ತಿರುವನಂತಪುರಂ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಏಳು ತಿಂಗಳ ಬಳಿಕ ಶುಕ್ರವಾರ ತೆರೆಯಲ್ಪಟ್ಟಿದೆ.
ಈ ಸಂದರ್ಭದಲ್ಲಿ ಐದು ದಿನಗಳ ಮಾಸಿಕ ಪೂಜೆ ಮತ್ತು ಭಕ್ತರಿಗೆ ದೇವರ ದರ್ಶನಕ್ಕೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಅವಕಾಶ ನೀಡಲಾಗಿದೆ. ನಿತ್ಯ 250 ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇಗುಲದ ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡವರಿಗಷ್ಟೇ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಪಂಬೆಯನ್ನು ತಲುಪುವ 48 ಗಂಟೆಗಳಿಗೂ ಮೊದಲು ಕೊರೋನಾ ಟೆಸ್ಟ್ ಮಾಡಿಸಿರುವ ವರದಿಯನ್ನು ಹೊಂದಿರುವಂತೆಯೂ ದೇವಸ್ವಂ ಮಂಡಳಿ ಭಕ್ತರಿಗೆ ಸೂಚಿಸಿದೆ.
ಫಿಟ್ನೆಸ್ ದಾಖಲೆ ಹೊಂದಿರುವ ಭಕ್ತರಿಗೆ ಪಂಬೆಯಿಂದ ದೇಗುಲಕ್ಕೆ ನಡೆದುಕೊಂಡು ತೆರಳುವುದಕ್ಕೂ ಅವಕಾಶ ನೀಡಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜೊತೆಗೆ ಭಕ್ತರು ಎತ್ತರದ ಬೆಟ್ಟ ಗುಡ್ಡ ಹತ್ತಬೇಕಾದ ಕಾರಣ ಮಾಸ್ಕ್ ಕಡ್ಡಾಯ ಮಾಡಿಲ್ಲ. ಉಸಿರಾಟದ ಸಮಸ್ಯೆ ಬಾಧಿಸದಂತೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. 10 ವರ್ಷದ ಒಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೆಟ್ಟ ಹತ್ತಲು ಅವಕಾಶವಿಲ್ಲ ಎಂದು ದೇವಸ್ವಂ ಮಂಡಳಿ ತಿಳಿಸಿದೆ.
ಭಕ್ತರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ ಎಂದೂ ಮಂಡಳಿ ಮಾಹಿತಿ ನೀಡಿದೆ. ಹಾಗೆಯೇ ಪಂಬೆಯಲ್ಲಿ ಸ್ನಾನ ಮಾಡಲು ಅವಕಾಶ ಇಲ್ಲ. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಡಶೇರಿಕರ ಮತ್ತು ಎರುಮೇಲಿ ಹಾದಿಗಳ ಮೂಲಕ ಮಾತ್ರವೇ ಶಬರಿಮಲೆಗೆ ತೆರಳಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಉಳಿದ ದಾರಿಗಳಲ್ಲಿ ಪ್ರವೇಶ ನಿರ್ಬಂಧ ಇದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಅಕ್ಟೋಬರ್ 21 ರಂದು ದೇವಾಲಯ ಮತ್ತೆ ಮುಚ್ಚಲಾಗುವುದಾಗಿಯೂ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.