ನವದೆಹಲಿ : ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಮ್ಮ ಕುಟುಂಬ ಸದಸ್ಯರ ಯೋಗಕ್ಷೇಮದ ಬಗ್ಗೆ ಕಾರ್ಮಿಕರ ಭಯ ಮತ್ತು ಆತಂಕವನ್ನು ಪರಿಹರಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ʻಇಎಸ್ಐಸಿʼ ಮತ್ತು ʻಇಪಿಎಫ್ಒʼ ಯೋಜನೆಗಳ ಮೂಲಕ ಕಾರ್ಮಿಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಘೋಷಿಸಿದೆ. ಉದ್ಯೋಗದಾತರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕಾರ್ಮಿಕರಿಗೆ ಸುಧಾರಿತ ಸಾಮಾಜಿಕ ಭದ್ರತೆಯನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ.
ಪ್ರಸ್ತುತ ʻಇಎಸ್ಐಸಿʼ ಅಡಿಯಲ್ಲಿ ವಿಮಾ ದಾರರಿಗೆ (ಐಪಿ) ಉದ್ಯೋಗದ ವೇಳೆ ಪ್ರಮಾದದಿಂದ ವಿಮಾದಾರರು ಮೃತಪಟ್ಟರೆ ಅಥವಾ ಅಂಗವಿಕಲರಾದರೆ, ಕಾರ್ಮಿಕ ಪಡೆಯುವ ಸರಾಸರಿ ದಿನಗೂಲಿಯ ಶೇ. 90ರಷ್ಟಕ್ಕೆ ಸಮನಾದ ಪಿಂಚಣಿಯು ಕಾರ್ಮಿಕನ ಪತ್ನಿ ಮತ್ತು ವಿಧವೆ ತಾಯಿಗೆ ಜೀವನಪರ್ಯಂತ ಹಾಗೂ ಮಕ್ಕಳಿಗೆ ಅವರಿಗೆ 25 ವರ್ಷ ವಯಸ್ಸಾಗುವವರೆಗೆ ಲಭ್ಯವಾಗುತ್ತದೆ. ಹೆಣ್ಣು ಮಗುವಿಗೆ, ಆಕೆಯ ವಿವಾಹವಾಗುವರೆಗೂ ಈ ಪಿಂಚಣಿ ಪ್ರಯೋಜನ ಲಭ್ಯವಿದೆ.
ʻಇಎಸ್ಐಸಿʼ ಯೋಜನೆಯಡಿ ವಿಮಾದಾರರ (ಐಪಿ) ಕುಟುಂಬಗಳಿಗೆ ನೆರವು ನೀಡುವ ನಿಟ್ಟಿನಲ್ಲಿ, ಕೋವಿಡ್ ಸೋಂಕು ಪತ್ತೆಗೆ ಮುನ್ನ ಮತ್ತು ರೋಗದ ನಂತರ ಸಾವಿಗೆ ಮೊದಲು ʻಇಎಸ್ಐಸಿʼಯ ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸಲಾದ ವಿಮಾದಾರರ ಎಲ್ಲಾ ಅವಲಂಬಿತ ಕುಟುಂಬ ಸದಸ್ಯರೂ ಉದ್ಯೋಗದ ವೇಳೆ ಪ್ರಮಾದದಿಂದ ಸಾಯುವ ವಿಮಾ ವ್ಯಕ್ತಿಗಳ ಅವಲಂಬಿತರು ಪಡೆಯುವ ಅದೇ ಪ್ರಯೋಜನಗಳನ್ನು ಮತ್ತು ಅದೇ ಪ್ರಮಾಣದಲ್ಲಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ನಿರ್ಧರಿಸಲಾಗಿದೆ. ಆದರೆ, ಅಂಥವರು ಈ ಕೆಳಗಿನ ಅರ್ಹತಾ ಷರತ್ತುಗಳಿಗೆ ಒಳಪಟ್ಟಿರುತ್ತಾರೆ:
ಎ) ಸಾವಿಗೆ ಕಾರಣವಾದ ಕೋವಿಡ್ ರೋಗನಿರ್ಣಯಕ್ಕೆ ಕನಿಷ್ಠ ಮೂರು ತಿಂಗಳ ಮೊದಲು ʻಇಎಸ್ಐಸಿʼ ಆನ್ಲೈನ್ ಪೋರ್ಟಲ್ನಲ್ಲಿ ವಿಮಾದಾರರು ನೋಂದಾಯಿಸಿಕೊಂಡಿರಬೇಕು.
