ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರಧಾನ ಭಾಷಣ ಮಾಡಿದರು.
ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ ಕೆಂಗಲ್ ಹನುಮಂತಯ್ಯ, ಕೆಂಪೇಗೌಡರಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿದರು. ಕರ್ನಾಟಕ ಗೌರವಯುತವಾದ ಇತಿಹಾಸ ಹೊಂದಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಹೋರಾಡಿದ ಝಾನ್ಸಿ ರಾಣಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಅಭಿನಂದನೆ ಸಲ್ಲಿಸಿದ ಅವರು, ಅವರ ಜನಸೇವೆ, ರೈತಪರ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಜನರ ಆಶೋತ್ತರಗಳಿಗೆ ಪೂರಕವಾಗಿದೆ. ಜನ ಕಲ್ಯಾಣಕ್ಕೆ, ಜನರ ಆಸೆ, ಆಕಾಂಕ್ಷೆ ಹಿತ ಕಾಪಾಡುವ ನಿಟ್ಟಿನಲ್ಲಿ ವಿಧಾನ ಮಂಡಲ ಕಾರ್ಯನಿರ್ವಹಿಸುತ್ತದೆ. ಜನತೆಯ ಕಲ್ಯಾಣಕ್ಕಾಗಿ ಇಂತಹ ಅಧಿವೇಶನಗಳು ಹೆಚ್ಚು ಪೂರಕವಾಗುತ್ತವೆ. ಜನರಿಂದ ಚುನಾಯಿತನಾದ ಪ್ರತಿನಿಧಿಗಳು ವಿಧಾನ ಮಂಡಲದ ಮೂಲಕ ಜನರ ಅಗತ್ಯತೆಗಳನ್ನು ಪೂರೈಸಲು ಅಗತ್ಯ ಚರ್ಚೆ ನಡೆಸುತ್ತಾರೆ ಎಂದು ಅವರು ಹೇಳಿದ್ದಾರೆ.
ವಿಧಾನ ಮಂಡಲ ಲೋಕತಂತ್ರದ ಆತ್ಮವಾಗಿದೆ. ಲೋಕತಂತ್ರವು ಸಂವಿಧಾನಾತ್ಮಕವಾಗಿದೆ. ಸಂವಿಧಾನಕ್ಕೆ ಪೂರಕವಾಗಿ, ಕರ್ತವ್ಯ ನಿಷ್ಠೆಯಿಂದ ಜನರ ಸಾಮಾಜಿಕ, ಆರ್ಥಿಕ ಉನ್ನತಿಗೆ ಸದನದ ಸದಸ್ಯರು ಕಾರ್ಯ ನಿರ್ವಹಿಸುತ್ತಾರೆ. ವಿಧಾನ ಮಂಡಲದಲ್ಲಿಯೇ ಸಾರ್ವಜನಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ವಿಧೇಯಕಗಳ ಮಂಡನೆ, ಅಂಗೀಕಾಯವಾಗುತ್ತದೆ. ಇವೆಲ್ಲವೂ ಕಾನೂನಾತ್ಮಕವಾಗಿ, ಸಂವಿಧಾನದ ಆಶಯದಂತೆ ಚರ್ಚೆ, ಸಂವಾದಗಳ ಮೂಲಕ ನಡೆಯುತ್ತಿದ್ದು, ಆ ಮೂಲಕ ಉತ್ತಮವಾದುದನ್ನೇ ಜನರಿಗೆ ನೀಡಲು ವಿಧಾನ ಮಂಡಲ ಅಧಿವೇಶನಗಳು ಪೂರಕವಾಗಿದೆ.
ನಮ್ಮ ಲೋಕತಂತ್ರದಲ್ಲಿ ಪರ, ವಿರೋಧ, ಚರ್ಚೆ, ವಾದ, ವಿವಾದ ಎಲ್ಲಕ್ಕೂ ಅವಕಾಶವಿದೆ. ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಜನರ ವಿಶ್ವಾಸವನ್ನು ನಾವು ಸಂಸದೀಯ ಪ್ರಣಾಳಿಕೆಯೊಳಗೂ ಕಾಣಬಹುದಾಗಿದೆ. ವ್ಯಾಪಕ ಚರ್ಚೆಯ ಬಳಿಕ ಇದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ, ಬಳಿಕ ಇದನ್ನು ಜಾರಿಗೆ ತರಲಾಗುತ್ತಿದೆ. ಅಂತಹ ಸಾರ್ಥಕ ಚರ್ಚೆಗಳು ವಿಧಾನ ಮಂಡಲದಲ್ಲಿ ನಡೆಯುತ್ತದೆ. ಇಂತಹ ಸೌಹಾರ್ದಯುತ ಚರ್ಚೆಯ ಮೂಲಕ ಜನಕಲ್ಯಾಣ ಆಗಬೇಕಿದೆ. ಸಾಮೂಹಿಕ ಭಾವನೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಜನರಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಯೂರಲು ಸಾಧ್ಯವಾಗುತ್ತದೆ. ಇದು ಜನರ ಆರ್ಥಿಕ, ಸಾಮಾಜಿಕ ಜೀವನದ ಮೇಲೆಯೂ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.