದ್ದಾರೆ.
“2014ರ ಮೊದಲು ದೇಶದಲ್ಲಿ ಹಲವಾರು ಗಲಭೆಗಳು ಮತ್ತು ಹಿಂಸಾಚಾರಗಳು ನಿರಂತರವಾಗಿ ನಡೆಯುತ್ತಿದ್ದವು. ಆದರೆ ಈಗ ದೇಶದಲ್ಲಿ ಶಾಂತಿಯುತ ವಾತಾವರಣ ಇದೆ” ಎಂದಿದ್ದಾರೆ.
“ವೈಯಕ್ತಿಕ-ಸಮುದಾಯ ಮಟ್ಟದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಅದರ ಹೊರತಾಗಿ ಭಾರತದ ಸಂಸ್ಕೃತಿಯು ಸದಾ ಅಂತರ್ಗತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಾಯಾಸ್ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದಿದ್ದಾರೆ.
“ಹಮೀದ್ ಅನ್ಸಾರಿ ಅವರ ಮಾತು ತಪ್ಪು. ನಾನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೇನೆ ಮತ್ತು ಭಾರತ ಸುರಕ್ಷಿತ ರಾಷ್ಟ್ರ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ” ಎಂದಿದ್ದಾರೆ.
“ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಅಲ್ಪಸಂಖ್ಯಾತರು ಭಾರತಕ್ಕೆ ಬರಲು ಹವಣಿಸುತ್ತಿದ್ದಾರೆ. ಅವರಿಗೆ ಭಾರತ ಸುರಕ್ಷಿತ ಸ್ಥಳವಾಗಿದೆ. ನಮ್ಮ ರಾಷ್ಟ್ರದ ಬಗ್ಗೆ ಕೃತಜ್ಞತೆ ಇರಲಿ” ಎಂದಿದ್ದಾರೆ.
“ಕೆಲವರು ಭಾರತದಲ್ಲಿ ಅಪರಿಮಿತ ಸ್ವಾತಂತ್ರ್ಯ ಮತ್ತು ಘನತೆಯನ್ನು ಅನುಭವಿಸುತ್ತಾರೆ. ಆದರೆ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ಕುತಂತ್ರ ಮಾಡುತ್ತಾರೆ. ಭಾರತವನ್ನು ಅಪಮಾನ ಮಾಡುವುದರಿಂದ ಅವರಿಗೆ ತೃಪ್ತಿ ಸಿಗುತ್ತದೆಯೇ? ಕುಗ್ರಾಮ ಪ್ರದೇಶದಲ್ಲಿ ಯಾವುದೇ ಸೌಲಭ್ಯವಿಲ್ಲದೆ ವಾಸಿಸುತ್ತಿರುವ ಜನರು ಕೂಡ ತಮ್ಮ ತಾಯಿನಾಡಿಗೆ ನಿಷ್ಠರಾಗಿದ್ದಾರೆ” ಎಂದಿದ್ದಾರೆ.
ಇತ್ತೀಚಿಗೆ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ಪ್ರೋಗ್ರಾಮ್ನಲ್ಲಿ ಮಾತನಾಡಿದ್ದ ಹಮೀದ್ ಅನ್ಸಾರಿ ಅವರು, ಹಿಂದೂ ರಾಷ್ಟ್ರೀಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ಭಾರತದಲ್ಲಿ ಜನರು ಧಾರ್ಮಿಕ ಆಧಾರದಲ್ಲಿ ವಿಭಜನೆಯಾಗುತ್ತಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆ ವಾತಾವರಣ ಇದೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.