ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ನ ಹೊಸ ಭೌಪುರ್-ನ್ಯೂ ಖುರ್ಜಾ ವಿಭಾಗವನ್ನು ಇಂದು ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದ ವೇಳೆ ಪ್ರಧಾನಿ ಅವರು, ಪ್ರಯಾಗ್ರಾಜ್ನಲ್ಲಿನ ಇಡಿಎಫ್ ಸಿ ಕಾರ್ಯಾಚರಣೆ ನಿಯಂತ್ರಣ ಕೇಂದ್ರ (ಒಸಿಸಿ)ವನ್ನೂ ಸಹ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಈ ಸರಕು ಕಾರಿಡಾರ್ಗಳು ಭಾರತವನ್ನು ಆತ್ಮನಿರ್ಭರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ವ್ಯಾಪಾರಿಗಳು, ರೈತರು, ಗ್ರಾಹಕರು ಎಲ್ಲರೂ ಇದರ ಪ್ರಯೋಜನ ಪಡೆಯಲಿದ್ದಾರೆ” ಎಂದು ಮೋದಿ ಹೇಳಿದ್ದಾರೆ.
” ಸ್ವಾತಂತ್ರ್ಯದ ನಂತರ ಈಗ ನಾವು ಅತೀದೊಡ್ಡ ಮತ್ತು ಆಧುನಿಕ ರೈಲ್ವೆ ಮೂಲಸೌಕರ್ಯ ಯೋಜನೆಗಳು ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಖುರ್ಜಾ ಮತ್ತು ಭೌಪುರ್ ಸರಕು ಕಾರಿಡಾರ್ ರಸ್ತೆ ಇಂದು ಆರಂಭವಾಗುವ ಮೂಲಕ ಹೊಸ ಮತ್ತು ಸ್ವಾವಲಂಬಿ ಭಾರತದ ಪ್ರತಿಧ್ವನಿ ಕೇಳುತ್ತಿದೆ” ಎಂದಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಕಾರ್ಯಾಚರಣಾ ನಿಯಂತ್ರಣ ಕೇಂದ್ರ ಹೊಸ ಭಾರತದ ಹೊಸ ಶಕ್ತಿಯನ್ನು ತೋರಿಸುತ್ತದೆ ಎಂದಿದ್ದಾರೆ.
351 ಕಿಲೋಮೀಟರ್ ಉದ್ದದ ಇಡಿಎಫ್ ಸಿಯ ನ್ಯೂ ಭೌಪುರ್- ನ್ಯೂ ಖುರ್ಜಾ ಮಾರ್ಗ ಉತ್ತರ ಪ್ರದೇಶದಲ್ಲಿದೆ ಮತ್ತು ಅದನ್ನು 5,750 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಲಯದಿಂದಾಗಿ ಸ್ಥಳೀಯ ಉದ್ದಿಮೆಗಳಿಗೆ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ, ಅವುಗಳೆಂದರೆ ಅಲ್ಯುಮಿನಿಯಂ ಉದ್ದಿಮೆ (ಕಾನ್ಪುರ್ ದೆಹಾತ್ ಜಿಲ್ಲೆಯ ಫುಖ್ರಾಯನ್ ಪ್ರಾಂತ್ಯ), ಹೈನುಗಾರಿಕೆ ವಲಯ (ಔರಿಯಾ ಜಿಲ್ಲೆ), ಜವಳಿ ಉತ್ಪನ್ನ/ಬ್ಲಾಕ್ ಪ್ರಿಂಟಿಂಗ್ (ಇತ್ವಾ ಜಿಲ್ಲೆ), ಗಾಜಿನ ವಸ್ತುಗಳ ಉದ್ದಿಮೆ(ಫಿರೋಜಾಬಾದ್ ಜಿಲ್ಲೆ), ಮಡಿಕೆ ಉದ್ಯಮ( ಬುಲಂದ್ ಶೆಹರ್ ನ ಖುರ್ಜಾ ಪ್ರಾಂತ್ಯ), ಇಂಗು ಉತ್ಪಾದನೆ (ಹತ್ರಾಸ್ ಜಿಲ್ಲೆ) ಮತ್ತು ಬೀಗ ಮತ್ತು ಹಾರ್ಡ್ ವೇರ್ (ಆಲಿಘಡ್ ಜಿಲ್ಲೆ). ಹೊಸ ಮಾರ್ಗದಿಂದ ಹಾಲಿ ಇರುವ ಕಾನ್ಫುರ-ದೆಹಲಿ ಮುಖ್ಯ ಮಾರ್ಗದಲ್ಲಿನ ವಾಹನ ದಟ್ಟಣೆ ತಗ್ಗಲಿದೆ ಮತ್ತು ಭಾರತೀಯ ರೈಲ್ವೆ ವೇಗದ ರೈಲುಗಳನ್ನು ಓಡಿಸಲು ಸಾಧ್ಯವಾಗಲಿದೆ.
ಪ್ರಯಾಗ್ರಾಜ್ನಲ್ಲಿನ ಆತ್ಯಾಧುನಿಕ ತಂತ್ರಜ್ಞಾನದ ಈ ಕಾರ್ಯಾಚರಣೆ ನಿಯಂತ್ರಣ ಕೇಂದ್ರ (ಒಸಿಸಿ), ಇಡೀ ಇಡಿಎಫ್ ಸಿ ಮಾರ್ಗಕ್ಕೆ ನಿಯಂತ್ರಣ ಕೋಣೆಯಾಗಿ ಕಾರ್ಯನಿರ್ವಹಿಸಲಿದೆ. ಒಸಿಸಿ ಜಾಗತಿಕವಾಗಿ ಅತಿ ದೊಡ್ಡ ಕಟ್ಟಡವನ್ನು ಹೊಂದಿದ ಸಂಸ್ಥೆಯಾಗಿದ್ದು, ಆಧುನಿಕ ವಿನ್ಯಾಸ, ದಕ್ಷತೆ ಮತ್ತು ಅತ್ಯುತ್ತಮ ಧ್ವನಿಜ್ಞಾನದ ವ್ಯವಸ್ಥೆ ಹೊಂದಿದೆ. ಈ ಕಟ್ಟಡ ಪರಿಸರ ಸ್ನೇಹಿಯಾಗಿದ್ದು, ಈ ಹಸಿರು ಕಟ್ಟಡಕ್ಕೆ ಗ್ರಿಹಾ-4 ರೇಟಿಂಗ್ ಇದೆ ಮತ್ತು ಅದನ್ನು ‘ಸುಗಮ್ಯ ಭಾರತ್ ಅಭಿಯಾನ’ದ ಮಾನದಂಡಗಳಂತೆ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.