ಬೆಂಗಳೂರು: ನಾಳೆ (ಸೆ. 17 ರಂದು) ವಿಶ್ವದ ಜನಪ್ರಿಯ ನಾಯಕ, ಗೌರವಾಉ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವಿದ್ದು, ಅಕ್ಟೋಬರ್ 7 ರಂದು ಮೋದಿಯವರು ಮೊದಲ ಬಾರಿ ಗುಜರಾತಿನ ಮುಖ್ಯಮಂತ್ರಿಯಾದ 20 ನೇ ವಾರ್ಷಿಕೋತ್ಸವ ಬರಲಿದೆ. ಆದ್ದರಿಂದ ಸೆ.17ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯದಲ್ಲಿ ಕೆರೆಕಟ್ಟೆಗಳ ಸ್ವಚ್ಛತೆ, ಜಲಮೂಲಗಳ ಪ್ಲಾಸ್ಟಿಕ್ ಹೆಕ್ಕುವುದು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ತಿಳಿಸಿದರು.
ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು. ರೋಗಿಗಳಿಗೆ ಅಗತ್ಯ ಸೇವೆ ಮಾಡಲಾಗುವುದು ಎಂದರಲ್ಲದೆ, ದೇಶದಲ್ಲಿ 100 ಸ್ಮಾರ್ಟ್ ಸಿಟಿ ನೀಡಿದ ಗೌರವ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ರಾಜ್ಯಕ್ಕೆ 7 ಸ್ಮಾರ್ಟ್ ಸಿಟಿಗಳನ್ನು ನೀಡಿದ್ದು, ಅವರಿಗೆ ಜನರ ಪರವಾಗಿ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.
ದೀಪಾವಳಿ ತನಕ ಉಚಿತ ಪಡಿತರ ನೀಡುವ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಕೋವಿಡ್ ಲಸಿಕೆಯನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು. ಸೆ. 19ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ದಾವಣಗೆರೆಯಲ್ಲಿ ನಡೆಯಲಿದೆ. ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು, ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ 20 ದಿನಗಳ ಕಾಲ ಸೇವೆ ಹಾಗೂ ಸಮರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ದಿವ್ಯಾಂಗರಿಗೆ ನೆರವು ಮತ್ತು ಸೈಕಲ್, ಬೈಕ್, ಶ್ರವಣ ಉಪಕರಣ ಸೇರಿ ಉಪಯುಕ್ತ ಸಲಕರಣೆಗಳ ವಿತರಣೆ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಲಾಗುವುದು. ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಿಸಲಾಗುವುದು ಎಂದರು.
ಕಿಸಾನ್ ಸನ್ಮಾನ್ ನಿಧಿ, ಉಚಿತ ಪಡಿತರ, ಗರ್ಭಿಣಿಯರ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸಿರುವುದು, ವಿದ್ಯಾರ್ಥಿಗಳಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ ಜಯಂತಿ ಇದ್ದು, ವಿಶಿಷ್ಟವಾಗಿ ಆಚರಿಸಲಾಗುವುದು. ಸ್ವದೇಶಿ ವಸ್ತು ಖರೀದಿಯ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವರು. ಖಾದಿ, ಸ್ವದೇಶಿ ಬಟ್ಟೆ ಖರೀದಿಸಲಾಗುವುದು ಎಂದರು. ಕುಂಬಾರರು, ಕಮ್ಮಾರರು ಸೇರಿ ಕೌಶಲ್ಯ ಆಧರಿತ ಬದುಕು ಸಾಗಿಸುವವರಿಂದ ವಸ್ತುಗಳನ್ನು ಖರೀದಿಸಲಾಗುತ್ತದೆ. ಟಾಯಿಲೆಟ್ ಕಟ್ಟಿಸಿಕೊಡಲು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರಕಾರದ ಅನುದಾನ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ಗೌರವಾನ್ವಿತ ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು, ಸ್ಮರಣಿಕೆಗಳು ಇತ್ಯಾದಿಗಳು ಹರಾಜಿಗೆ ಲಭ್ಯವಿರುತ್ತದೆ. ಹರಾಜಿನಲ್ಲಿ ಗರಿಷ್ಠ ನೋಂದಣಿ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡಲಿದ್ದೇವೆ. ಸಂಗ್ರಹಿಸಿದ ದೊಡ್ಡ ಮೊತ್ತದ ನಿಧಿಯನ್ನು ‘ನಮಾಮಿ ಗಂಗೆ ಯೋಜನೆ’ಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ನಮೋ ಆಪ್ನಲ್ಲಿ ‘ಮೈ ಸೇವಾ ಟ್ರಿಬ್ಯೂಟ್’ (ನನ್ನ ಸೇವಾ ಕೊಡುಗೆ) ಮಾಡ್ಯೂಲ್ ಲಭ್ಯವಿದೆ. ಇಲ್ಲಿ ಪಕ್ಷದ ಕಾರ್ಯಕರ್ತರು ಅವರು ಕೈಗೊಂಡ ಸೇವಾ ಕಾರ್ಯದ ಬಗ್ಗೆ ವಿವರಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಹಾರೈಸಲು ಉತ್ತೇಜನ ನೀಡಲಾಗುವುದು ಎಂದರು.
