ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಇರುವ ಸಾಧಕ ಬಾಧಕಗಳ ಬಗ್ಗೆ ವರದಿ ಪಡೆಯುವ ನಿಟ್ಟಿನಲ್ಲಿ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಮಿತಿಯಲ್ಲಿ ಸಚಿವರಾದ ಮಾಧುಸ್ವಾಮಿ, ಆರ್. ಅಶೋಕ್, ವಿ. ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ ಸದಸ್ಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರು ನಡೆಸಬೇಕೇ ಅಥವಾ ಸರ್ಕಾರ ನಡೆಸಬೇಕೇ ಎಂಬುದರ ವರದಿ ಪಡೆಯಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಹಾಗೆಯೇ ಪೊಲೀಸ್ ಲಿಪಿಕ ಸೇವೆ ನೇಮಕ ತಿದ್ದುಪಡಿಗೆ ಒಪ್ಪಿಗೆ, ಉತ್ತರ ಕನ್ನಡದ ಕರಾವಳಿ ನದಿಗಳು ಸೇರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಲಾಂಡ್ ಯೋಜನೆಗೆ ಒಪ್ಪಿಗೆ, ಸಮುದ್ರ ನೀರು ನದಿ ಸೇರುವುದನ್ನು ತಡೆದು ಕೃಷಿ, ಸಿಗಡಿ ಸಾಕಾಣಿಕೆ, ಕುಡಿಯುವ ನೀರಿನ ಅಗತ್ಯ ಪೂರೈಕೆಗೆ ಬಳಸುವಂತೆ ಮಾಡುವ ಯೋಜನೆಗೆ 300 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಹಾಗೆಯೇ ಉಡುಪಿ – ಖಾನಾಪುರ ಹೆದ್ದಾರಿಯ 5 ಕಿಮೀ ದ್ವಿಪಥ ನಿರ್ಮಾಣಕ್ಕೆ 15 ಕೋಟಿ ಅನುದಾನಕ್ಕೆ ಒಪ್ಪಿಗೆ ದೊರೆತಿದೆ.
ಬೆಳಗಾವಿಯ ಸವದತ್ತಿಯಲ್ಲಿ ಪವನ ವಿದ್ಯುತ್ ಸ್ಥಾಪನೆಗೆ 30 ವರ್ಷಗಳ ಗುತ್ತಿಗೆ ನೀಡಲು ಅನುಮೋದನೆ, ಉಡುಪಿಯ ಹೆಬ್ರಿ ಯಲ್ಲಿ ಹೋಬಳಿ ಸೃಷ್ಟಿಗೆ ಒಪ್ಪಿಗೆ, ಸಂಧ್ಯಾ ಸುರಕ್ಷಾ ಯೋಜನೆಯ ಮಾಸಾಶನ ಹೆಚ್ಚಳಕ್ಕೆ ಅನುಮತಿ, ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ ವತಿಯಿಂದ ವಿದ್ಯಾರ್ಥಿಗಳಿಗೆ ಶುಚಿ ಕಿಟ್ ಪೂರೈಕೆಗೆ ನಿರ್ಧಾರ ಸೇರಿದಂತೆ ಇನ್ನೂ ಹಲವು ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.