ನವದೆಹಲಿ : ಎಲ್ಲಾ ಅಡೆ ತಡೆಗಳನ್ನು ದಾಟಿ, ಹೊಸ ಪರಿಹಾರಗಳನ್ನು ಕಂಡುಕೊಂಡಿರುವ ಭಾರತೀಯ ರೈಲ್ವೆಯು ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ದೇಶಾದ್ಯಂತ ವಿವಿಧ ರಾಜ್ಯಗಳಿಗೆ ತಲುಪಿಸುವ ಮೂಲಕ ತನ್ನ ಪರಿಹಾರ ಸಾಗಣೆ ಪ್ರಯಾಣವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 18980 ಮೆಟ್ರಿಕ್ ಟನ್ಗಿಂತಲೂ ಹೆಚ್ಚು ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು 1141ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಿಗೆ ತಲುಪಿಸಿದೆ.
ಇಲ್ಲಿಯವರೆಗೆ 284 ಆಕ್ಸಿಜನ್ ಎಕ್ಸ್ಪ್ರೆಸ್ಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಹಾಗೂ ವಿವಿಧ ರಾಜ್ಯಗಳಿಗೆ ಪರಿಹಾರವನ್ನು ತಲುಪಿಸಿವೆ.
ಮೇ 2, 2021ರಂದು ಪೂರೈಕೆ ಮಾಡಲಾಗಿದ್ದ 1142 ಮೆಟ್ರಿಕ್ ಟನ್ ದಾಖಲೆಯನ್ನು ಮೀರಿ, ಆಕ್ಸಿಜನ್ ಎಕ್ಸ್ ಪ್ರೆಸ್ ಒಂದೇ ದಿನದಲ್ಲಿ 1195 ಮೆಟ್ರಿಕ್ ಟನ್ ಆಮ್ಲಜನಕ ಪರಿಹಾರವನ್ನು ಒಂದೇ ದಿನ ತಲುಪಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ದೆಹಲಿಗೆ ದ್ರವರೂಪದ ಆಮ್ಲಜನಕ ಪೂರೈಕೆ ಪ್ರಮಾಣ 5000 ಮೆಟ್ರಿಕ್ ಟನ್ ದಾಟಿದೆ.
ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಆಮ್ಲಜನಕ ಪೂರೈಕೆಯು ತಲಾ 1000 ಮೆಟ್ರಿಕ್ ಟನ್ ದಾಟಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು 33 ದಿನಗಳ ಹಿಂದೆ ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆಟ್ರಿಕ್ ಟನ್ ಲೋಡ್ನೊಂದಿಗೆ ತಮ್ಮ ವಿತರಣೆ ಪ್ರಾರಂಭಿಸಿದವು ಎಂಬುದು ಉಲ್ಲೇಖಾರ್ಹ.
ಭಾರತೀಯ ರೈಲ್ವೆಯು ಕೋರಿಕೆ ಸಲ್ಲಿಸಿದ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ, ಗರಿಷ್ಠ ಪ್ರಮಾಣದ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ಪ್ರಯತ್ನವನ್ನು ಮುಂದುವರಿಸಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ ಈ 15 ರಾಜ್ಯಗಳಿಗೆ ಆಮ್ಲಜನಕ ಪರಿಹಾರವು ತಲುಪಿದೆ.
ಮಹಾರಾಷ್ಟ್ರಕ್ಕೆ 614 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ. ಉತ್ತರ ಪ್ರದೇಶಕ್ಕೆ ಸುಮಾರು 3731 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 656 ಮೆಟ್ರಿಕ್ ಟನ್, ದೆಹಲಿಗೆ 5077 ಮೆಟ್ರಿಕ್ ಟನ್, ಹರಿಯಾಣಕ್ಕೆ 1967 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 98 ಮೆಟ್ರಿಕ್ ಟನ್, ಕರ್ನಾಟಕಕ್ಕೆ 1653 ಮೆಟ್ರಿಕ್ ಟನ್, ಉತ್ತರಾಖಂಡಕ್ಕೆ 320 ಮೆಟ್ರಿಕ್ ಟನ್, ತಮಿಳುನಾಡಿಗೆ 1550 ಮೆಟ್ರಿಕ್ ಟನ್, ಆಂಧ್ರಪ್ರದೇಶಕ್ಕೆ 1190 ಮೆಟ್ರಿಕ್ ಟನ್, ಪಂಜಾಬ್ಗೆ 225 ಮೆಟ್ರಿಕ್ ಟನ್, ಕೇರಳಕ್ಕೆ 380 ಮೆಟ್ರಿಕ್ ಟನ್, ತೆಲಂಗಾಣಕ್ಕೆ1312 ಮೆಟ್ರಿಕ್ ಟನ್, ಜಾರ್ಖಂಡ್ಗೆ 38 ಮೆಟ್ರಿಕ್ ಟನ್ ಮತ್ತು ಅಸ್ಸಾಂಗೆ 160 ಮೆಟ್ರಿಕ್ ಟನ್ ಆಮ್ಲಜನಕವನ್ನು ರೈಲ್ವೆ ಮೂಲಕ ತಲುಪಿಸಲಾಗಿದೆ.
