ಕುಂಬ್ಳೆ: ಕಾಸರಗೋಡು ಜಿಲ್ಲೆಯ ಕುಂಬ್ಳೆಯ ಹತ್ತಿರದಲ್ಲಿರುವ ಸರೋವರ ದೇಗುಲ ಎಂದೇ ಪ್ರಖ್ಯಾತಿ ಪಡೆದಿರುವ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿನ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಮಂಗಳವಾರ ನೀರಿನಿಂದ ದೇವಾಲಯದ ಆವರಣಕ್ಕೆ ಬಂದು ಆಶ್ಚರ್ಯ ಸೃಷ್ಟಿಸಿದೆ. ದೇವಾಲಯದ ಸುತ್ತ ಆವರಿಸಿರುವ ನೀರಿನಲ್ಲಿ ವಾಸಿಸುವ ಬಬಿಯಾ ಇದೇ ಮೊದಲ ಬಾರಿಗೆ ದೇಗುಲದ ಪ್ರಾಂಗಣಕ್ಕೆ ಬಂದಿರುವುದಾಗಿಯೂ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ನೀರಿನಿಂದ ದೇವಾಲಯದ ಆವರಣಕ್ಕೆ ಬಂದ ಮೊಸಳೆ ಕೆಲ ಹೊತ್ತು ಅಲ್ಲೇ ಕಳೆದಿದೆ. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಚಂದ್ರಪ್ರಕಾಶ ನಂಬೀಸನ್ ಅವರು ಬಬಿಯಾ ಬಳಿ ಮತ್ತೆ ನೀರಿಗೆ ಮರಳುವಂತೆ ಭಿನ್ನವಿಸಿದ ಬಳಿಕ ಮೊಸಳೆ ಮತ್ತೆ ತನ್ನ ಸ್ಥಾನಕ್ಕೆ ತೆರಳಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಇನ್ನು ಈ ಮೊಸಳೆ ಸುಮಾರು 70 ವರ್ಷಗಳಿಂದಲೂ ಈ ದೇವಾಲಯದ ಸುತ್ತ ಆವರಿಸಿರುವ ಕೊಳದಲ್ಲಿ ವಾಸವಾಗಿದೆ ಎಂಬ ನಂಬಿಕೆ ಜನಮಾನಸದಲ್ಲಿದೆ. ಈ ಮೊಸಳೆ ದೇವಾಲಯದ ಕೊಳಕ್ಕೆ ಹೇಗೆ ಬಂತು, ಇದಕ್ಕೆ ಬಬಿಯಾ ಎಂದು ನಾಮಕರಣ ಮಾಡಿದವರಾರು ಎಂಬುದು ಯಾರಿಗೂ ತಿಳಿದಿಲ್ಲ. ಅಲ್ಲದೆ ಈ ಮೊಸಳೆ ಸಂಪೂರ್ಣ ಸಸ್ಯಾಹಾರಿಯಾಗಿದ್ದು ದೇವಾಲಯದಿಂದ ನೀಡಿದ ಆಹಾರವನ್ನು ಮಾತ್ರ ಸೇವಿಸುತ್ತದೆ. ದಿನಕ್ಕೆ ಎರಡು ಬಾರಿ ದೇಗುಲದ ಅರ್ಚಕರು ಇದಕ್ಕೆ ಆಹಾರ ನೀಡುತ್ತಾರೆ. ಹಾಗೆಯೇ ಆಹಾರ ನೀಡಲು ಅರ್ಚಕರು ಕರೆದಾಕ್ಷಣ ಬಂದು ಆಹಾರ ಸೇವಿಸಿ ಮತ್ತೆ ಹಿಂದಿರುಗುವುದು ಬಹಳ ಹಿಂದಿನಿಂದಲೂ ವಾಡಿಕೆಯಂತೆ ಇಲ್ಲಿ ನಡೆದುಕೊಂಡು ಬಂದಿದೆ. ಈ ವರೆಗೆ ಬಬಿಯಾ ಯಾರ ಮೇಲೆಯೂ ದಾಳಿ ನಡೆಸಿಲ್ಲವಾಗಿದ್ದು, ಸಾತ್ವಿಕ ಮೊಸಳೆ ಎಂದೇ ಪ್ರಸಿದ್ಧಿಯಾಗಿದೆ.
ಇನ್ನು ಈ ದೇವಾಲಯದ ಬಗ್ಗೆ ಹೇಳುವುದಾದರೆ ಇದು ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇಗುಲದ ಮೂಲಸ್ಥಾನವಾಗಿದೆ ಎಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಭಕ್ತರು ಈ ಕೊಳಕ್ಕೂ ಪೂಜೆ ಸಲ್ಲಿಸುವ ಪದ್ಧತಿ ಇಂದಿಗೂ ಇದೆ. ಬಬಿಯಾ ಬಗ್ಗೆ ಹೇಳುವುದಾದರೆ ಈ ಮೊಸಳೆ ಪದ್ಮನಾಭ ಸ್ವಾಮಿಗೆ ಸಂದೇಶಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದೆ ಎಂಬ ನಂಬಿಕೆಯೂ ಭಕ್ತ ಮಾನಸದಲ್ಲಿದೆ. ಈ ಮೊಸಳೆ ದೇವಾಲಯದ ಪ್ರಮುಖ ಆಕರ್ಷಣೆಯೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.