ಮಂಗಳೂರು: ಸಾಮರಸ್ಯ ವೇದಿಕೆ, ಹೊಸ ದಿಗಂತ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು’ ಎಂಬ ವಿಷಯದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಮಂಗಳೂರಿನ ಸಂಘನಿಕೇತನದ ಸಭಾಂಗಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಇಂದು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಅಂತಹ ಸಾಮರಸ್ಯದ ಬದುಕನ್ನು ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ನೈಜ ಜೀವನದ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು. ಅಸ್ಪೃಶ್ಯತೆ ನಿವಾರಣೆಯಾಗಿ, ಎಲ್ಲರೂ ಒಂದೇ ಎಂಬ ಭಾವದಿಂದ ಬದುಕಿದರೆ ಅದರ ಆನಂದವೇ ಬೇರೆ. ಅಂತಹ ಸಮಾಜ ನಮ್ಮದಾಗಬೇಕಿದೆ ಎಂದು ತಿಳಿಸಿದರು.
ಅಸ್ಪೃಶ್ಯತೆ ಇಂದು ನಿನ್ನೆಯ ಸಮಸ್ಯೆಯಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರೂ ಸಹ ಇಂತಹ ಸಮಸ್ಯೆ ಅನುಭವಿಸಿದವರೇ ಎಂದು ಇತಿಹಾಸ ಹೇಳುತ್ತದೆ. ವರ್ಗೀಯವಾಗಿ ಮೃಗೀಯ ಭಾವನೆ ಇಂದಿಗೂ ಉಳಿದಿದ್ದು, ಸಾಮರಸ್ಯ ಕದಡುವ ವ್ಯವಸ್ಥೆ ಕಂಡುಬರುತ್ತಿದೆ. ಸಂಘಟನೆಯ ಮೂಲಕ ಸಾಮರಸ್ಯದ ಬದುಕನ್ನು ಸ್ವಯಂ ಆಗಿ ತೆಗೆದುಕೊಂಡಲ್ಲಿ ಜಾತಿ ಅಸ್ಪೃಶ್ಯತೆ ಕಡಿಮೆಯಾಗಿದೆ ಎಂದು ತಿಳಿಸಿದರು.
ಮತಾಂತರದ ಬಗೆಗೂ ಮಾತನಾಡಿದ ಸಚಿವ ಕೋಟ, ಮಾನಸಿಕವಾಗಿ ಮತಾಂತರದ ವಿರುದ್ಧ ಎಚ್ಚರ ಹೊಂದಿದಲ್ಲಿ ಮತಾಂತರ ನಿಯಂತ್ರಣಕ್ಕೆ ದಾರಿಯಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ, ಯುವಕರ ಮನಸ್ಸಿನಲ್ಲಿ ಸಾಮರಸ್ಯದ ಬಗ್ಗೆ ಹೊಸ ಹೊಳಹನ್ನು ಬಿತ್ತುವ ದೃಷ್ಟಿಯಿಂದ ಈ ಪ್ರಬಂಧ ಸ್ಪರ್ಧೆ ನಡೆದಿದೆ. ಅನೇಕ ವಿದ್ಯಾರ್ಥಿಗಳು ಬಹಳ ಉತ್ತಮ ಪ್ರಬಂಧಗಳನ್ನು ತಮ್ಮದೇ ಶೈಲಿಯಲ್ಲಿ ಬರೆದಿದ್ದಾರೆ. ಯಾವುದೇ ಸಮಾಜ ಗಟ್ಟಿಯಾಗಬೇಕಾದರೆ ಐಕ್ಯತೆ ಬಹಳ ಮುಖ್ಯ. ಎಲ್ಲರೂ ಒಟ್ಟಾಗಿ, ಏಕ ಮನಸ್ಸಿನಿಂದ ಇದ್ದಾಗ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ಸಾಮರಸ್ಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾಮರಸ್ಯದ ಮನೋಭಾವವನ್ನು ಬಹಳ ಹಿಂದಿನಿಂದಲೂ ಹೊಂದಿದೆ. ರಾಷ್ಟ್ರೀಯತೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸಮಾಜದಲ್ಲಿ ಸಾಮರಸ್ಯ ಸೃಷ್ಟಿಸುವುದು ಸಂಘಟನೆಗಳ ಕೆಲಸ ಅಲ್ಲ, ಬದಲಾಗಿ ಪ್ರತಿಯೊಬ್ಬರೂ ಈ ಬಗ್ಗೆ ಚಿಂತನೆ ಮಾಡಬೇಕು. ಜಗತ್ತಿನ ಎಲ್ಲರೂ ಒಂದೇ ಕುಟುಂಬ, ಪರಿವಾರ ಎಂಬಂತೆ ಬದುಕಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ಇರಬೇಕು. ಆಗ ಸಾಮರಸ್ಯ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ಪ್ರತಿಯೊಂದು ಕಾರ್ಯದಲ್ಲಿ ಎಲ್ಲರನ್ನೂ ಜೋಡಿಸುತ್ತದೆ. ಆದರೂ ಸಮಾಜದಲ್ಲಿ ತಾರತಮ್ಯ ಮನೋಭಾವ ಇಂದಿಗೂ ಇದೆ. ಕೆಲವು ಮನೆಗಳಲ್ಲಿಯೂ ನಾವು ಅಸ್ಪೃಶ್ಯತೆ ಕಾಣಬಹುದು. ಸಮಾಜದಲ್ಲಿ ಇಂದಿಗೂ ಬೇಧ ಭಾವಗಳಿವೆ. ಆರೆಸ್ಸೆಸ್ನಲ್ಲಿ ಇಂತಹ ತರತಮದ ಭಾವನೆ ಇಲ್ಲ. ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇದೆ ಎಂದು ಅವರು ತಿಳಿಸಿದರು. ಸಂಘ ಸಾಮರಸ್ಯ, ಸಮಾನತೆಯನ್ನು ಕಾರ್ಯರೂಪಕ್ಕೆ ತಂದಿದೆ ಎಂದರು. ಸಾಮರಸ್ಯವನ್ನು ಸಮಾಜದಲ್ಲಿ ಆಚರಣೆಗೆ ತರಬೇಕಾದರೆ ನಮ್ಮ ಮಾನಸಿಕತೆ ಬದಲಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಎಲ್ಲರನ್ನೂ ಸಹೋದರತ್ವದ ಭಾವದಲ್ಲಿ ನೋಡಿದಾಗ ಸಾಮರಸ್ಯದ ಗುರಿ ತಲುಪುವುದು ಸಾಧ್ಯ ಎಂದು ಅವರು ಹೇಳಿದರು.
ವೃತ್ತಿಗತ, ಕುಟುಂಬ, ಸಮಾಜದ ವ್ಯವಹಾರಗಳಲ್ಲಿ ಸಮಾನತೆಯ, ಎಲ್ಲರನ್ನೂ ಸ್ವೀಕರಿಸುವ ಭಾವನೆ ಬಂದಾಗ ಸಾಮರಸ್ಯ ಹುಟ್ಟುತ್ತದೆ. ಇಂತಹ ಸ್ಪರ್ಧೆಗಳು ಯುವ ಪೀಳಿಗೆಯ ಮನಸ್ಸನ್ನು ಸಕಾರಾತ್ಮಕವಾಗಿ ಪರಿವರ್ತನೆ ಸೃಷ್ಟಿಸಲು ಪ್ರೇರೇಪಿಸುತ್ತದೆ ಎಂದು ಅವರು ತಿಳಿಸಿದರು. ಯುವಜನರಲ್ಲಿ ಇಂತಹ ವಿಚಾರಗಳನ್ನು ಬಿತ್ತುವ ಕೆಲಸವಾಗಬೇಕು ಎಂದು ಹೇಳಿದರು. ಸಮಾನತೆ, ಭ್ರಾತೃತ್ವದಿಂದ ಸಮಾನತೆಯ ಸಮಾಜ ಸೃಷ್ಟಿ ಸಾಧ್ಯ. ಅಸಮಾನತೆ ತೊಡೆದು ಹಾಕಿ ಸಾಮರಸ್ಯ ಬಿತ್ತುವ ನಿಟ್ಟಿನಲ್ಲಿ ನಾವೆಲ್ಲರೂ ಸಣ್ಣ ಸಣ್ಣ ಪ್ರಯತ್ನಗಳನ್ನು ನಡೆಸಬೇಕು. ಆದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾರು ತಳಮಟ್ಟದಲ್ಲಿದ್ದಾರೋ ಅವರು ಮೇಲ್ಬರುವ ಮತ್ತು ಮೇಲಿರುವವರು ತಮಗಿಂತ ಕೆಳಗಿನವರನ್ನು ಬಗ್ಗಿ, ಕೈ ಹಿಡಿದು ಮೇಲೆತ್ತುವ ಕಾರ್ಯವಾಗಬೇಕು. ಇಂತಹ ದೃಷ್ಟಿಯಿಂದ ನಮ್ಮೆಲ್ಲರ ಪ್ರಯತ್ನ ಸಾಗಬೇಕು. ಪರಸ್ಪರ ದೂಷಣೆಯ ಬದಲು, ನಾವು ಸರಿಯಾಗಬೇಕು, ಬದಲಾಗಬೇಕು ಎಂಬ ದೃಷ್ಟಿಯಿಂದ ಪ್ರಯತ್ನ ನಡೆಸುವ ಕಾರ್ಯ ನಮ್ಮದಾದಲ್ಲಿ ಸಾಮಾಜಿಕ ಸಾಮರಸ್ಯ ಸೃಷ್ಟಿ ಸಾಧ್ಯ ಎಂದು ಅವರು ತಿಳಿಸಿದರು. ಅಸ್ಪೃಶ್ಯತೆಯನ್ನು ನೋಡಿಕೊಂಡು, ಸಹಿಸಿಕೊಂಡು ಇರುವುದು ಸರಿಯಲ್ಲ. ಆ ಸ್ಥಿತಿಯನ್ನು ಬದಲಾವಣೆ ಮಾಡುವ ಜವಾಬ್ದಾರಿಯ ಅರಿವು ನಮ್ಮಲ್ಲಿರಬೇಕು. ಅದಕ್ಕಾಗಿ ನಮ್ಮ ಪ್ರಯತ್ನ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಮಣ್ಯ ಭಟ್ ಅವರು ವಹಿಸಿ, ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮೇಲು ಕೀಳಿನ ಭಾವನೆ ಹಿಂದಿನ ಕಾಲದಲ್ಲಿ ಇರಲಿಲ್ಲ. ಇದಕ್ಕೆ ಸಾಕ್ಷಿ ರಾಮಾಯಣ, ಮಹಾಭಾರತ ಸಂದರ್ಭ. ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಲ್ಲಿ ಇಲ್ಲದ ಈ ತಾರತಮ್ಯ ಭಾವ ಆಮೇಲೆ ಸೃಷ್ಟಿಯಾಗಿದೆ. ಆ ಬಳಿಕ ಅದರ ಬೆಳವಣಿಗೆಯೂ ಭಯಾನಕವಾಗಿ ಆಗಿದೆ. ಇದು ನಕಾರಾತ್ಮಕ ವಿಚಾರ. ಸಕಾರಾತ್ಮಕ, ನಕಾರಾತ್ಮಕ ವಿಚಾರಗಳಲ್ಲಿ ಸಕಾರಾತ್ಮಕವನ್ನು ಆಯ್ಕೆ ಮಾಡಿ ಅದನ್ನು ಬೆಳೆಸಿಕೊಳ್ಳುವ ಮನಸ್ಸು ನಮ್ಮದಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಿಪಡಿಸಿದರು. ಸಕಾರಾತ್ಮಕ ವಿಚಾರದ ಚಿಂತನೆ ಇದ್ದವರನ್ನು ಬದಲಾವಣೆ ಮಾಡಬಹುದು ಎಂಬುದು ಸಂಘದ ದೃಷ್ಟಿ. ಪ್ರತಿಯೊಬ್ಬರು ಸೇರಿದರೆ ಸಮಾಜ. ಆ ವ್ಯವಸ್ಥೆಯ ಬಗ್ಗೆ ಸಾಮೂಹಿಕ ಚರ್ಚೆ ಆಗಬೇಕು. ಅದು ಸಾಮರಸ್ಯಕ್ಕೆ ತೆರೆದುಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣದ ಪ್ರಾಂತ ಸಂಚಾಲಕ ಡಾ. ಪಿ. ವಾಮನ ಶೆಣೈ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಾಮರಸ್ಯ ಗತವಿಧಿಯ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ ಲಕ್ಷ್ಮೀ ನಾರಾಯಣ ವೇದಿಕೆಯಲ್ಲಿದ್ದರು.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬೈಂದೂರಿನ ಪ್ರಶಾಂತ್ ಅರೆಶಿರೂರು, ದ್ವಿತೀಯ ಬಹುಮಾನವನ್ನು ಕುಮಟಾದ ಅಮೂಲ್ಯ ಎಸ್. ಗಾಂವ್ಕರ್ ಮತ್ತು ತೃತೀಯ ಬಹುಮಾನವನ್ನು ಬಸವನ ಬಾಗೇವಾಡಿಯ ರಕ್ಷಿತಾ ಮಾರುತಿ ಗಾಯಕ್ವಾಡ್ ಪಡೆದುಕೊಂಡಿದ್ದಾರೆ. ಹತ್ತು ಮಂದಿ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಹೊಸದಿಗಂತ ಪತ್ರಿಕೆಯ ಸಿಇಒ ಪಿ. ಎಸ್. ಪ್ರಕಾಶ್ ಅವರು ಸ್ವಾಗತ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.