ಭಾರತೀಯ ರೈಲ್ವೆಯು ವಿವಿಧ ಮಾರ್ಗಗಳ ಮೂಲಕ ಆಮ್ಲಜನಕ ಪೂರೈಕೆ ಸ್ಥಳಗಳನ್ನು ಗುರುತಿಸಿದೆ ಮತ್ತು ರಾಜ್ಯಗಳ ಯಾವುದೇ ತುರ್ತು ಅಗತ್ಯಕ್ಕಾಗಿ ತಾನು ಸದಾ ಸನ್ನದ್ಧವಾಗಿರುತ್ತದೆ. ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ಗಳನ್ನು ಒದಗಿಸುತ್ತವೆ.
ದೇಶದ ಉದ್ದಗಲಕ್ಕೂ ಸಂಚರಿಸುವ ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಾಪಾ, ಬರೋಡಾ, ಮುಂದ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ್, ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತುಂಬಿಸಿಕೊಂಡು ನಂತರ ಅದನ್ನು ಸಂಕೀರ್ಣವಾದ ಕಾರ್ಯಾಚರಣೆ ಮಾರ್ಗ ಯೋಜನೆ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ತಲುಪಿಸುತ್ತಿದೆ.
ಆಮ್ಲಜನಕ ಪರಿಹಾರವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆಯು ಆಕ್ಸಿಜನ್ ಎಕ್ಸ್ಪ್ರೆಸ್ ಸರಕು-ಸಾಗಣೆ ರೈಲುಗಳ ಸಂಚಾರದಲ್ಲಿ ಹೊಸ ಪ್ರಮಾಣೀಕರಣಗಳು ಮತ್ತು ವಿನೂತನ ಮಾನದಂಡಗಳನ್ನು ಸೃಷ್ಟಿಸುತ್ತಿದೆ. ಈ ನಿರ್ಣಾಯಕ ಸರಕು ಸಾಗಣೆ ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ ಗಂಟೆಗೆ 55 ಕಿ.ಮೀ.ಗಿಂತಲೂ ಹೆಚ್ಚಾಗಿದೆ. ಹೆಚ್ಚಿನ ಆದ್ಯತೆಯ ʻಗ್ರೀನ್ ಕಾರಿಡಾರ್ʼನಲ್ಲಿ ಅತ್ಯಂತ ತುರ್ತಾಗಿ ಸಂಚರಿಸುತ್ತಿದೆ. ಸಾಧ್ಯವಾದಷ್ಟು ವೇಗವಾಗಿ ಆಮ್ಲಜನಕವು ತಲುಪುವಂತೆ ಕಾಯ್ದುಕೊಳ್ಳಲು ವಿವಿಧ ವಲಯಗಳ ಕಾರ್ಯಾಚರಣೆ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳ ತಡೆರಹಿತ ವೇಗವನ್ನು ಕಾಯ್ದುಕೊಳ್ಳಲು ಟ್ರ್ಯಾಕ್ಗಳನ್ನು ಅವುಗಳಿಗಾಗಿ ಸದಾ ತೆರೆದಿಡಲಾಗುತ್ತದೆ ಮತ್ತು ಹೆಚ್ಚಿನ ಜಾಗರೂಕತೆಯನ್ನು ವಹಿಸಾಗುತ್ತಿದೆ.
ಇತರ ಸರಕು ಸಾಗಣೆ ಕಾರ್ಯಾಚರಣೆಯ ವೇಗದ ಮೇಲೆ ಯಾವುದೇ ಪರಿಣಾಮ ಬೀರದ ರೀತಿಯಲ್ಲಿ ಇದೆಲ್ಲವನ್ನೂ ಮಾಡಲಾಗುತ್ತಿದೆ.
ಹೊಸ ಆಮ್ಲಜನಕ ಎಕ್ಸ್ಪ್ರೆಸ್ಗಳ ಓಡಾಟವು ಅತ್ಯಂತ ಕ್ರಿಯಾತ್ಮಕ ಚಟುವಟಿಕೆಯಾಗಿದ್ದು, ಅಂಕಿ-ಅಂಶಗಳ ನವೀಕರಣ ಸದಾ ಮುಂದುವರಿದಿದೆ. ಭರ್ತಿ ಮಾಡಲಾದ ಮತ್ತಷ್ಟು ಆಕ್ಸಿಜನ್ ಎಕ್ಸ್ಪ್ರೆಸ್ಗಳು ರಾತ್ರಿಯ ಬಳಿಕ ತಮ್ಮ ಪ್ರಯಾಣವನ್ನು ಆರಂಭಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.