ಸೆಪ್ಟೆಂಬರ್ 25 ನಮ್ಮೆಲ್ಲರಿಗೂ ಆದರ್ಶಪ್ರಾಯರು ಮತ್ತು ಪ್ರೇರಕರೂ ಆಗಿರುವ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮದಿನ. ಅವರ ವಿಚಾರಗಳಾಗಿರುವ ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯಕ್ಕೆ ಬದ್ಧರಾಗಿದ್ದೇವೆ. ಜನಸಂಘದ ಚಿಹ್ನೆ “ದೀಪದಿಂದ ಕಮಲದ ವರೆಗೆ” ಎಂಬ ಪರಿಕಲ್ಪನೆಯಡಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಪಕ್ಷ ಬೆಳೆದುಬಂದ ದಾರಿಯನ್ನು ಮಂಡಲ, ಬೂತ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಿಳಿಸುವ ಸಭೆಗಳು ನಡೆಯಲಿವೆ ಎಂದು ವಿವರಿಸಿದರು. ರಾಜ್ಯದ 60 ಸಾವಿರ ಬೂತ್, 311 ಮಂಡಲ, 37 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ಇಂಥ ಕಾರ್ಯಕ್ರಮ ನಡೆಯಲಿದೆ ಎಂದರು. ಎಲ್ಲ ಜನಪ್ರತಿನಿಧಿಗಳೂ ಭಾಗವಹಿಸುವರು ಎಂದು ತಿಳಿಸಿದರು.
ಗಾಂಧಿ ಜಯಂತಿ, ದೀನ್ದಯಾಳ್ ಉಪಾಧ್ಯಾಯರ ಜಯಂತಿ ಮತ್ತು ಪ್ರಧಾನಿ ಮೋದಿಯವರ ಜನ್ಮದಿನದ ಹಿನ್ನೆಯಲ್ಲಿ 20 ದಿನಗಳ ಕಾಲ ನಡೆಯುವ ಸೇವಾ ಸಮರ್ಪಣಾ ಅಭಿಯಾನದಲ್ಲಿ ಲಕ್ಷಾಂತರ ಜನರಿಗೆ ನೆರವು ನೀಡಲಾಗುವುದು. ಈ ಅವಧಿಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಶುಭ ಹಾರೈಸುವ ಮತ್ತು ಬಡವರಿಗಾಗಿ ಅವರು ಕೈಗೊಂಡ ಕಲ್ಯಾಣ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುವ 5 ಕೋಟಿ ಪೋಸ್ಟ್ ಕಾರ್ಡ್ಗಳನ್ನು ಜನರು ಬರೆಯಲು ಪ್ರೇರೇಪಿಸಲಾಗುವುದು. ಪ್ರತಿ ಬೂತ್ನಿಂದ 10 ಪೋಸ್ಟ್ ಕಾರ್ಡ್ ಬರೆಯುವಂತೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ರಾಜ್ಯದಿಂದ ಸುಮಾರು 6 ಲಕ್ಷ ಪತ್ರಗಳನ್ನು ಬರೆಯಲಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.