ಬೆಂಗಳೂರು: ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಮಂಥನದ ವತಿಯಿಂದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಪ್ರಯುಕ್ತ, ಸ್ವರಾಜ್ಯ- 75ರ ಬಗ್ಗೆ ಕಾರ್ಯಕ್ರಮ ಜರುಗಿತು.
ಖ್ಯಾತ ಆಯುರ್ವೇದ ವೈದ್ಯೆ ಡಾ. ಶುಭಮಂಗಳ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾ.ಸ್ವ.ಸಂ. ದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್ ರವರು ವಿಚಾರ ಪ್ರಸ್ತುತ ಪಡಿಸಿದರು.
ಜಯನಗರ ನಗರದ ಮಾನ್ಯ ಸಂಘಚಾಲಕ ರವಿ ಚಕ್ರವರ್ತಿ, ಸಹ ಸಂಘಚಾಲಕ ಡಾ. ಸುರೇಶ್, ರಾಜೇಶ್, ಡಾ. ಶುಭಮಂಗಳ ಮತ್ತು ಜಯನಗರ ನಗರದ ಪ್ರಚಾರ ಪ್ರಮುಖ ಪ್ರದೀಪ ಅವರು ದೀಪ ಪ್ರಜ್ವಲಿಸುವ ಮೂಲಕ ಪ್ರಾರಂಭವಾಯಿತು.
ರಾಜೇಶ ಅವರು ಸ್ವರಾಜ್ಯ- 75ರ ಮಹತ್ವ ತಿಳಿಸಿದರು. ಭಾರತ ಸ್ವತಂತ್ರವಾದ ದಿನ ಗಾಂಧಿಯವರು ಕಲ್ಕತ್ತಾದಲ್ಲಿದ್ದರು. ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಅವರು “This is not the political freedom I wished. This is one step. (ಈ ರೀತಿಯ ರಾಜಕೀಯ ಸ್ವಾತಂತ್ರ್ಯವನ್ನು ನಾನು ಬಯಸಿರಲಿಲ್ಲ. ಇದು ಮೊದಲನೆಯ ಹೆಜ್ಜೆ)” ಎಂದರು. 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಿಕ್ಕಿದ್ದು 2019ರಲ್ಲಿ ಎಂದು ಅವರು ಹೇಳಿದರು. ಅಖಂಡ ಭಾರತದ ಚಿತ್ರಣ ಹಾಗು ಅದರ ಮೇಲೆ ಮೊಘಲರು, ಡಚ್ಚರು, ಬ್ರಿಟೀಷರು ಆಕ್ರಮಣ ಮಾಡಿದ ಬಗೆ ಹಾಗು ಅಖಂಡ ಭಾರತದಿಂದ ಇಂದಿನ ಭಾರತ ಹೊಂದಿರುವ ಭೂಪ್ರದೇಶದ ಮಾಹಿತಿಯನ್ನು ವಿವರಿಸಿದ್ದಲ್ಲದೆ,.ಬೇರೆ ರಾಷ್ಟ್ರಗಳ ಸಂಸ್ಕೃತಿ ನಾಶವಾದ ಬಗೆ ಮತ್ತು ಭಾರತದ ಮೇಲೆ ನೂರಾರು ವರ್ಷಗಳ ಕಾಲ ಆಕ್ರಮಣವಾದರೂ ನಮ್ಮ ಪುರಾತನ ಸಂಸ್ಕೃತಿ ಉಳಿದು ಬಂದ ಹಾದಿಯನ್ನು ವಿವರವಾಗಿ ಅವರು ತಿಳಿಸಿಕೊಟ್ಟರು.
ಮೇಲು ಕೀಳುಗಳ ವಿರುದ್ಧ ಹೋರಾಡಬೇಕಿದೆ. ಮುಂದಿನ ಪೀಳಿಗೆಗೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ಬಗೆ ಹಾಗು ಅದಕ್ಕಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆದು ದೇಶ ಮೊದಲ ಎಂದು ಪ್ರಾಣಾರ್ಪಣೆ ಮಾಡಿದ ಮಹಾನ್ ನಾಯಕರ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಶುಭಮಂಗಳ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ರೀತಿಯ ಕಾರ್ಯಕ್ರಮಗಳ ಮಹತ್ವವನ್ನು ಒತ್ತಿಹೇಳಿದರು. ಈ ಭಾಷಣವು ತಮ್ಮನ್ನು 3 ದಶಕಗಳ ಹಿಂದೆ ಕರೆದೊಯ್ದು, ವಿದ್ಯಾನಂದ ಶೆಣೈ ಅವರ ಭಾರತ ದರ್ಶನದ ನೆನಪು ಮಾಡಿಸಿತೆಂದರು. ಭಾರತೀಯರು ತಮ್ಮ ಆಹಾರ ಪದ್ದತಿಗಳನ್ನು ಆಯುರ್ವೇದದ ರೀತಿಗೆ ಬದಲಿಸಿ ತಮ್ಮ ಜೀವನವನ್ನು ಬೆಳಗಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನರೇಶ್ ಅಧ್ಯಕ್ಷರ ಮತ್ತು ವಕ್ತಾರರ ಪರಿಚಯ ಮಾಡಿಸಿದರು. ಪ್ರಶಾಂತ ಚಕ್ರವರ್ತಿಯವರು ಕಯ್ಯಾರ ಕಿಞ್ಞಣ್ಣ ರೈಯವರ “ಎನ್ನೆದೆಯ ಬಿಸಿ ರಕ್ತ ಕುದಿ ಕುದಿಸಿ ಮಸಿ ಮಾಡಿ” ಎಂಬ ಖ್ಯಾತ ರಾಷ್ಟ್ರ ಭಕ್ತಿ ಗೀತೆಯನ್ನು ಹಾಡಿ ಇಡಿಯ ಕಾರ್ಯಕ್ರಮಕ್ಕೆ ಒಳ್ಳೆಯ ಆಧಾರ ಒದಗಿಸಿ ಕೊಟ್ಟರು. ರಾಮಸ್ಕಂದ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಪ್ರದೀಪ್ ನಿರ್ವಹಿಸಿದರು. ಧೃತೀಶ್ ರವರು ವಂದೇ ಮಾತರಂ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.