ಪುತ್ತೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವೆಗಳ (ಸಿಎಸ್ಇ) 2020-21 ನೇ ಸಾಲಿನ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಮೃತ್ ಎಚ್. ವಿ. 752 ನೇ ರ್ಯಾಂಕ್ ಗಳಿಸುವ ಮೂಲಕ ಕಾಲೇಜಿಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಅಮೃತ್ ಅವರು ತಮ್ಮ ಪಿಯುಸಿ ಶಿಕ್ಷಣವನ್ನು 2009-2011 ರಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪಡೆದು ಬಳಿಕ ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದರು. ಬಿ.ಇ. ವ್ಯಾಸಂಗ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ 2 ವರ್ಷ ಸಾಪ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಶ್ರವಣ ದೋಷದ ಸವಾಲನ್ನು ಹಿಮ್ಮೆಟ್ಟಿ , ತರಬೇತಿ ಸಹ ಪಡೆಯದೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬೇಕೆಂದು ಹಠ ಹಿಡಿದ ಅಮೃತ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡುವುದರಲ್ಲಿ ಯಶ್ವಸಿಯಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಸಾಮಾನ್ಯವಾಗಿ ಯುಪಿಎಸ್ ಸಿ ಪರೀಕ್ಷೆ ಕಷ್ಟವಾಗಿರುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಬೇಕು, ಒಂದು ವಾರ-ಒಂದು ತಿಂಗಳಿಗೆ ಮುಗಿಯುವ ಪ್ರಯತ್ನವಲ್ಲ, ಪ್ರತಿದಿನ ಕೂಡ ಪರೀಕ್ಷೆ ತಯಾರಿಗೆ ಮುಖ್ಯವಾಗುತ್ತದೆ. ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ ಮೂರೂ ಪರೀಕ್ಷೆಗಳಿಗೆ ನಿರಂತರ ಶ್ರಮ ಬೇಕಾಗುತ್ತದೆ. ಸಾಮಾನ್ಯ ಜ್ಞಾನ, ವರ್ತಮಾನಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು, ಪ್ರತಿಯೊಂದು ಹಂತಕ್ಕೂ ಅದರದ್ದೇ ಆದ ಕಾರ್ಯತಂತ್ರವಿರುತ್ತದೆ, ಅದನ್ನು ನಾವು ಯೋಜನೆ ಮಾಡಿಕೊಂಡು ಮುಂದುವರಿಯಬೇಕು. ಪ್ರತಿದಿನ ನಾನು 6 ರಿಂದ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಇದು ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ತೇರ್ಗಡೆ ಹೊಂದಲು ಸಹಾಯವಾಯಿತು ಎಂದು ಅಮೃತ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮೊದಲಿಗೆ ಮಗನನ್ನು ಸರ್ಕಾರಿ ಸೇವೆಯಲ್ಲಿ ತೊಡಗಿಸಬೇಕೆಂಬ ಆಸೆ ಇತ್ತು. ಕೊನೆಯ ಕ್ಷಣದಲ್ಲಿ ಸರ್ಕಾರಿ ವ್ಯವಸ್ಥೆ ಬಗ್ಗೆ ಬೇಸರ ಬಂದು ಸುಮ್ಮನಾಗಿದ್ದೆ. ಅನಂತರ ಅವನೇ ಸ್ವಯಂ ವ್ಯಾಸಂಗ ಆರಂಭಿಸಿ ಪಾಸ್ ಆಗಿರುವುದು ಖುಷಿ ತಂದಿದೆ ಎನ್ನುತ್ತಾರೆ ತಾಯಿ ನಂದಿನಿ ಹೆದ್ದುರ್ಗ. ಅಮೃತ್ ಅವರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೆದ್ದುರ್ಗದ ವಿಶ್ವನಾಥ್ ಎಚ್. ಎಸ್. – ನಂದಿನಿ ದಂಪತಿ ಪುತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.