ಆರೋಗ್ಯಪೂರ್ಣ ಜೀವನಕ್ಕೆ ಶುಚಿತ್ವ ಎಂಬುದು ಪ್ರಧಾನ. ನೈರ್ಮಲ್ಯದ ಬಗ್ಗೆ ಅರಿವಿರದೇ ಹೋದರೆ, ಸ್ವಚ್ಛತೆಗೆ ಆದ್ಯತೆ ನೀಡದೇ ಹೋದರೆ ಅದು ಪರಿಸರದ ಮೇಲೆ ಮತ್ತು ವೈಯಕ್ತಿಕ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕ, ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಚ್ಛತೆ, ನೈರ್ಮಲ್ಯ ಮೊದಲಾದ ಅಂಶಗಳಿಗೆ ಪೂರಕವಾಗುವಂತೆ ಶೌಚಾಲಯಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಬಯಲು ಶೌಚ ಮುಕ್ತ ಭಾರತವಾದಲ್ಲಿ ದೇಶ ಸ್ವಚ್ಛತೆಯ ಜೊತೆಗೆ ಸ್ವಸ್ಥವಾಗುವುದು ಸಾಧ್ಯವಾಗುತ್ತದೆ. ಇಂದು ವಿಶ್ವ ಶೌಚಾಲಯ ದಿನ. ಈ ಸಂದರ್ಭದಲ್ಲಿ ಪ್ರತಿಯೋರ್ವರೂ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವಂತಾಗಲಿ ಎಂಬ ಆಶಯದ ಜೊತೆಗೆ, ಈ ಲೇಖನ.
ಬಯಲು ಶೌಚದಿಂದಾಗುವ ಹಾನಿಯ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಕಲ್ಪನೆಯ ಬಳಿಕ ಆ ವರೆಗೂ ಶೌಚಾಲಯದ ಮುಖವೇ ನೋಡದ ಹಲವು ಗ್ರಾಮ, ಕುಗ್ರಾಮಗಳಲ್ಲಿ ಶೌಚಾಲಯಗಳು ತಲೆ ಎತ್ತಿರುವುದು ಸಂತೋಷದ ವಿಚಾರ. ಆ ಮೂಲಕ ಪರಿಸರದ ಜೊತೆಗೆ ನಮ್ಮ ನಮ್ಮ ಬದುಕನ್ನು ಕಾಪಾಡಿಕೊಳ್ಳುವಷ್ಟರ ಮಟ್ಟಿಗೆ ದೇಶದ ಹೆಚ್ಚಿನ ಜನರು ಬದಲಾವಣೆಗೆ ತೆರೆದುಕೊಂಡಿರುವುದು ಸ್ವಾಗತಾರ್ಹ. ಶೌಚಾಲಯ ನಿರ್ಮಾಣ, ಬಳಕೆಯ ವಿಚಾರಕ್ಕೆ ಬಂದಾಗ ಕರ್ನಾಟಕದ ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿ ಗ್ರಾಮದ ಹಾಲೇನಹಳ್ಳಿಯ ಹುಡುಗಿ ಲಾವಣ್ಯ ನೆನಪಾಗುತ್ತಾರೆ. ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಅವರು ಅನುಸರಿಸಿದ ದಿಟ್ಟ ಹೆಜ್ಜೆಗಳು ದೇಶದ ಪ್ರತಿಯೊಬ್ಬರಿಗೂ ಮಾದರಿ ಎನ್ನಬಹುದು.
