ನವದೆಹಲಿ: ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಿರುವ ಪ್ರಧಾನಿ ಮೋದಿ ಅವರು, ಸ್ಮಾರಕದಲ್ಲಿನ ವಸ್ತು ಪ್ರದರ್ಶನ ಗ್ಯಾಲರಿಗಳನ್ನು ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದ ಮಹಾತ್ಮರ ಸ್ಮರಣಾರ್ಥ ಪುಷ್ಪಾರ್ಚನೆ ಮತ್ತು ಎರಡು ನಿಮಿಷಗಳ ಮೌನಾಚರಣೆ ನಡೆಸಿ ಗೌರವ ನಮನ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅವರು, ಜಲಿಯನ್ ವಾಲಾಬಾಗ್ ದೇಶಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಣೆ ,ತ್ಯಾಗ ಮಾಡಲು ಅಸಂಖ್ಯಾತ ದೇಶಭಕ್ತರಿಗೆ, ಕ್ರಾಂತಿಕಾರಿಗಳಿಗೆ ಧೈರ್ಯ ತುಂಬಿದ ಸ್ಥಳವಾಗಿದೆ. ಈ ಪ್ರದೇಶ ಸರ್ದಾರ್ ಉದಮ್ ಸಿಂಗ್, ಭಗತ್ ಸಿಂಗ್ರಂತಹ ಹಲವು ಮಂದಿ ಕ್ರಾಂತಿಯ ಕಿಡಿಗಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಲು ಸ್ಥೈರ್ಯ ತುಂಬಿದ ಪ್ರದೇಶವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಿದ್ದಾರೆ. ಅವರು ಸ್ಮಾರಕದಲ್ಲಿ ಅಭಿವೃದ್ಧಿಪಡಿಸಲಾದ ವಸ್ತುಪ್ರದರ್ಶನ ಗ್ಯಾಲರಿಗಳನ್ನು ಉದ್ಘಾಟಿಸಿದ್ದಾರೆ. ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲು ಸರಕಾರ ಕೈಗೊಂಡ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಈ ಕಾರ್ಯಕ್ರಮವು ಅನಾವರಣಗೊಳಿಸಿದೆ.
ಕೈಗೊಂಡ ಉಪಕ್ರಮಗಳು
ಅನಗತ್ಯ ಮತ್ತು ಕಡಿಮೆ ಬಳಕೆಯಲ್ಲಿದ್ದ ಕಟ್ಟಡಗಳ ಮರುಬಳಕೆ ಮೂಲಕ ನಾಲ್ಕು ವಸ್ತು ಪ್ರದರ್ಶನ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಆ ಅವಧಿಯಲ್ಲಿ ಪಂಜಾಬ್ ನಲ್ಲಿ ನಡೆದ ಘಟನೆಗಳ ಐತಿಹಾಸಿಕ ಮೌಲ್ಯವನ್ನು ಗ್ಯಾಲರಿಗಳಲ್ಲಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು 3ಡಿ ಮರುಸೃಷ್ಟಿ ಸೇರಿದಂತೆ ಆಡಿಯೋ-ವಿಶುವಲ್ ತಂತ್ರಜ್ಞಾನದ ಸಮ್ಮಿಳನದೊಂದಿಗೆ ಪ್ರದರ್ಶಿಸಲಾಗುತ್ತದೆ. ಜೊತೆಗೆ ಕಲೆ ಮತ್ತು ಶಿಲ್ಪಕಲೆಯ ಕಲಾಕೃತಿಗಳನ್ನೂ ಇಲ್ಲಿ ಪ್ರದರ್ಶಿಸಲಾಗುವುದು.
1919ರ ಏಪ್ರಿಲ್ 13 ರಂದು ನಡೆದ ಘಟನೆಗಳನ್ನು ಪ್ರದರ್ಶಿಸಲು ಧ್ವನಿ ಮತ್ತು ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂಕೀರ್ಣದಲ್ಲಿ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪಂಜಾಬ್ನ ಸ್ಥಳೀಯ ವಾಸ್ತುಶಿಲ್ಪ ಶೈಲಿಗೆ ಅನುಗುಣವಾಗಿ ವಿಸ್ತಾರವಾದ ಪಾರಂಪರಿಕ ಪುನಃಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಶಹೀದಿ ಬಾವಿಯನ್ನು ದುರಸ್ತಿ ಮಾಡಲಾಗಿದ್ದು, ಪುನಃಸ್ಥಾಪಿಸಲಾಗಿದೆ. ಬಾಗ್ನ ಹೃದಯ ಭಾಗವಾದ, ʻಜ್ವಾಲೆಯ ಸ್ಮಾರಕʼ ವನ್ನು ದುರಸ್ತಿ ಮಾಡಲಾಗಿದೆ ಮತ್ತು ಪುನಃಸ್ಥಾಪಿಸಲಾಗಿದೆ. ನೀರಿನ ಕೊಳವನ್ನು ʻಲಿಲ್ಲಿ ಕೊಳʼವಾಗಿ ಪುನರುಜ್ಜೀವಗೊಳಿಸಲಾಗಿದೆ. ಜೊತೆಗೆ ಸುಗುಮ ಚಲನವಲನಕ್ಕಾಗಿ ನಡಿಗೆ ಪಥಗಳನ್ನು ವಿಶಾಲಗೊಳಿಸಲಾಗಿದೆ.
ಸೂಕ್ತ ಸೂಚನಾ ಫಲಕಗಳನ್ನು ಒಳಗೊಂಡ ನವೀಕೃತ ನಡಿಗೆ ಪಥಗಳನ್ನು ಒಳಗೊಂಡಂತೆ ಹಲವಾರು ಹೊಸ ಮತ್ತು ಆಧುನಿಕ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನ ತಾಣಗಳಿಗೆ ಪ್ರಕಾಶಮಾನವಾದ ಬೆಳಕಿನ ವ್ಯವಸ್ಥೆ, ಸ್ಥಳೀಯ ಸಸ್ಯಗಳೊಂದಿಗೆ ಉದ್ಯಾನ ವ್ಯವಸ್ಥೆ ಮತ್ತು ಉದ್ಯಾನದಾದ್ಯಂತ ಆಡಿಯೋ ನೋಡ್ಗಳ ಸ್ಥಾಪನೆ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, ʻಸಾಲ್ವೇಶನ್ ಗ್ರೌಂಡ್ʼ, ʻಅಮರ್ ಜ್ಯೋತ್ʼ ಮತ್ತು ʻಫ್ಲ್ಯಾಗ್ ಮಾಸ್ಟ್ʼಗಾಗಿ ಹೊಸ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕೇಂದ್ರ ಸಂಸ್ಕೃತಿ ಖಾತೆ ಸಚಿವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು, ಸಂಸ್ಕೃತಿ ಖಾತೆ ರಾಜ್ಯ ಸಚಿವರು, ರಾಜ್ಯಪಾಲರು ಮತ್ತು ಪಂಜಾಬ್ ಮುಖ್ಯಮಂತ್ರಿ, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು, ಪಂಜಾಬ್ನ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.