ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಮಹತ್ವದ ಮನವಿಯನ್ನು ಮಾಡಿದ್ದಾರೆ. ಲಾಕ್ಡೌನ್ ಹೋಗಿದೆ, ಅದರೆ ವೈರಸ್ ಹೋಗಿಲ್ಲ, ಹೀಗಾಗಿ ಹಬ್ಬಗಳ ಸಂದರ್ಭ ಜಾಗರೂಕರಾಗಿರಿ, ನೀತಿ ನಿಯಮಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಅನೇಕರು ತಮ್ಮ ಜವಾಬ್ದಾರಿ ನಿರ್ವಹಿಸಲು ನಿತ್ಯ ಮನೆಯಿಂದ ಹೊರ ಹೋಗುತ್ತಿದ್ದಾರೆ. ಹಬ್ಬಗಳಿಗೆ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲೂ ಉಲ್ಲಾಸ ನಿಧಾನಕ್ಕೆ ವಾಪಸ್ ಆಗುತ್ತಿದೆ. ಲಾಕ್ಡೌನ್ ಹೋಗಿರಬಹುದು ಆದರೆ ವೈರಸ್ ಹೋಗಿಲ್ಲ. ಕಳೆದ ಏಳು ಎಂಟು ತಿಂಗಳಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನದಿಂದಾಗಿ ನಾವು ಸುಧಾರಿತ ಸ್ಥಿತಿಯಲ್ಲಿದ್ದೇವೆ. ಅದರಿಂದ ನಾವು ಮತ್ತೆ ಹಿಂದೆ ಹೋಗಬಾರದು. ಮತ್ತಷ್ಟು ಸುಧಾರಣೆ ಮಾಡಬೇಕು. ಇಂದು ದೇಶದಲ್ಲಿ ರಿಕವರಿ ರೇಟ್ ಒಳ್ಳೆದಿದೆ. ಮರಣ ದರ ಕಮ್ಮಿ ಇದೆ. ಅಮೆರಿಕ ಮತ್ತು ಬ್ರೆಜಿಲ್ ಗಿಂತ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದಿದ್ದಾರೆ.
ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 83 ಮರಣ ಸಂಭವಿಸುತ್ತಿದೆ. ಇದು ಅಮೆರಿಕ ಮತ್ತು ಬ್ರೆಜಿಲ್ ಗಿಂತ ತುಂಬಾ ಕಮ್ಮಿ. ಭಾರತ ಸಾಕಷ್ಟು ನಾಗರಿಕರ ಜೀವನ ಉಳಿಸುವಲ್ಲಿ ಸಫಲವಾಗಿದೆ. ಇಂದು ನಮ್ಮ ದೇಶದಲ್ಲಿ 2000 ಕೊರೋನಾ ಲ್ಯಾಬ್ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಪರೀಕ್ಷೆಗಳ ಸಂಖ್ಯೆ ಶೀಘ್ರವೇ 10 ಕೋಟಿ ದಾಟಲಿದೆ. ಮಹಾಮಾರಿ ವಿರುದ್ಧ ಹೋರಾಟದಲ್ಲಿ ಹೆಚ್ಚುತ್ತಿರುವ ಪರೀಕ್ಷೆ ನಮ್ಮ ಶಕ್ತಿಯಾಗಿದೆ. ಸೇವೆಯೇ ಪರಮಧರ್ಮ ಎಂದು ಮುನ್ನಡೆಯುತ್ತಿರುವ ವೈದ್ಯಕೀಯ ಸಿಬ್ಬಂದಿ, ಕೊರೋನಾ ಯೋಧರು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಪ್ರಯತ್ನಗಳ ನಡುವೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಈ ಸಮಯ ನಾವು ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಕೊರೋನಾ ಹೋಗಿದೆ ಅಥವಾ ಅದರಿಂದ ಯಾವುದೇ ಅಪಾಯ ಇಲ್ಲ ಎಂದು ತಿಳಿದುಕೊಳ್ಳಬಾರದು ಎಂದಿದ್ದಾರೆ.
ಮಾಸ್ಕ್ ಇಲ್ಲದೆ ಹೊರಗೆ ಬರಬೇಡಿ, ನಿಮ್ಮನ್ನು ನೀವು, ನಿಮ್ಮ ಪರಿವಾರವನ್ನು, ನಿಮ್ಮ ಮಕ್ಕಳನ್ನು, ಹಿರಿಯರನ್ನು, ಸಂಕಷ್ಟಕ್ಕೆ ದೂಡಬೇಡಿ. ಲಸಿಕೆ ಬರುವವರೆಗೆ ಕೊರೋನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲು ಬಿಡಬಾರದು, ವರ್ಷಗಳ ಬಳಿಕ ಮಾನವತೆಯನ್ನು ಉಳಿಸಲು ಇಡೀ ವಿಶ್ವ ಒಂದಾಗಿ ಕೆಲಸ ನಡೆಯುತ್ತಿದೆ. ನಮ್ಮ ದೇಶವೂ ಕೆಲಸ ಮಾಡುತ್ತಿದೆ. ನಮ್ಮ ದೇಶದ ವಿಜ್ಞಾನಿಗಳು ಕೂಡ ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ. ನಮ್ಮ ದೇಶದಲ್ಲೂ ಲಸಿಕೆ ಸುಧಾರಣೆಯ ಹಂತದಲ್ಲಿದೆ. ಲಸಿಕೆ ಹೊರಬಂದಾಗ ಪ್ರತಿ ಭಾರತೀಯನಿಗೂ ಲಸಿಕೆ ಸಿಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಹಬ್ಬಗಳು ಸಂಭ್ರಮದ ಸಮಯ. ನಾವು ಜಾಗರೂಕತೆಯಿಂದ ಇದ್ದಾಗ ಮಾತ್ರ ಸಂಭ್ರಮ ಸದಾ ಉಳಿಯಲು ಸಾಧ್ಯ. ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ನಿಮ್ಮನ್ನು ನಾನು ಸುರಕ್ಷಿತವಾಗಿ ನೋಡಲು ಬಯಸುತ್ತೇನೆ. ಹಬ್ಬಗಳು ಉತ್ಸಾಹ ಮತ್ತು ಉಲ್ಲಾಸವನ್ನು ವೃದ್ಧಿಸಲಿ. ಮತ್ತೆ ಮತ್ತೆ ವಿನಂತಿ ಮಾಡುತ್ತೇನೆ, ಜಾಗರೂಕತೆಯಿಂದ ಇರಿ,ನಿಯಮ ಪಾಲಿಸಿ ಮತ್ತು ಇದಕ್ಕಾಗಿ ಜನಜಾಗೃತಿ ಅಭಿಯಾನ ಮಾಡಿ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.