ಲಾವಣ್ಯ ತನ್ನೂರಿನಲ್ಲಿ ನಡೆದ ಸ್ವಚ್ಛ ಭಾರತ್ ಆಂದೋಲನದಲ್ಲಿ ಭಾಗವಹಿಸಿದಾಗ, ಆಕೆಗೆ ಸ್ವಚ್ಛತೆ, ಶೌಚಾಲಯಗಳ ನಿರ್ಮಾಣದ ಅಗತ್ಯತೆಯ ಅರಿವಿನ ಬಗ್ಗೆ ಮನವರಿಕೆಯಾಗುತ್ತದೆ. ಆ ಆಂದೋಲನದಲ್ಲಿ ಬಯಲು ಶೌಚದ ಅಡ್ಡ ಪರಿಣಾಮಗಳು, ಶೌಚಾಲಯ ನಿರ್ಮಾಣ ಮಾಡುವ ಮತ್ತು ಅದನ್ನು ಬಳಕೆ ಮಾಡುವ ಮೂಲಕ ಹೇಗೆ ಪರಿಸರ, ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸವನ್ನು ಆಯೋಜಕರು ಮಾಡಿರುತ್ತಾರೆ. ಈ ಜಾಗೃತಿ ಕಾರ್ಯಕ್ರಮ ಲಾವಣ್ಯ ಅವರ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ತಮ್ಮ ಮನೆಯಲ್ಲಿಯೂ ಶೌಚಾಲಯ ಇರಲಿಲ್ಲ. ಕೂಡಲೇ ಶೌಚಾಲಯ ನಿರ್ಮಾಣ ಮಾಡಲು ಹೆತ್ತವರಿಗೆ ತಿಳಿಸುತ್ತಾರೆ. ಆದರೆ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಅವರ ತಂದೆಗೆ ಶೌಚಾಲಯ ನಿರ್ಮಾಣ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ ಲಾವಣ್ಯ ಹಿಡಿದ ಹಠವನ್ನು ಸಾಧಿಸದೇ ಹಿಂದೆ ಸರಿಯುವ ಮಾತೇ ಇಲ್ಲ ಎಂಬಂತೆ, ಉಪವಾಸ ಸತ್ಯಾಗ್ರಹ ಆರಂಭ ಮಾಡುತ್ತಾರೆ. ತಮ್ಮೂರಿನ ಗ್ರಾಮ ಪಂಚಾಯತ್ ಎದುರೇ ಈ ದಿಟ್ಟ ಹುಡುಗಿಯ ಸತ್ಯಾಗ್ರಹ ಆರಂಭವಾಗುತ್ತದೆ. 48 ಗಂಟೆಗಳ ಕಾಲ ಅನ್ನ ,ನೀರು ಸೇವಿಸದೆ ಶೌಚಾಲಯ ಕಟ್ಟಿಸಲೇ ಬೇಕು ಎಂದು ಹಠ ಹಿಡಿದು ಕೂರುತ್ತಾರೆ.
ಇವರ ಸತ್ಯಾಗ್ರಹದ ಪರಿಣಾಮವಾಗಿ ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಲಾವಣ್ಯ ಅವರ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಸಹಾಯ ನೀಡುತ್ತಾರೆ. ಫಲವಾಗಿ ಲಾವಣ್ಯ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗುತ್ತದೆ. ಜೊತೆಗೆ ಅವರ ಮನೆಯವರು ಶೌಚಕ್ಕಾಗಿ ಬಯಲು, ಗುಡ್ಡಗಳಿಗೆ ತೆರಳುವುದು ತಪ್ಪುತ್ತದೆ. ಈ ಘಟನೆ ನಡೆದ ಬಳಿಕ ಆ ಹಳ್ಳಿಯ ಹೆಚ್ಚಿನ ಜನರಲ್ಲಿ ಒಂದು ರೀತಿಯ ಪರಿವರ್ತನೆಯ ಗಾಳಿ ಬೀಸಲಾರಂಭಿಸುತ್ತದೆ. ಪರಿಣಾಮ ಹಳ್ಳಿಯ ಹೆಚ್ಚಿನ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗುತ್ತದೆ. ಇದಕ್ಕೆ ಪ್ರೇರಕ ಶಕ್ತಿಯಾದವರು ಲಾವಣ್ಯ.
ಅಲ್ಲಿಂದ ಮುಂದೆ ನಡೆದದ್ದು ‘ಶೌಚಾಲಯ ಕ್ರಾಂತಿ’. ಲಾವಣ್ಯ ಅವರ ಹಳ್ಳಿಯ ಜನರು ಬಯಲು ಶೌಚವನ್ನು ಬಿಟ್ಟು ಮನೆಯಲ್ಲಿ ಶೌಚಾಲಯ ನಿರ್ಮಿಸಿ ಬದಲಾವಣೆಗೆ ತೆರೆದುಕೊಂಡ ವಿಚಾರ ಅಕ್ಕ ಪಕ್ಕದ ಹಳ್ಳಿ, ರಾಜ್ಯ, ಇಡೀ ದೇಶದಲ್ಲೇ ಸುದ್ದಿಯಾಗುತ್ತದೆ. ಅವರ ಸಾಧನೆಯ ಪರಿಣಾಮ ಎಂಬಂತೆ ಅವರ ಸುತ್ತಮುತ್ತಲಿನ ಹಳ್ಳಿಯ ಜನರೂ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಬಯಲು ಶೌಚ ಮುಕ್ತ ಗ್ರಾಮಗಳಾಗಿ ಬದಲಾಗಿವೆ ಎಂಬುದು ಲಾವಣ್ಯ ಅವರ ಈ ಸಾಹಸಕ್ಕೆ ಸಿಕ್ಕ ದೊಡ್ಡ ಪ್ರಮಾಣದ ಗೆಲುವು ಎಂದರೂ ತಪ್ಪಾಗಲಾರದೇನೋ.