ಬಿ) ವಿಮಾದಾರ ವ್ಯಕ್ತಿಯು ವೇತನ ಮತ್ತು ಕೊಡುಗೆಗಳಿಗಾಗಿ ಕನಿಷ್ಠ 78 ದಿನಗಳ ಅವಧಿಗೆ ನೇಮಕಗೊಂಡಿರಬೇಕು ಮತ್ತು ಮರಣಕ್ಕೆ ಕಾರಣವಾದ ಕೋವಿಡ್ ಸೋಂಕಿನ ರೋಗನಿರ್ಣಯಕ್ಕೆ ಮುನ್ನ ಒಂದು ವರ್ಷದ ಅವಧಿಯಲ್ಲಿ ಮೃತ ವಿಮಾದಾರರಿಗೆ ಸಂಬಂಧಿಸಿದಂತೆ ವೇತನ ಪಾವತಿಯಾಗಿರಬೇಕು ಅಥವಾ ವೇತನ ಪಾವತಿಗೆ ಅವರು ಅರ್ಹತೆ ಹೊಂದಿರಬೇಕು.
ಅರ್ಹತಾ ಷರತ್ತುಗಳನ್ನು ಪೂರೈಸುವ ಮತ್ತು ಕೋವಿಡ್ ಕಾಯಿಲೆಯಿಂದ ಸಾವನ್ನಪ್ಪಿದ ವಿಮಾದಾರರ ಅವಲಂಬಿತರು ತಮ್ಮ ಜೀವಿತಾವಧಿಯಲ್ಲಿ ವಿಮಾದಾರ ವ್ಯಕ್ತಿಯ ಮಾಸಿಕ ಸರಾಸರಿ ದಿನಗೂಲಿಯ 90% ಪಾವತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯು 24.03.2020ರಿಂದ ಎರಡು ವರ್ಷಗಳ ಅವಧಿಗೆ ಜಾರಿಗೆ ಬರಲಿದೆ.
ʻಇಪಿಎಫ್ಒʼದ ʻಉದ್ಯೋಗಿಗಳ ಠೇವಣಿ ಜೋಡಿತ ವಿಮಾ ಯೋಜನೆʼ ಅಡಿಯಲ್ಲಿ ಮೃತ ಸದಸ್ಯನ ಎಲ್ಲಾ ಅವಲಂಬಿತ ಕುಟುಂಬ ಸದಸ್ಯರು ʻಇಡಿಎಲ್ಐʼ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಪ್ರಸ್ತುತ ಈ ಯೋಜನೆಯಡಿ ಕಾರ್ಮಿಕನು ಮೃತಪಟ್ಟರೆ ಗ್ರಾಚ್ಯುಯಿಟಿ ಪಾವತಿಗೆ ಕನಿಷ್ಠ ಸೇವೆಯ ಅಗತ್ಯವನ್ನು ಪರಿಗಣಿಸದೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ʻಇಪಿಎಫ್ʼ ಮತ್ತು ʻಎಂಪಿʼ ಕಾಯ್ದೆಯಡಿ ನಿಬಂಧನೆಗಳ ಪ್ರಕಾರ ಕುಟುಂಬ ಪಿಂಚಣಿಯನ್ನು ಪಾವತಿಸಲಾಗುತ್ತದೆ. ಕಾರ್ಮಿಕ ಅನಾರೋಗ್ಯಕ್ಕೆ ಒಳಗಾದರೆ ಮತ್ತು ಕಚೇರಿಗೆ ಹಾಜರಾಗದ ಸಂದರ್ಭದಲ್ಲಿ ವರ್ಷದಲ್ಲಿ 91 ದಿನಗಳವರೆಗೆ ವೇತನದ 70% ಹಣವನ್ನು ಅನಾರೋಗ್ಯದ ಪ್ರಯೋಜನದ ರೂಪದಲ್ಲಿ ಪಾವತಿಸಲಾಗುತ್ತದೆ.
ಸಚಿವಾಲಯವು ಹೊರಡಿಸಿದ ಅಧಿಸೂಚನೆಯ ಮೂಲಕ ಇದಕ್ಕೆ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ:
ಎ) ಮೃತ ಉದ್ಯೋಗಿಯ ಕುಟುಂಬ ಸದಸ್ಯರಿಗೆ ಗರಿಷ್ಠ ಪ್ರಯೋಜನದ ಮೊತ್ತವನ್ನು 6 ಲಕ್ಷ ರೂ.ನಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಬಿ) ಮೃತ ಉದ್ಯೋಗಿಯು ತನ್ನ ಸಾವಿಗೆ ಮುನ್ನ ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ 12 ತಿಂಗಳ ನಿರಂತರ ಅವಧಿಗೆ ಸದಸ್ಯರಾಗಿದ್ದರೂ ಅರ್ಹ ಕುಟುಂಬ ಸದಸ್ಯರಿಗೆ ₹2.5 ಲಕ್ಷ ಕನಿಷ್ಠ ಭರವಸೆಯ ಪ್ರಯೋಜನ ದೊರೆಯಲಿದೆ. ಈ ಮುನ್ನ ಉದ್ಯೋಗಿಯು ಅದೇ ಸಂಸ್ಥೆಯಲ್ಲಿ 12 ತಿಂಗಳ ಅವಧಿಗೆ ನಿರಂತರ ಉದ್ಯೋಗದಲ್ಲಿದ್ದರೆ ಮಾತ್ರ ಈ ಪ್ರಯೋಜನ ದೊರೆಯುತ್ತಿತ್ತು. ಈ ತಿದ್ದುಪಡಿಯಿಂದಾಗಿ ಒಂದೇ ಸಂಸ್ಥೆಯಲ್ಲಿ ನಿರಂತರ ಒಂದು ವರ್ಷ ಕಾರ್ಯ ನಿರ್ವಹಿಸಲಾಗದ ಗುತ್ತಿಗೆ /ಸಾಂದರ್ಭಿಕ ಕಾರ್ಮಿಕರು ಪ್ರಯೋಜನಗಳು ಕಳೆದುಕೊಳ್ಳುವ ಪರಿಸ್ಥಿತಿ ತಪ್ಪಿದೆ.
ಸಿ) ಕನಿಷ್ಠ 2.5 ಲಕ್ಷ ಪರಿಹಾರದ ನಿಬಂಧನೆಯನ್ನು 2020ರ ಫೆಬ್ರವರಿ 15ರಿಂದಲೇ ಪೂರ್ವಾನ್ವಯ ಮಾಡಲಾಗಿದೆ.
ಡಿ) 2021-22ರಿಂದ 2023-24ರವರೆಗೆ ಮುಂಬರುವ 3 ವರ್ಷಗಳಲ್ಲಿ ಅರ್ಹ ಕುಟುಂಬ ಸದಸ್ಯರು ʻಇಡಿಎಲ್ಐʼ ನಿಧಿಯಿಂದ 2,185 ಕೋಟಿ ರೂ.ಗಳ ಹೆಚ್ಚುವರಿ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇ) ಈ ಯೋಜನೆಯಡಿ ಸಾವಿನ ಕಾರಣದಿಂದಾಗಿ ವರ್ಷಕ್ಕೆ ಸುಮಾರು 50,000 ಕುಟುಂಬಗಳು ಕ್ಲೇಮುಗಳ ಸಲ್ಲಿಸಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಕೋವಿಡ್ನಿಂದಾಗಿ ಸಂಭವಿಸಬಹುದಾದ ಸುಮಾರು 10,000 ಕಾರ್ಮಿಕರ ಅಂದಾಜು ಮರಣವನ್ನು ಗಣನೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಹೆಚ್ಚಿದ ಕ್ಲೇಮುಗಳೂ ಸೇರಿವೆ.
ಈ ಕಲ್ಯಾಣ ಕ್ರಮಗಳು ಕೋವಿಡ್-19 ರೋಗದಿಂದ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸುತ್ತವೆ ಮತ್ತು ಸಾಂಕ್ರಾಮಿಕ ರೋಗದ ಈ ಸವಾಲಿನ ಸಮಯದಲ್ಲಿ ಅವರನ್ನು ಆರ್ಥಿಕ ಸಂಕಷ್ಟಗಳಿಂದ ರಕ್ಷಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.