ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಿಂದ ಬೆಳೆನಾಶ ಆಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವವಹಿಸಿ ಮಾತನಾಡಿದ ಅವರು, 3 ರೈತ ಕಾಯಿದೆಗಳನ್ನು ವಾಪಸ್ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಸ್ವಾಗತಿಸಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಪ್ರಧಾನಿಯವರಿಗೆ ರೈತರ ಹಿತ ಮುಖ್ಯ. ಎರಡ್ಮೂರು ವರ್ಷಗಳಲ್ಲಿ ರೈತರ ಉತ್ಪನ್ನ ಎರಡು ಪಟ್ಟು ಹೆಚ್ಚಾಗಬೇಕೆಂದು ಮೋದಿಯವರ ಅಪೇಕ್ಷೆ ಇದೆ. ಆ ನಿಟ್ಟಿನಲ್ಲಿ ಅನೇಕ ಸೌಲಭ್ಯ- ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದು ವಿವರಿಸಿದರು.
ರೈತರ ಪರವಾಗಿರುವ ಸ್ವಾಮಿನಾಥನ್ ವರದಿ ಅನುಷ್ಠಾನ ಕುರಿತು ಕಾಂಗ್ರೆಸ್ನವರು ಕೇವಲ ಬೊಬ್ಬಿಟ್ಟರು. ಆದರೆ, ಅದನ್ನು ಮೋದಿಯವರು ಅದನ್ನು ಜಾರಿಗೊಳಿಸಿದ್ದಾರೆ. ಪ್ರಪಂಚಕ್ಕೆ ಯಾವ ದೇಶಕ್ಕೆ ಹೋದರೂ ಮೋದಿಜಿಯವರಿಗೆ ದೇವದುರ್ಲಭ ಸ್ವಾಗತ ಸಿಗುತ್ತಿದೆ. ಅಂಥ ಮಹಾನ್ ವ್ಯಕ್ತಿ ಈ ದೇಶದ ಪ್ರಧಾನಿ ಆಗಿರುವುದು ನಮ್ಮ ಸೌಭಾಗ್ಯ, ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ನುಡಿದರು.
ರೈತರ ಸಂಕಷ್ಟಗಳಿಗೆ ಸ್ಪಂದಿಸಲು ರಾಜ್ಯ- ಕೇಂದ್ರ ಸರಕಾರಗಳು ಸಿದ್ಧವಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಅಪೇಕ್ಷೆ ನಮ್ಮದು ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರ ಸರಕಾರ ವರ್ಷಕ್ಕೆ 6 ಸಾವಿರ ಕೊಡುತ್ತಿದ್ದು ರಾಜ್ಯ ಸರಕಾರ ಹೆಚ್ಚುವರಿಯಾಗಿ 4 ಸಾವಿರ ಕೊಡುವ ನಿರ್ಧಾರ ಜಾರಿಗೊಳಿಸಿದ್ದೇನೆ ಎಂದರು. ದೇಶದಲ್ಲಿ ಮೊದಲ ಬಾರಿಗೆ ಇಂಥ ನಿರ್ಧಾರ ಮಾಡಿದ್ದಾಗಿ ತಿಳಿಸಿದರು.
ಮಹಿಳೆಯರಿಗೆ ಶೇ 50 ಮೀಸಲಾತಿ ಕೊಟ್ಟಿದ್ದೇನೆ. ಮಹಿಳೆಯರೂ ಪುರುಷರಿಗೆ ಸರಿ ಸಮಾನರಾಗಿ ಕೆಲಸ ಮಾಡಬೇಕು. ಅವರು ಹತ್ತಾರು ಜನರಿಗೆ ಉದ್ಯೋಗ ಕೊಡುವಂತಾಗಬೇಕೆಂಬ ಆಶಯ ಮೋದಿಜಿ ಅವರದು ಎಂದು ವಿವರಿಸಿದರು.
ಬಿಟ್ ಕಾಯಿನ್ ಹಗರಣ ಯಾರೇ ಮಾಡಿದ್ದರೂ ಅಪರಾಧಿಗಳನ್ನು ಶಿಕ್ಷಿಸಲಾಗುವುದು. ವಿರೋಧ ಪಕ್ಷದವರು ಹಗುರವಾಗಿ ಮಾತನಾಡಬಾರದು. ದಾಖಲೆಗಳಿದ್ದರೆ ತಕ್ಷಣ ಕೊಡಿ ಎಂದು ಆಗ್ರಹಿಸಿದರು.
ಪಿ.ಎಚ್. ಪೂಜಾರ್ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು. ವಿಧಾನಪರಿಷತ್ತಿನ 25 ಸ್ಥಾನಗಳ ಪೈಕಿ 20ರಲ್ಲಿ ಮಾತ್ರ ನಾವು ಸ್ಪರ್ಧಿಸಿದ್ದೇವೆ. ಈ ಬಾರಿ 15ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಬೇರೆಯವರ ಕೈಕಾಲು ಹಿಡಿಯುವುದು ತಪ್ಪಲಿದೆ. ನಿಶ್ಚಿತವಾಗಿಯೂ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.