ಬೆಂಗಳೂರು: ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕಸ್ಮಿಕವಾಗಿ ಮೃತಪಟ್ಟಲ್ಲಿ ಅವರ ಕುಟುಂಬಗಳಿಗೆ 20 ಲಕ್ಷ ರೂ. ಮೊತ್ತದ ವಿಶೇಷ ಗುಂಪು ವಿಮೆಯನ್ನು ವಿಮಾ ಸಂಸ್ಥೆಯಿಂದ ಮಂಜೂರು ಮಾಡಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಅಧಿಕಾರಿಗಳು, ಸಿಬ್ಬಂದಿ ಮಾಹಿತಿಯನ್ನು ಸೂಚಿತ ಸಮಯದೊಳಗಾಗಿ ಘಟಕದ ಅಧಿಕಾರಿ ವಿಮಾ ಸಂಸ್ಥೆಗೆ ನೀಡಬೇಕು. ಇಲ್ಲವಾದರೆ ಅದರ ಸಂಪೂರ್ಣ ಹೊಣೆಯನ್ನು ಘಟಕಾಧಿಕಾರಿಯೇ ಹೊರಬೇಕಾಗುತ್ತದೆ ಎಂದು ಸೂದ್ ಎಚ್ಚರಿಕೆ ನೀಡಿದ್ದಾರೆ.
ವಿಮಾ ಪಾವತಿಗೆ ಸಂಬಂಧಿಸಿದಂತೆ ಯುನೈಟೆಡ್ ಇಂಡಿಯಾ ವಿಮಾ ಸಂಸ್ಥೆಯನ್ನು ಮುಂದುವರಿಸಲಾಗಿದೆ. ಸ್ವಾಭಾವಿಕ ಕಾಯಿಲೆಗಳಿಂದ, ಹೃದಯಾಘಾತ, ಆತ್ಮಹತ್ಯೆಗಳಂತಹ ಸಂದರ್ಭದಲ್ಲಿ ಈ ವಿಮೆ ದೊರೆಯುವುದಿಲ್ಲ. ಆಕಸ್ಮಿಕವಾಗಿ ಮರಣ ಹೊಂದಿದವರ ಮಾಹಿತಿಯನ್ನು 7 ದಿನಗಳೊಳಗಾಗಿ ವಿಮಾ ಕಂಪೆನಿಗೆ ನೀಡುವ ಮೂಲಕ ಇದನ್ನು ಪಡೆಯಬಹುದು ಎಂದೂ ಡಿಜಿಪಿ ಮಾಹಿತಿ ನೀಡಿದ್ದಾರೆ.
ಈ ವಿಮೆ ಪಡೆಯಲು ಸೇವಾ ವಿವರದ ದೃಢೀಕರಣ ಪತ್ರ, ವಿಮೆ ಪಡೆಯುವವರ ನಾಮ ನಿರ್ದೇಶಿತರ ಹೆಸರು, ಪಿಂಚಣಿ ಮಂಜೂರಾತಿ ಪ್ರತಿ, ಎನ್ಸಿಎಫ್ ಮೊತ್ತದ ಆದೇಶ ಪ್ರತಿ, ಮರಣೋತ್ತರ ವರದಿಯ ಪ್ರತಿ, ಕುಟುಂಬದ ಜೀವಿತ ಸದಸ್ಯರ ವಿವರದ ದೃಢೀಕರಣ, ಕರ್ತವ್ಯ ನಿರ್ವಹಿಸಿದ ಠಾಣೆಯ ಠಾಣಾಧಿಕಾರಿಯ ದೃಢೀಕರಣ ಪತ್ರ, ಕ್ಲೈಮ್ದಾರರ ಚುನಾವಣಾ ಗುರುತಿನ ಚೀಟಿ, ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ದಾಖಲೆ, ಅಫಿಡವಿಟ್ ನೋಟರಿ ಮೊದಲಾದವುಗಳನ್ನು ಸಲ್ಲಿಸುವುದು ಕಡ್ಡಾಯ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.