ಬೆಂಗಳೂರು: ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿ ಕೆಲಸದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಇತರ ಸಚಿವರ ಜೊತೆ ಚರ್ಚಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಹಿಂದುಳಿದ ವರ್ಗದವರ ಮನೆಮನೆಗೆ ಅಂಥ ಕಾರ್ಯಕ್ರಮ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ರಾಜ್ಯದ ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯದಿಂದ ಸಚಿವರಾ ಕೆ.ಎಸ್. ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಎಂ.ಟಿ.ಬಿ. ನಾಗರಾಜ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಆನಂದ್ ಸಿಂಗ್, ಸಂಸದ ಪಿ.ಸಿ. ಮೋಹನ್ ಮತ್ತು ರಾಜ್ಯಸಭಾ ಸದಸ್ಯ ನಾರಾಯಣ್ ಅವರಿಗೆ ಹಾಗೂ ಒಬಿಸಿ ಸಮುದಾಯದ ಶಾಸಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಹಿಂದೆ ಸಾಮಾಜಿಕ ನ್ಯಾಯ ಶಬ್ದದ ಗರಿಷ್ಠ ಪ್ರಮಾಣದ ದುರುಪಯೋಗವಾಗಿದೆ. ನಿಮ್ಮೆಲ್ಲರಲ್ಲೂ ಬುದ್ಧಿ, ಶಕ್ತಿ, ದೈಹಿಕ ಶಕ್ತಿ ಮತ್ತು ಬುದ್ಧಿಶಕ್ತಿ ಇದೆ. ಸಮನಾದ ಅವಕಾಶ ಕೇಳಿ ಪಡೆಯಿರಿ ಎಂದು ಕಿವಿಮಾತು ಹೇಳಿದರು. ಬಿಜೆಪಿ ಮತ್ತು ಬಿಜೆಪಿ ಸರಕಾರ ನೈಜ, ಸಾತ್ವಿಕ ಶಕ್ತಿಯಾಗಿ, ಸಾರ್ಥಕತೆಯಿಂದ ಮತ್ತು ಪ್ರಾಮಾಣಿಕವಾಗಿ ಹಿಂದುಳಿದ ವರ್ಗದವರ ಪರ ನಿಲ್ಲಲಿದೆ ಎಂದು ಅವರು ತಿಳಿಸಿದರು. ನ್ಯಾಯ ಸಿಗುವ ರೀತಿಯಲ್ಲಿ ಸಂಘಟನೆ ಮಾಡುವಂತೆ ಅವರು ಸಲಹೆ ನೀಡಿದರು.
ಸಚಿವ ಸುನೀಲ್ ಕುಮಾರ್ ಅವರು ಮಾತನಾಡಿ, ಇದು ಪಕ್ಷಕ್ಕೆ ಸಂದ ಗೌರವ ಎಂದು ಅಭಿಪ್ರಾಯಪಟ್ಟರು. ಬೇರೆ ಪಕ್ಷಗಳು ರಾಜಕಾರಣಕ್ಕಾಗಿ ಜಾತಿಯನ್ನು ಬಳಸಿಕೊಂಡಿದೆ ಎಂದು ತಿಳಿಸಿದರು. ಸಾಮಾಜಿಕ ಪರಿವರ್ತನೆಯ ಪರಿಕಲ್ಪನೆಯಡಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದರು. ಹಿಂದುಳಿದ ವರ್ಗದವರಿಗಾಗಿ ಕೈಗೊಂಡ ವಿಶಿಷ್ಟ ನಿರ್ಣಯಗಳನ್ನು ಅವರು ಶ್ಲಾಘಿಸಿದರು.
ಸನ್ಮಾನಿತರಾದ ಸಂಸದ ಪಿ.ಸಿ.ಮೋಹನ್ ಅವರು ಮಾತನಾಡಿ, ಹಿಂದೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಬಿಸಿಯ ಸಮುದಾಯವನ್ನು ಈ ಜನರನ್ನು ಮತಬ್ಯಾಂಕ್ ಆಗಿ ಪರಿಗಣಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಪ್ರಮಾಣದ ಸಚಿವರ ಸ್ಥಾನವನ್ನು ಒಬಿಸಿ ಸಮುದಾಯಕ್ಕೆ ನೀಡಿದ್ದಾರೆ. ಬಿಜೆಪಿ ದಿನೇದಿನೇ ದೊಡ್ಡ ಪಕ್ಷವಾಗಿ ಬೆಳೆಯುತ್ತಿದೆ ಎಂದು ನುಡಿದರು. ಬಿಜೆಪಿ, ಒಬಿಸಿಯ ಹಿತೈಷಿಯಾಗಿದೆ ಎಂದರು.
ಶಾಸಕ ತಿಪ್ಪಾರೆಡ್ಡಿ ಅವರು ಮಾತನಾಡಿ, ಬಿಜೆಪಿ, ಹಿಂದುಳಿದ ವರ್ಗದವರಿಗೆ ಗರಿಷ್ಠ ಅವಕಾಶ ನೀಡಿದೆ. ಮುಂದಿನ ಬಾರಿ ಅಸೆಂಬ್ಲಿಯಲ್ಲಿ ಬಿಜೆಪಿ ಅಧಿಕಾರ ಪಡೆಯಲು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.