ಬೆಂಗಳೂರು : ಯುವ ಶಕ್ತಿ ದೇಶದ ಶಕ್ತಿ. ಯುವಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಬ್ಯಾಂಕ್ವೆಟ್ ಹಾಲ್ನಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಯುವ ಸಪ್ತಾಹಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಮತ್ತು ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಅವರು ಚಾಲನೆ ನೀಡಿದರು.
ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಜನವರಿ 12 ರಿಂದ 18 ವರೆಗೂ ಯುವ ಸಂಸದ್, ಯುವ ಗ್ರಾಮ ಸಭೆ, ಯುವ ವಾರ್ಡ್ ಸಭೆ ಸೇರಿದಂತೆ ಪ್ರತಿದಿನ ಯುವ ಸಮುದಾಯಕ್ಕೆ ನೆರವಾಗುವ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾದಕ ವ್ಯಸನ, ಮಹಿಳಾ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವ ಬಗ್ಗೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲಾಗುತ್ತದೆ. ಸರ್ಕಾರದಿಂದ ಯುವ ಸಮುದಾಯಕ್ಕೆ ಸುಮಾರು 540 ಯೋಜನೆಗಳಿದ್ದು ಈ ಸಪ್ತಾಹದಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತದೆ.
ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದರು ಯುಗಪುರುಷರು. ವಿವೇಕ + ಆನಂದ. ವಿವೇಕ ಇದ್ದ ಕಡೇ ಆನಂದ ಇರುತ್ತೆ. ಏನಾದರೂ ಬದಲಾವಣೆ ತರಬೇಕಾದರೇ ಯುವ ಶಕ್ತಿಯಿಂದ ಮಾತ್ರ ಸಾಧ್ಯ. ನಮ್ಮ ಜೀವನದಲ್ಲಿ ಪ್ರತಿದಿನ ಒಂದಿಲ್ಲೊಂದು ರೀತಿ ಸ್ವಾಮಿ ವಿವೇಕಾನಂದರನ್ನು ನೆನೆಯುತ್ತೇವೆ. ಇದು ಅವರ ವಿಚಾರಧಾರೆಯಲ್ಲಿನ ಶಕ್ತಿ. ಹೊಸ ಯುವ ನೀತಿ ರಚಿಸುವ ಸಲುವಾಗಿ ಸರ್ಕಾರ ಸಮಿತಿ ರಚಿಸಿದೆ. ಯುವಜನರಿಗೆ ಅನುಕೂಲವಾಗುವ ನೀತಿ ರಚಿಸಲಾಗುತ್ತದೆ. ನಮ್ಮ ಸರ್ಕಾರ ಯುವ ಜನರಿಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ, ನೆರವು ನೀಡಲು ಬದ್ದವಾಗಿದೆ. ಯುವ ಸಪ್ತಾಹ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಹಾರೈಸಿದರು.
ನಮ್ಮ ಸರ್ಕಾರ ಯುವ ಜನರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಯುವ ಶಕ್ತಿ ದೇಶದ ಶಕ್ತಿ. ಯುವಜನತೆಯಲ್ಲಿರುವ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವರಿಗೆ ಸೂಕ್ತ ಅವಕಾಶ, ವೇದಿಕೆ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ.. ಇಂದಿನ ಕಾಲಮಾನಕ್ಕೆ ತಕ್ಕಂತೆ ಹೊಸ ಯುವ ನೀತಿ ಅಗತ್ಯವಿದ್ದು, ಹೊಸ ಯುವ ನೀತಿ ರೂಪಿಸುವುದಕ್ಕಾಗಿ ಡಾ. ಆರ್ ಬಾಲ ಸುಬ್ರಹ್ಮಣ್ಯಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎರಡು ತಿಂಗಳಲ್ಲಿ ವರದಿಯನ್ನು ಪಡೆದು ಹೊಸ ಯುವ ನೀತಿಯನ್ನು ಜಾರಿಗೊಳಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಎರಡೂವರೆ ಕೋಟಿ ಯುವ ಜನತೆಯನ್ನು ತಲುಪಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಪ್ತಾಹವನ್ನು ಯಶಸ್ವಿಗೊಳಿಸಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಶಿಕ್ಷಣ ಬಹಳ ಮುಖ್ಯ. ಎನ್ಇಪಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮ ಕರ್ನಾಟಕ. ಪರಿಪೂರ್ಣ ಶಿಕ್ಷಣ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಎನ್ಇಪಿ ಅನುಷ್ಠಾನಗೊಳಿಸಿ ಕ್ರಾಂತಿಕಾರಕ ಬದಲಾವಣೆಗೆ ಹೆಜ್ಜೆ ಇಡಲಾಗಿದೆ. ಆವಿಷ್ಕಾರ, ತಂತ್ರಜ್ಞಾನ, ನಾವಿನ್ಯತೆಗೆ ಕರ್ನಾಟಕ ಹೆಸರುವಾಸಿಯಾಗಿದೆ. ಶಿಕ್ಷಣದ ಗುಣಮಟ್ಟದ ಕೊರತೆಯಿದ್ದು, ಶಿಕ್ಷಣದ ಗುಣಮಟ್ಟ 10 ಪಟ್ಟು ಹೆಚ್ಚಿಸಲಾಗುತ್ತದೆ. ವಿದ್ಯಾರ್ಥಿಗಳ ಕನಸಿನ ಉದ್ಯೋಗ ಪಡೆಯಲು ಏನ್ ಮಾಡಬೇಕು ಅನ್ನೋದನ್ನ ತಿಳಿಸಿ, ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ್ ಹೇಳಿದರು.
ಇದೆ ವೇಳೆ ಯುವ ಜನರಿಗೆ ಸಂಬಂಧಿಸಿದಂತೆ ಸರ್ಕಾರದಿಂದ 540 ಯೋಜನೆಗಳಿದ್ದು, ಅವುಗಳ ಬಗ್ಗೆ ಮಾಹಿತಿ ಇರುವ ‘ಯುವಜನ ಕಣಜ’ ಪುಸ್ತಕ ಬಿಡುಗಡೆಗೊಳಿಸಲಾಯಿತು.
ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್, ಪ್ರೊ.ತಿಮ್ಮೇಗೌಡ, ಪ್ರೋ.ಗೋಪಾಲಕೃಷ್ಣ ಜೋಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.