ದಿಸ್ಪುರ: ಕೊರೋನಾ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲಿಯೂ ಸೋಂಕಿನ ಪ್ರಭಾವ ಹೆಚ್ಚಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹಬ್ಬ ಹರಿದಿನಗಳೂ ಕಳೆಗುಂದಿವೆ. ಕೇವಲ ಮನೆಗಷ್ಟೇ ಸೀಮಿತ ಎಂಬಂತಾಗಿದೆ. ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಕೊರೋನಾ ಸಂಕಷ್ಟ ಪರಿಹಾರ ಮಾಡುವಂತೆ ದೇವರಲ್ಲಿ ಭಕ್ತರು ಕೋರಿಕೆ ಸಲ್ಲಿಸುತ್ತಿದ್ದಾರೆ.
ಈ ನವರಾತ್ರಿ ಹಬ್ಬಕ್ಕೂ ಕೊರೋನಾ ಕರಿನೆರಳು ಹಬ್ಬಿದೆ. ಈ ಸಂದರ್ಭಕ್ಕೆ ಅನುಗುಣವಾಗಿ ಅಸ್ಸಾಂ ರಾಜ್ಯದ ಧುಬ್ರಿ ಜಿಲ್ಲೆಯ ಕಲಾವಿದರೊಬ್ಬರ ಕೈಚಳಕದಲ್ಲಿ ಮಾತ್ರೆಗಳಿಂದ ಮಾತೆ ದುರ್ಗೆಯ ಮೂರ್ತಿ ನಿರ್ಮಾಣವಾಗಿದೆ. ಸುಮಾರು 40,000 ಮಾತ್ರೆಗಳ ಶೀಟ್ ಬಳಸಿ, 5 ತಿಂಗಳ ಕಠಿಣ ಪರಿಶ್ರಮದ ಮೂಲಕ ಈ ಕಲಾಕೃತಿಯನ್ನು ರಚನೆ ಮಾಡಲಾಗಿದೆ.
ಧುಬ್ರಿ ಜಿಲ್ಲಾಡಳಿತದಲ್ಲಿ ಕಾರ್ಯ ನಿರ್ವಹಿಸುವ ಸಂಜೀವ್ ಬಸಕ್ ಎಂಬವರೇ ಈ ಕಲಾಕೃತಿಯ ಕರ್ತೃ. ಇವರು ಅವಧಿ ಮೀರಿದ ಮಾತ್ರೆಗಳ ಶೀಟ್, ಚುಚ್ಚುಮದ್ದುಗಳ ಸಿರೇಂಜ್ ಮೊದಲಾದವುಗಳನ್ನು ಬಳಸಿಕೊಂಡು ಈ ದೊಡ್ಡ ಗಾತ್ರದ ಕಲಾಕೃತಿ ರಚಿಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಸಂದರ್ಭದಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಜೀವ್ ಅವರು ನಿರ್ಮಿಸಿರುವ ಈ ಮೂರ್ತಿ ಜನಜಾಗೃತಿಯನ್ನು ಮೂಡಿಸುತ್ತಿದೆ. ಜೊತೆಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಪಡೆಯುತ್ತಿರುವ ದೇವಿ ದುರ್ಗೆ ಜಗತ್ತಿಗಂಟಿರುವ ಕೊರೋನಾ ಮಹಾಮಾರಿಯನ್ನು ಸಂಹರಿಸಲಿ ಎಂಬ ಸಂದೇಶವನ್ನು ಈ ಕಲಾಕೃತಿ ಸಾರುತ್ತಿದೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.