ಇವರು ಸಮಾಜದಲ್ಲಿ ತಂದ ಮಹತ್ತರ ಬದಲಾವಣೆಯ ಕಾರಣದಿಂದ 2017 ರ ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಂಕಲ್ಪ ಸಿದ್ಧಿ ಕಾರ್ಯಕ್ರಮದಲ್ಲಿ ಕರ್ನಾಟಕದ ಪರ ಸ್ವಚ್ಛ ಭಾರತ್ ಯೋಜನೆಯ ಯುನಿಸೆಫ್ ರಾಯಭಾರಿಯಾಗಿಯೂ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೂ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಕೀರ್ತಿ ಲಾವಣ್ಯ ಅವರದ್ದು.
ಬಯಲು ಶೌಚದಿಂದಾಗುವ ಅನಾಹುತಗಳು, ಆರೋಗ್ಯ ಮತ್ತು ಪರಿಸರದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ಅರಿತ ಲಾವಣ್ಯ ತಮ್ಮ ಕುಟುಂಬದ ಜೊತೆಗೆ ಇನ್ನಿತರ ಮನಗಳನ್ನು ಬದಲಾಯಿಸಿ, ಆ ಮನೆಗಳಲ್ಲಿಯೂ ಶೌಚಾಲಯ ನಿರ್ಮಾಣ ಮಾಡುವಂತೆ ಮಾಡಿ ‘ಶೌಚಾಲಯ ಕ್ರಾಂತಿ’ ಮಾಡಿರುವುದು ಚಿಕ್ಕ ವಿಚಾರವಲ್ಲ. ಆದರೆ ಸಾಧಿಸುವ ಮನಸ್ಸಿದ್ದರೆ ವಯಸ್ಸು ದೊಡ್ಡ ವಿಚಾರವೇ ಅಲ್ಲ. ಇಡುವ ಹೆಜ್ಜೆಯಲ್ಲೊಂದು ನ್ಯಾಯವಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿ ನಿಂತಿದ್ದಾರೆ ಲಾವಣ್ಯ.
ಲಾವಣ್ಯ ಅವರ ಈ ಸಾಧನೆ ದೇಶದಲ್ಲಿ ಇನ್ನಷ್ಟು ಸಕಾರಾತ್ಮಕ ಬದಲಾವಣೆಗೆ ತೆರೆದುಕೊಳ್ಳಲಿ. ಇಂದಿಗೂ ದೇಶದ ಹಲವು ಕುಗ್ರಾಮಗಳಲ್ಲಿ ಶೌಚಾಲಯ ವ್ಯವಸ್ಥೆಯ ಅಭಾವದಿಂದ ಬಯಲು ಶೌಚವನ್ನೇ ಅವಲಂಬಿಸಿದ ಜನರಿದ್ದಾರೆ. ಅಂತಹ ಕುಗ್ರಾಮಗಳ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಲಿ. ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಲಿ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಲಾವಣ್ಯ ಅವರಂತಹ ಕ್ರಾಂತಿಕಾರಿಗಳ ಉದಯವಾಗುವಂತಾಗಲಿ. ನಮ್ಮ ಪರಿಸರದ ರಕ್ಷಣೆ, ಆ ಮೂಲಕ ನಮ್ಮ ಜೀವನ, ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಲಿ. WORLD TOILET DAY ಯ ದಿನವಾದ ಇಂದು ನಮ್ಮೆಲ್ಲರ ಗಮನ, ಶಪಥ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣದತ್ತ ಇರಲಿ ಎಂಬ ಸದಾಶಯದ ಜೊತೆಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.