ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಲಾವಿದರೊಬ್ಬರ ಕೈಚಳಕಕ್ಕೆ ತೆಂಗಿನ ಚಿಪ್ಪುಗಳು ಕಲೆಯ ಸೆಲೆಯಾಗಿ ಬದಲಾಗಿವೆ. ಉತ್ತರ ಕನ್ನಡದ ಕುಮಟಾದ ಮೂರೂರಿನ ಶಿವಮೂರ್ತಿ ಭಟ್ ಅವರು ಬಳಸಿ ಎಸೆಯುವ ತೆಂಗಿನ ಕಾಯಿ ಚಿಪ್ಪುಗಳನ್ನು ಬಳಸಿ ಅದರಿಂದ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದ್ದಾರೆ.
ತಂದೆ ಸೂರ್ಯನಾರಾಯಣ ಭಟ್ ಅವರಿಂದಲೇ ಪ್ರೇರಣೆ ಪಡೆದ ಶಿವಮೂರ್ತಿ ಅವರು ಬಾಲ್ಯದಿಂದಲೇ ತೆಂಗಿನ ಚಿಪ್ಪುಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಲು ಕಲಿತಿದ್ದಾರೆ. ಇವರ ಕೈಚಳಕದಿಂದ ಅದೆಷ್ಟೋ ತೆಂಗಿನ ಚಿಪ್ಪುಗಳು ಹೃನ್ಮನ ಸೆಳೆಯುವ ಕಲಾಕೃತಿಗಳಾಗಿ ಬದಲಾಗಿವೆ. ಆ ಮೂಲಕ ನೋಡುಗರನ್ನು ಆಕರ್ಷಿಸುತ್ತಿವೆ. ಇವರ ತಂದೆಯವರೂ ತೆಂಗಿನ ಚಿಪ್ಪಿನಿಂದ ಅನೇಕ ಬಗೆಯ ಮನಮೋಹಕ ಕಲಾಕೃತಿ ರಚಿಸಿ ಖ್ಯಾತಿ ಪಡೆದವರಾಗಿದ್ದಾರೆ. ಇದೀಗ ತಮ್ಮ ತಂದೆಯ ಹಾದಿಯಲ್ಲಿಯೇ ಶಿವಮೂರ್ತಿ ಅವರೂ ಸಾಧನೆ ಮೆರೆಯಲು ಮುಂದಾಗಿದ್ದಾರೆ.
ಕೇವಲ ಚಿಪ್ಪಿನಲ್ಲಿ ರೂಪ ನೀಡಲಾದ ಕಲಾಕೃತಿಗಳ ಜೊತೆಗೆ ಇವರ ಕಲಾಕೃತಿಗಳ ಸಂಗ್ರಹಾಲಯದಲ್ಲಿ ಮರದ ಬೇರನ್ನು ಬಳಸಿ ರೂಪ ನೀಡಲಾದ ಕಲಾಕೃತಿಗಳನ್ನು ಕಾಣಬಹುದಾಗಿದೆ. ಇವರ ಕಲಾಕೃತಿಗಳ ಸಂಗ್ರಹಾಲಯದಲ್ಲಿ ಇವರ ಕೈಚಳಕದಿಂದ ಜೀವ ಪಡೆದ ಸುಮಾರು 300 ಕ್ಕೂ ಅಧಿಕ ರಚನೆಗಳಿವೆ. ಗೃಹಾಲಂಕಾರಕ್ಕೆ ಬಳಸುವ ವಸ್ತುಗಳು, ಹಕ್ಕಿಗಳು, ಮನುಷ್ಯನ ಆಕೃತಿಗಳು ಸೇರಿದಂತೆ ಇನ್ನೂ ಅನೇಕ ರೀತಿಯ ನಿರುಪಯುಕ್ತ ಎನಿಸಿದ ತೆಂಗಿನ ಚಿಪ್ಪುಗಳ ಕಲಾಕೃತಿಗಳನ್ನು ನಾವು ಕಾಣಬಹುದಾಗಿದೆ.
ಮನಸ್ಸಿದ್ದರೆ ಮಾರ್ಗವಿದೆ. ಇತರರಿಗಿಂತ ಭಿನ್ನವಾಗಿ ನಾನೇನಾದರೂ ಮಾಡಬೇಕು ಎಂದು ಬಯಸುವವರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ಶಿವಮೂರ್ತಿ ಭಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.