ನವದೆಹಲಿ: ಟೊಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿದ ಭಾರತೀಯ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೇರಿದಂತೆ, ಇನ್ನಿತರ ಕ್ರೀಡಾಪಟುಗಳ ಪರಿಶ್ರಮ ಗಮನಿಸಿರುವ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 40 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸುತ್ತಿದೆ.
ಈ ಸಂಬಂಧ ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರು ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಲವಾರು ಸಂತೋಷದ ಕ್ಷಣಗಳನ್ನು ಭಾರತೀಯರು ಅನುಭವಿಸುವಂತಾಗಿದೆ. ದಾಖಲೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್, ದೃಢವಾದ ಜಿಎಸ್ಟಿ ಸೇರಿದಂತೆ ಹಲವು ಮಹತ್ವದ ಘಟನೆಗಳು ಆಗಸ್ಟ್ನಲ್ಲಿ ನಡೆದಿವೆ. ಜೊತೆಗೆ ಒಲಿಂಪಿಕ್ಸ್ನಲ್ಲಿ ಪಿ. ವಿ. ಸಿಂಧು ಪದಕ ಗೆದ್ದಿದ್ದು ಮಾತ್ರವಲ್ಲ, ಪುರುಷರು ಮತ್ತು ಮಹಿಳೆಯರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನ ನೋಡಿದ್ದೇವೆ. 130 ಕೋಟಿ ಭಾರತೀಯರು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ದೇಶ ಮತ್ತಷ್ಟು ಸಾಧನೆ ಮೆರೆಯುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ ಎಂದು ಹೇಳಿದ್ದಾರೆ.
Not only has PV Sindhu won a well deserved medal, but also we saw historic efforts by the men’s and women’s hockey teams at the Olympics. I’m optimistic that 130 crore Indians will continue to work hard to ensure India reaches new heights as it celebrates its Amrut Mahotsav.
— Narendra Modi (@narendramodi) August 2, 2021
ಭಾರತೀಯ ಮಹಿಳಾ ಹಾಕಿ ತಂಡ ಸೋಮವಾರ ಆಸ್ಟ್ರೇಲಿಯಾ ವಿರುದ್ಧ 1 – 0 ಅಂತರದಲ್ಲಿ ಜಯಗಳಿಸಿ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ದಾಖಲೆ ಮಾಡಿದೆ.
ಈ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸಹ ಭಾರತೀಯ ಮಹಿಳಾ ಹಾಕಿ ತಂಡವನ್ನು ಅಭಿನಂದಿಸಿದ್ದಾರೆ.
ಅಲ್ಲದೆ ರಾಜ್ಯಸಭೆಯಲ್ಲಿಂದು ಪಿ. ವಿ. ಸಿಂಧು ಕಂಚು ಪದಕ ಪಡೆದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಇಂದು ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಎಂ. ವೆಂಕಯ್ಯನಾಯ್ಡು ವಿಷಯ ಪ್ರಸ್ತಾಪಿಸಿ, ಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಎರಡು ಪದಕ ಪಡೆದ ಪ್ರಥಮ ಮಹಿಳಾ ಕ್ರೀಡಾಪಟು ಎಂಬ ದಾಖಲೆಯನ್ನು ಸಿಂಧು ಬರೆದಿದ್ದಾರೆ ಎಂದು ತಿಳಿಸಿದಾಗ, ಸದಸ್ಯರು ಮೇಜು ತಟ್ಟಿ ಅಭಿನಂದನೆ ಸಲ್ಲಿಸಿದರು.
ಇದು ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳಿಂದ ನಿರೀಕ್ಷಿಸಲಾಗುವ ಸತತ ಯಶಸ್ಸಿನ ಸಂಕೇತವಾಗಿದೆ. ಕ್ರೀಡಾಪಟುಗಳ ಕುಟುಂಬದಲ್ಲೇ ಜನಿಸಿದ ಸಿಂಧು ಅವರು, ತಮ್ಮ 12ನೇ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು. ತರಬೇತಿಗಾಗಿ ತಮ್ಮ ತಂದೆಯೊಂದಿಗೆ 120 ಕಿಲೋ ಮೀಟರ್ ಹೋಗುತ್ತಿದ್ದರು ಎಂದ ಸಭಾಪತಿಯವರು, ಅವರು ಕ್ರೀಡಾ ಸಾಧನೆಗಾಗಿ ಮಾಡುತ್ತಿದ್ದ ಕಠಿಣ ಪರಿಶ್ರಮವನ್ನು ತಾವು ಕಣ್ಣಾರೆ ಕಂಡಿರುವುದಾಗಿಯೂ ತಿಳಿಸಿ, ಸಿಂಧು ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.